ಮಂಗಳೂರು: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆ ಉಳಿವಿಗಾಗಿ (Darmasthala) ಸುತ್ತಮುತ್ತ ಖಾಸಗಿ ಹೊಟೇಲ್ , ಬಾರ್ ಗಳಿಗೆ ಅವಕಾಶ ನೀಡಬೇಡಿ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಗೆ ಧರ್ಮಸ್ಥಳದ ಧರ್ಮಾಧಿಕಾರಿ , ರಾಜ್ಯಸಭಾ ಸದಸ್ಯರಾದ ಡಾ.ಡಿ ವೀರೇಂದ್ರ ಹೆಗ್ಗಡೆ ನೇರ ಮನವಿ ಮಾಡಿದರು.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಧರ್ಮಾಧಿಕಾರಿಗಳು, ತೀರ್ಥ ಮತ್ತು ಕ್ಷೇತ್ರ ಎರಡು ಪವಿತ್ರವಾಗಿರಬೇಕು ಎಂದರು. ಧರ್ಮಸ್ಥಳದ ಆದಷ್ಟು ಪಾವಿತ್ರ್ಯತೆ ಮತ್ತು ಸ್ವಚ್ಚತೆಯನ್ನು ಕಾಯ್ದುಕೊಂಡಿದ್ದೇವೆ, ಈಗಾಗಲೇ ಹಲವು ಸ್ನಾನಗೃಹಗಳು ಸ್ನಾನಘಟ್ಟಗಳು ಇಲ್ಲಿವೆ ಎಂದರು.
ಸಚಿವ ಆನಂದ್ ಸಿಂಗ್ ಅವರು ಅವರ ತಂದೆಯ ಜೊತೆಯೇ ಕ್ಷೇತ್ರಕ್ಕೆ ಆಗಮಿಸುತಿದ್ದರು. ಉದ್ಯಮಿಯಾಗಿ ಸಚಿವರಾಗಿ ಉನ್ನತ ಸ್ಥಾನಕ್ಕೆ ಏರಿದ್ದಾರೆ, ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಕ್ಕೆ ಆನಂದ್ ಸಿಂಗ್ ಎರಡು ಆನೆ ಮರಿಗಳನ್ನು ದಾನ ಮಾಡಿದ್ದಾರೆ . ಅದಕ್ಕೆ ಅವರ ಮಕ್ಕಳ ಹೆಸರಾದ ಲಕ್ಷ್ಮೀ ಮತ್ತು ಯಶಸ್ವಿನಿ ಇಟ್ಟಿದ್ದೇವೆ ಎಂದರು. ಧರ್ಮಸ್ಥಳದ ಆನೆ ಲಕ್ಷೀ ಮರಿ ಇಟ್ಟಿದೆ ನಾನು ಆಗಾಗ ಹೇಳುತ್ತಿದ್ದೆ ನಿಮ್ಮ ಮೊಮ್ಮಗಳನ್ನು ನೋಡಲು ಬನ್ನಿ ಎಂದು ಎನ್ನುತ್ತಾ ನಕ್ಕರು.
ಧರ್ಮಸ್ಥಳದ ಪಾವಿತ್ರ್ಯತೆಗಾಗಿ ಮೂರು ನದಿಗಳ ಒಳ ಪ್ರದೇಶದಲ್ಲಿ ಖಾಸಗಿ ಹೊಟೇಲ್ , ಬಾರ್ ಗೆ ಅನುಮತಿ ನೀಡದಂತೆ ಸರ್ಕಾರ ಆಜ್ಞೆ ಹೊರಡಿಸಬೇಕು ಎಂದು ಸಚಿವರಲ್ಲಿ ಕೇಳಿಕೊಂಡರು.
ಸಚಿವ ಆನಂದ್ ಸಿಂಗ್ ಮಾತನಾಡಿ , ಹಂಪಿ ಪ್ರಾಧಿಕಾರದಂತೆ ಸಣ್ಣ ಮಟ್ಟದಲ್ಲಿ ಧರ್ಮಸ್ಥಳ ಪ್ರಾಧಿಕಾರ ರಚಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.
ಆ ಪ್ರಾಧಿಕಾರದ ಪರವಣಿಗೆ ಇಲ್ಲದೇ ಯಾವೂದೇ ಖಾಸಗಿ ಕಟ್ಟಡ ಕಟ್ಟದಂತೆ ನಿಯಮ ಜಾರಿಗೊಳಿಸುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರವಿ ಕುಮಾರ್, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹಾಗೂ ಹಲವು ಪ್ರಮುಖರು ಉಪಸ್ಥಿತರಿದ್ದರು.