ಬೆಳ್ತಂಗಡಿ: ಮುಜಾರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯದಲ್ಲಿ ರಾಜಕೀಯ ನಡೆಯುತ್ತಿದೆ. 5 ಶಾಸಕರನ್ನು ನೋಡಿದ್ದೇನೆ ಈ ತರಹ ದೇವಸ್ಥಾನದಲ್ಲಿ ರಾಜಕೀಯ ಮಾಡಿದ ಶಾಸಕನ ನೋಡಿಲ್ಲ, ಮುಂದೆ ಬೆಳ್ತಂಗಡಿ (Belthangady) ತಾಲೂಕಿನ ಯಾವಾ ದೇವಸ್ಥಾನಗಳಲ್ಲಿಯೂ ಈ ರೀತಿ ಆಗಬಾರದು ಎಂದು ಹಿಂದೂ ಹಿತರಕ್ಷಣಾ ವೇದಿಕೆ ವೇಣೂರಿನ ಅಧ್ಯಕ್ಷ ಹಾಗೂ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ಹೇಳಿದರು.
ಅವರು ಡಿ.14ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಪ್ರಕರಣವನ್ನು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಲ್ಲೂ ಹೇಳುವಾಗಿಲ್ಲ, ಅದಕ್ಕೆ ನಾಲ್ಕನೇ ಸ್ಥಾನದಲ್ಲಿರುವ ಮಾಧ್ಯಮ ದ ಮುಂದೆ ಬಂದಿದ್ದೇನೆ ಎಂದು ಹೇಳಿದ ಜಯರಾಮ ಶೆಟ್ರು, ನಾನು 32 ವರ್ಷಗಳಿಂದ ವೇಣೂರು ದೇವಸ್ಥಾನದಲ್ಲಿ ಆಡಳಿತ ಮಂಡಳಿಯ ಮೊಕ್ತೇಸರನಾಗಿ ಕಾರ್ಯನಿರ್ವಹಿಸಿದ್ದೇನೆ. ಕರಿಮಣೇಲು ಗ್ರಾಮದ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದ್ದು, ದೇವಸ್ಥಾನದ ಅಂಗಣಕ್ಕೆ ಇಂಟರ್ಲಾಕ್ ಅಳವಡಿಕೆ ಮಾಡುವ ಬಗ್ಗೆ ನಾವು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಕಾರ್ಯದರ್ಶಿಯವರು ಸೇರಿ 5 ಜನ ರಕ್ಷಿತ್ ಶಿವರಾಮ್ ಅವರ ಮನೆಗೆ ಹೋಗಿ ಕೇಳಿಕೊಂಡ ಮೇರೆಗೆ ಅವರು ಒಪ್ಪಿಕೊಂಡಿದ್ದರು. ಅಲ್ಲದೆ ವೇಣೂರುನ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ಆ ಸಂದರ್ಭ ಇಂಟರ್ಲಾಕ್ಗೆ ವ್ಯವಸ್ಥೆ ಮಾಡಿರುವುದನ್ನು ತಿಳಿಸಿದ್ದರು.
ಇದನ್ನು ದೇವಸ್ಥಾನದ ಸಮಿತಿಯವರು ಶಾಸಕರಲ್ಲಿ ಹೇಳಿದಾಗ ಅವರದು ಬೇಡ, ಅವರ ಹೆಸರೂ ಹಾಕಬಾರದು ತಾನು ಇಂಟರ್ಲಾಕ್ ಹಾಕುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದು, ಇದರಿಂದ ನಮಗೆ ಬಹಳಷ್ಟು ಬೇಸರವಾಗಿದೆ. ಮತ್ತೆ ರಕ್ಷಿತ್ ಅವರಿಗೆ ವಿಷಯ ತಿಳಿಸಿದಾಗ ಅವರು ಪರವಾಗಿಲ್ಲ, ಬೇರೆ ಕಾರ್ಯಕ್ರಮಕ್ಕೆ ಸಹಕಾರ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಶಾಸಕರು ಮಾಡಿರುವುದು ಅನ್ಯಾಯ ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡಬಾರದು, ಅವರನ್ನು ಕರೆಯಬಾರದು ಎಂದು ತಾಕೀತು ಮಾಡುವುದು ಸರಿಯಲ್ಲ, ಎಲ್ಲಾ ಭಕ್ತರಿಗೂ ಅಭಿವೃದ್ಧಿಯಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ನಾನು 5 ಶಾಸಕರನ್ನು ನೋಡಿದ್ದೇನೆ ಅವರ್ಯಾರು ಈ ತರಹ ಮಾಡಿದ್ದು ನೋಡಿಲ್ಲ ಎಂದರು. ಬಿಜೆಪಿಯ ಪ್ರಭಾಕರ ಬಂಗೇರರು, ಕಾಂಗ್ರೇಸ್ ನ ವಸಂತ ಬಂಗೇರರು ದೇವಸ್ಥಾನಗಳಲ್ಲಿ ಅವ ಬರಬಾರದು ಇವ ಬರಬಾರದು ಎಂದು ಹೇಳಿದ್ದು ಕೇಳಿಲ್ಲ ಎಂದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆಯವರು ಮಾತನಾಡಿ, ದೇವಸ್ಥಾನಗಳಲ್ಲಿ ಜಾತಿ ಮತ್ತು ರಾಜಿಕೀಯ ಇರಬಾರದು. ಮನಸ್ಸು ಶುದ್ಧವಾಗಿರಬೇಕು, ದೇವಸ್ಥಾನದ ಅಭಿವೃದ್ಧಿಗೆ ದಾನಿಗಳು ನೀಡುವ ಕೊಡುಗೆಯನ್ನು ಬೇಡ ಎಂದು ಹೇಳುವುದು ಸರಿಯಲ್ಲ, ಯಾರನ್ನೂ ದ್ವೇಷಿಸುವ ಕಾರ್ಯಕ್ರಮವಾಗಬಾರದು ಎಂದು ಸಲಹೆ ನೀಡಿದರು.
ಈ ಹಿಂದೆ ವೇಣೂರು ಸಮೀಪದ ಮುದ್ದಾಡಿ ದೈವಸ್ಥಾನವೊಂದರ ಕಾರ್ಯಕ್ರಮಕ್ಕೆ ರಕ್ಷಿತ್ ಶಿವರಾಮ್ ಬರಬಾರದೆಂದು ಶಾಸಕರು ಹೇಳಿದರೂ ನಾವು ಅವರನ್ನು ಕರೆದು ವೇದಿಕೆಗೆ ಹತ್ತಿಸಿ ಭಾಷಣ ಮಾಡಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಉಪಾಧ್ಯಕ್ಷರಾದ ದೇಜಪ್ಪ ಶೆಟ್ಟಿ, ಸತೀಶ್ ಹೆಗ್ಡೆ, ಕೋಶಾಧಿಕಾರಿ ಗಣೇಶ್ ಪೂಜಾರಿ, ಸದಸ್ಯರಾದ ಅರವಿಂದ ಶೆಟ್ಟಿ ಖಂಡಿಗ, ದಯಾನಂದ ದೇವಾಡಿಗ ಉಪಸ್ಥಿತರಿದ್ದರು.