ಬೆಳ್ಳಾರೆ: ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರತಿಷ್ಠತ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಗೌಡ ಕಾಮಧೇನು ಅವರನ್ನು ಆಂಬ್ಯುಲೆನ್ಸ್ ಸಹಿತ ಕೆಲವು ವಾಹನಗಳಲ್ಲಿ ಬಂದ ಅಪರಿಚಿತರ ತಂಡವೊಂದು ಬಲವಂತವಾಗಿ ಕರೆದೊಯ್ದ ಪ್ರಕರಣ ನಡೆದಿದ್ದು, ಆತನನ್ನು ಅಪಹರಿಸಲಾಗಿದೆ ಎಂದು ನವೀನ್ ತಾಯಿ ಆರೋಪಿಸಿದ್ದಾರೆ(Bellare) . ಈ ಅಂಬ್ಯುಲೆನ್ಸನ್ನು ಸಾರ್ವಜನಿಕರ ತಂಡವೊಂದು ಕೊಡಗಿನ ಶುಂಠಿಕೊಪ್ಪ ಬಳಿ ತಡೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದೆ ಎಂದು ತಿಳಿದು ಬಂದಿದೆ.
ಘಟನೆಯ ಸಂದರ್ಭದಲ್ಲಿ ನವೀನರ ತಾಯಿ ಮತ್ತು ಅತ್ತಿಗೆ ಪ್ರಜ್ಞಾ ಗಾಯಗೊಂಡಿದ್ದು, ಅವರಿಬ್ಬರೂ ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ನನ್ನನ್ನು ನನ್ನ ಅತ್ತೆ ( ದಿವ್ಯಪ್ರಭಾ ಗೌಡ ಚಿಲ್ತಡ್ಕ ) ಹಾಗೂ ಪತ್ನಿ ( ಸ್ಪಂದನಾ ಚಿಲ್ತಡ್ಕ) ರವರ ಚಿತಾವಣೆಯಂತೆ ಅಪಹರಿಸಲಾಗಿದೆ ಎಂದು ನವೀನ್ ಅವರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಡಿ.19ರಂದು ಮಧ್ಯಾಹ್ನ ಬೆಳ್ಳಾರೆಯಿಂದ ಹಿಂತಿರುಗಿದ ನವೀನ್ ತನ್ನ ಮನೆಯಂಗಳದಲ್ಲಿ ನಿಂತುಕೊಂಡಿರುವಾಗ ಅಂಬ್ಯುಲೆನ್ಸ್ನಲ್ಲಿ ಮತ್ತು ಇತರ ಕಾರುಗಳಲ್ಲಿ ಬಂದ ಕೆಲವರು ಅವರನ್ನು ಬಲಾತ್ಕಾರವಾಗಿ ಕಾರಿಗೆ ಕೂರಿಸಲು ಕೊಂಡೊಯ್ದರೆಂದೂ ಇದನ್ನು ಕಂಡ ತಾಯಿ ನೀರಜಾ ಮತ್ತು ಅತ್ತಿಗೆ ಪ್ರಜ್ಞಾ ತಡೆಯಲು ಬಂದರೆಂದು ಆ ಸಂದರ್ಭ ಅವರ ಮಧ್ಯೆ ಸಂಘರ್ಷ ನಡೆದು ಅಪರಿಚಿತರು ನವೀನರನ್ನು ವಾಹನದಲ್ಲಿ ಕೂರಿಸಿಕೊಂಡು ಹೋದರೆಂದೂ ಹೇಳಲಾಗುತ್ತಿದೆ.
ಆ ಬಳಿಕ ಘಟನೆಯಲ್ಲಿ ಗಾಯಗೊಂಡ ತಾಯಿ ನೀರಜಾ ಹಾಗೂ ಅಣ್ಣ ವಿನ್ಯಾಸ್ ಬೆಳ್ಳಾರೆ ಪೋಲೀಸರಿಗೆ ವಿಷಯ ತಿಳಿಸಿ, ಬಳಿಕ ಸುಳ್ಯ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆಂದು ತಿಳಿದು ಬಂದಿದೆ.
ಇತ್ತ ನವೀನರನ್ನು ಆಂಬ್ಯುಲೆನ್ಸ್ ನಲ್ಲಿ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಶುಂಠಿಕೊಪ್ಪ ಬಳಿ ಅಲ್ಲಿಯ ಆಂಬ್ಯುಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯುಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಅಲ್ಲಿಯ ಪೊಲೀಸರಿಗೊಪ್ಪಿಸುವುದಾಗಿ ಮಾಹಿತಿ ಲಭ್ಯವಾಗಿದೆ.
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ ನೀರಜಾಕ್ಷಿಯವರು ಮಾಧ್ಯಮಗಳ ಜತೆ ಮಾತನಾಡಿ, ಇಂದು ಮಧ್ಯಾಹ್ನ ಅಂಬ್ಯುಲೆನ್ಸ್ನಲ್ಲಿ ೭-೮ ಜನ ಬಂದು ನವೀನ್ ರವರನ್ನು ಅಪಹರಣ ಮಾಡಿದ್ದಾರೆ. ದಿವ್ಯ ಪ್ರಭಾ ,ಅವರ ಮಗ ಮತ್ತು ಮಗಳು ಸ್ಪಂದನಾ ರವರು ಕೂಡಾ ಬಂದಿದ್ದರು. ಅಪಹರಣಗಾರರು ನನ್ನ ಮತ್ತು ಸೊಸೆಯ ಮೇಲೆ ಹಲ್ಲೆ ಮಾಡಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆ ಗೆ ದೂರು ಕೊಡಲು ಬಂದಾಗ ದೂರು ಸ್ವೀಕರಿಸಲಿಲ್ಲ. ಅದಕ್ಕಾಗಿ ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಾಗಿ ಸುಳ್ಯ ಠಾಣೆಗೆ ದೂರು ಕೊಡಲು ಬಂದಿದ್ದೇವೆ. ಇತ್ತೀಚಿಗೆ ನಡೆದ ಘಟನೆ ಸಂಬಂಧಿಸಿ ನಿನ್ನೆ ಮನೆಯಲ್ಲಿ ಮಾತುಕತೆ ನಡೆದಿದೆ. ನವೀನ್ ಸ್ಪಂದನಾ ರವರರನ್ನು ಮನೆಗೆ ಹತ್ತಿಸಿಕೊಳ್ಳಲು ನಿರಾಕರಿಸಿದರಿಂದ ಸೇಡು ತೀರಿಸಿಕೊಳ್ಳಲು ಅಪಹರಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಾಮಧೇನು ಮಾಧವ ಗೌಡರವರಲ್ಲಿ ವಿಚಾರಿಸಿದಾಗ, ನವೀನನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ಅವನಿಗೆ ಡಿಹೈಡ್ರೇಷನ್ ಆದ ಕಾರಣ ನಾವೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದ್ದಾರೆ.
ನವೀನ್ ರನ್ನು ಬೆಂಗಳೂರಿನ ಆಸ್ಪತ್ರೆಗೆಂದು ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದೆವು. ಆ ಸಂದರ್ಭ ಅಂಬ್ಯುಲೆನ್ಸ್ ನ್ನು ತಡೆಯಲಾಗಿದೆ. ಯಾರು ಯಾವ ಉದ್ದೇಶಕ್ಕೆ ತಡೆದಿದ್ದಾರೆಂಬುದನ್ನು ತಿಳಿದುಕೊಂಡು ಮತ್ತೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ದಿವ್ಯಪ್ರಭಾ ಚಿಲ್ತಡ್ಕ ಪ್ರತಿಕ್ರಿಯಿಸಿದ್ದಾರೆ.
ಸುಂಟಿಕೊಪ್ಪದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನವೀನ್ , ಬೆಳ್ಳಾರೆ ಕ್ರೈಂ ಎಸೈ ಆನಂದರವರ ಜತೆ ನನ್ನ ಹೆಂಡತಿ ಲಾಡ್ಜ್ ನಲ್ಲಿದ್ದಾಗ ಆ . 2 ರಂದು ರೆಡ್ ಹ್ಯಾಂಡಾಗಿ ಹಿಡಿದ ನಾನು ಗಲಾಟೆ ಮಾಡಿದ್ದೆ. ಬಳಿಕ ಆಕೆಯನ್ನು ಮನೆಯಿಂದ ಹೊರಗಡೆ ಹಾಕಿದ್ದೆ. ಮತ್ತೆ ಮನೆಯೊಳಗೆ ಸೇರಿಸಲು ಹಲವು ಬಾರಿ ಪಂಚಾತಿಕೆ ನಡೆದಿತ್ತು. ನಿನ್ನೆಯೂ ಪಂಚಾತಿಕೆ ನಡೆದಿತ್ತು. ಆದರೆ ನಿನ್ನೆಯೂ ಯಾವುದೇ ಅಂತಿಮ ನಿರ್ಣಯಕ್ಕೆ ಬರಲಾಗಿರಲಿಲ್ಲ. ಆದರೇ ಪತ್ನಿ ಸ್ಪಂದನ ಮನೆಯೊಳಗೆ ಬರುತ್ತೇನೆಂದು ಹಠ ಹಿಡಿದಿದ್ದು ಮನೆಯ ಬಾಗಿಲ ಬಳಿ ಕೂತಿದ್ದಳು . ಆದರೇ ಮನೆ ಬಾಗಿಲು ತೆರೆಯದಂತೆ ನಾನು ತಿಳಿಸಿದ್ದೆ . ಹೀಗಾಗಿ ನನಗೂ ನಿನ್ನೆ ಮನೆಯೊಳಗಡೆ ಹೋಗಲು ಆಗಿರಲಿಲ್ಲ. ಹಾಗಾಗಿ ನಾನು ನಿನ್ನೆ ಸ್ನೇಹಿತರ ಮನೆಯಲ್ಲಿ ಮಲಗಿದ್ದೇನೆ ಎಂದು ನವೀನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇವತ್ತು ಬೆಳಿಗ್ಗೆ ಬರುವಾಗ ಮನೆಯಲ್ಲಿಯೆ ಇದ್ದರು. ನಾನು ಹಟ್ಟಿಗೆ ಹೋಗಿ ಹಾಲು ಕರೆದು ಬಂದು ಮನೆಯ ಹೊರಗೆ ಇದ್ದ ಡ್ರೆಸ್ಸನ್ನು ಹಾಕಿಕೊಂಡು ಸ್ಕೂಟಿಯಲ್ಲಿ ಹೋದೆ. ಅಂಗಡಿಯ ಕೀ ಮನೆಯ ಒಳಗಿತ್ತು. ಆದರಿಂದ ಶಾಪ್ ಓಪನ್ ಮಾಡಲು ಆಗಲಿಲ್ಲ.
ಇವತ್ತು ಅಪ್ಪ( ಮಾಧವ ಗೌಡ ಬೆಳ್ಳಾರೆ) ಸೊಸೆಯನ್ನು ಮನೆಯೊಳಗೆ ಸೇರಿಸಲು ಮನೆಯ ಬಾಗಿಲು ಮುರಿಯಲು ಮರದ ಕೆಲಸಗಾರರನ್ನು ಕರೆದುಕೊಂಡು ಬರುವುದಾಗಿ ಮಾಹಿತಿ ಸಿಕ್ಕಿತ್ತು. ಇದನ್ನು ನೋಡಿ ವಿಚಾರಿಸಲು ಬಂದಾಗ ಗೇಟ್ ಹತ್ತಿರ ಆಂಬ್ಯುಲೆನ್ಸ್ ನವರು ನನ್ನನ್ನು ಹಿಡಿದು ಗಾಡಿಯಲ್ಲಿ ಕರೆದುಕೊಂಡು ಹೋದರು. ಇಂಜೆಕ್ಷನ್ ಕೊಟ್ರು.
ಬಂದು ನೋಡಿ ಹೋದ್ರು. ಇದೆಲ್ಲ ಸೆಟ್ಟಿಂಗ್ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ವರದಿ ಸಿದ್ದಗೊಳ್ಳುತ್ತಿರುವಾಗ ಸಿಕ್ಕ ಮಾಹಿತಿ ಪ್ರಕಾರ “ಪ್ರಕರಣಕ್ಕೆ ಸಂಬಂಧಿಸಿ, ಸುಂಟಿಕೊಪ್ಪ ಠಾಣೆಯಲ್ಲಿ ಮಾತುಕತೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ”.
ಸಂಜೆ ವೇಳೆಗೆ ನವೀನ್ ಅವರ ತಂದೆ , ಪತ್ನಿ, ಮಾವ ಮತ್ತಿತರರು ಅಲ್ಲಿಗೆ ತೆರಳಿದ್ದು ನವೀನ್ ಪರವಾಗಿ ಅವರ ಕೆಲವು ಮಿತ್ರರು ಕೂಡ ಅಲ್ಲಿಗೆ ಹೋಗಿದ್ದಾರೆಂದು ತಿಳಿದುಬಂದಿದೆ.