Comman Man CM :ಶಿಮ್ಲಾ : ಡಿ 11 : ವ್ಯಕ್ತಿಯೊಬ್ಬನ ರಾಜಕೀಯ ಸಾಧನೆಯ ಉತ್ಕರ್ಷ ವನ್ನು ಉಲ್ಲೇಖಿಸ ಹೊರಟರೇ, ಅದರಲ್ಲಿ ಖಂಡಿತವಾಗಿಯೂ ದೇವ ಭೂಮಿ ಹಿಮಾಚಲ ಪ್ರದೇಶದ 15 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸುಖ್ವಿಂದರ್ ಸಿಂಗ್ ಸುಖು (sukhwinder singh sukhu) ಅವರ ರಾಜಕೀಯ ಜೀವನಗಾಥೆಯೂ ಸೇರುತ್ತದೆ. ಒಬ್ಬ ಬಸ್ಸು ಚಾಲಕನ ಮಗನಾಗಿ, ಅತೀ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಸಾಮಾನ್ಯ ಕಾರ್ಯಕರ್ತನ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರವೇಶಿಸಿ, ಬಳಿಕದ ದಿನಗಳಲ್ಲಿ ಸ್ಥಳೀಯಾಡಳಿತದ ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿ ಗೆದ್ದು, ರಾಜಕೀಯದ ವಿವಿಧ ಸ್ತರಗಳನ್ನು ಹಂತ ಹಂತವಾಗಿ ದಾಟಿ ಇಂದು ರಾಜ್ಯದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವುದು ಸುಲಭ ಸಾದನೆಯಲ್ಲ.ಅಂತಹದೊಂದು ಅತ್ಯಧ್ಬುತ ಸಾಧನೆಗೆ ಸುಖು ಅವರು ಕಾರಣಿಭೂತರಾಗಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನ ಹೈಕಮಾಂಡ್ ಎಂದೆ ಕರೆಯಿಸಿಕೊಳ್ಳುವ , ಆರು ಬಾರಿಯ ಮುಖ್ಯಮಂತ್ರಿಯಾಗಿದ್ದ , ದಿ. ವೀರಭದ್ರ ಸಿಂಗ್ ಅವರ ಕುಟುಂಬದ ಪ್ರಭಲ ವಿರೋಧವನ್ನು ಹತ್ತಿಕ್ಕಿ ಈ ಹುದ್ದೆ ಏರಿರುವುದು ಅವರ ರಾಜಕೀಯ ಪಟುತ್ವಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯ ಕುಟುಂಬದಿಂದ ಬಂದು ಇಂತಹ ಸಾಧನೆ ಮಾಡಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಇವರು ಒಬ್ಬರು ಎನಿಸಿಕೊಂಡಿದ್ದಾರೆ.
58ರ ಹರೆಯದ ಸ್ವಂತ ಪರಿಶ್ರಮದಿಂದ ಸಾದನೆಯ ಉತ್ತುಂಗ ಏರಿದ ನಾಯಕ ಸುಖು 1981 ರಲ್ಲಿ ಶಿಮ್ಲಾದ ಸರ್ಕಾರಿ ಪದವಿ ಕಾಲೇಜಿನಲ್ಲಿ 11 ನೇ ತರಗತಿಯಲ್ಲಿ ಕ್ಲಾಸ್ ಲೀಡರ್ ಆಗಿ ಆಯ್ಕೆಯಾಗುವ ಮೂಲಕ ಗೆಲುವಿನ ಅಭಿಯಾನ ಆರಂಭಿಸಿದ್ದು ಆ ಬಳಿಕ ರಾಜಕೀಯ ಬದುಕಿನಲ್ಲಿ ಹಿಂತಿರುಗಿ ನೋಡಿಲ್ಲ.
ಸುಖು ಅವರು 1989 ರಲ್ಲಿ NSUI ನ ರಾಜ್ಯ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡರು, 1998-2008 ರವರೆಗೆ ಯೂತ್ ಕಾಂಗ್ರೆಸ್ ನ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದರು, ವಿಧಾನ ಸಭೆಗೆ ಪ್ರವೇಶಿಸುವ ಮೊದಲು 1992-2002 ರವರೆಗೆ ಎರಡು ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾದರು. 2003 ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸುವ ಮೊದಲು, ರಾಜ್ಯ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರಾಗಿದ್ದರು (2013-2019). ಕಳೆದ ಬಾರಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದರು ಮತ್ತು ಈಗ ಮುಖ್ಯಮಂತ್ರಿ!

ಮಾರ್ಚ್ 27, 1964 ರಂದು ಹಮೀಪ್ನ ನಾದೌನ್ನ ಭವರ್ನಾ ಗ್ರಾಮದಲ್ಲಿ ಸುಖ್ ಜನಿಸಿದರು. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಿಂದ ಕಾನೂನು ಅಧ್ಯಯನ ಮಾಡಿದರು. ಅವರ ತಂದೆ ರಸಿಲ್ ಸಿಂಗ್ ಬಸ್ಸು ಚಾಲಕರಾಗಿದ್ದರು. ಮನೆಯ ಅರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲದಿದ್ದರಿಂದ ವಿದ್ಯಾರ್ಥಿಯಾಗಿದ್ದಾಗ, ಅವರು ತಮ್ಮ ಸಣ್ಣ ಪುಟ್ಟ ಅಗತ್ಯಗಳಿಗಾಗಿ ಪಾರ್ಟ್ ಟೈಮ್ ಕೆಲಸಗಳನ್ನು ಮಾಡುತ್ತಿದ್ದರು.
ತಾನು ನಿರ್ವಹಿಸುವ ಕಾರ್ಯಗಳನ್ನು ದೃಢನಿಶ್ಚಯದೊಂದಿಗೆ ಮಾಡುತ್ತಿದ್ದರು. ವಿವಾದ ರಹಿತ ವ್ಯಕ್ತಿತ್ವವನ್ನು ತನ್ನದಾಗಿಸಿಕೊಂಡಿದ್ದ ಸುಖ್ ಒಬ್ಬ ಚಾಣಕ್ಯ ರಾಜಕಾರಣಿಯಾಗಿದ್ದರು. ತನ್ನ ರಾಜಕೀಯ ನಡೆ ಹಾಗೂ ಜನ ಸಂಪರ್ಕದ ರೀತಿಯಿಂದ ಅವರು ಜನರು ಮತ್ತು ಪಕ್ಷದ ಕಾರ್ಯಕರ್ತರ ಒಲವನ್ನು ಬಹು ಬೇಗ ಸಂಪಾದಿಸ ತೊಡಗಿದರು.
ರಾಹುಲ್ ಗಾಂದಿಯವರ ನೀಲಿ ಕಣ್ಣಿನ ಹುಡುಗನಾಗಿದ್ದ ಸುಖ್ ಅವರು ಗಾಂಧಿ ಕುಟುಂಬದ ಇತರರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಸುಖ್ ಅವರು ರಾಜ್ಯದ ಆರು ಬಾರಿ ಮುಖ್ಯಮಂತ್ರಿಯಾಗಿದ್ದ ಹಾಗೂ ಕಾಂಗ್ರೆಸಿನ ಹಿರಿಯ ಮೂಖಂಡ ದಿ. ವೀರಭದ್ರ ಸಿಂಗ್ ಅವರ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. ವೀರ ಭದ್ರ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ವರ್ಷಗಳ ಕಾಲ ಸುಖ್ ಅವರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಅವರಿಬ್ಬರ ಸಂಬಂಧ ಸುಮಧುರವಾಗಿರಲಿಲ್ಲ.
ವೀರಭದ್ರ ಸಿಂಗ್ ಅವರ ಜತೆಗಿನ ತಿಕ್ಕಾಟದ ಬಗ್ಗೆ ಸುಖ್ ಅವರು ಕಳೆದ ಮಾರ್ಚ್ ನಲ್ಲಿ ಅಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. “ನಾನು ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ನಮ್ಮ ನಡುವಿನ ಭಿನ್ನಾಭಿಪ್ರಾಯ ವಿಷಯಾಧಾರಿತವಾಗಿತ್ತು – ನಾನು ವೀರಭದ್ರ ಸಿಂಗ್ ಅವರ ಹಲವು ವಿಚಾರಗಳನ್ನು ಬೆಂಬಲಿಸಿದ್ದೇನೆ ಹಾಗೂ ಕೆಲವು ವಿಷಯಗಳನ್ನು ಬೆಂಬಲಿಸಿದ್ದೇನೆ . ಎಂದು ಸುಖು ಅವರು ಆ ಸಂದರ್ಶನದಲ್ಲಿ ಹೇಳಿದ್ದರು.
ಸುಖ್ ಅವರ ಪತ್ನಿ ಕಮಲೇಶ್ ಗೃಹಿಣಿಯಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ದೆಹಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮೊದಲ ಬಾರಿ ಉಪ ಮುಖ್ಯಮಂತ್ರಿ

ರಾಜಕೀಯಕ್ಕೆ ಪ್ರವೇಶಕ್ಕೆ ಮೊದಲು ಪತ್ರಕರ್ತರಾಗಿದ್ದ ಐದು ಬಾರಿಯ ಶಾಸಕ ಮುಖೇಶ್ ಅಗ್ನಿಹೋತ್ರಿ ಅವರನ್ನು ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ದೇವ ಭೂಮಿಯೂ ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯನ್ನು ಕಾಣಲಿದೆ. ಇವರ ರಾಜಕೀಯ ಗುರು ದಿ . ವೀರಭದ್ರ ಸಿಂಗ್.
ಅಗ್ನಿಹೋತ್ರಿ ಅವರು 2003 ರಲ್ಲಿ ಉನಾ ಜಿಲ್ಲೆಯ ಸಂತೋಕ್ ಘರ್ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು 2007 ರಲ್ಲಿ ಕ್ಷೇತ್ರದಿಂದ ಪುನರಾಯ್ಕೆಯಾದರು. ಅವರು 2012, 2017, 2022 ರ ಚುನಾವಣೆಯಲ್ಲಿ ಹರೋಲಿಯಿಂದ ಗೆದ್ದರು, ಇದು ಗಡಿರೇಖೆಗೆ ಮೊದಲು ಸಂತೋಖ್ಘರ್ ಎಂದು ಕರೆಯಲ್ಪಡುತ್ತಿತ್ತು.
ವಂಶವಾದ ರಾಜಕಾರಣಕ್ಕೆ ಮಣೆಯಿಲ್ಲ

ಈಗಿನ ಹಿಮಾಚಲ ಪ್ರದೇಶದ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷೆ ದಿ . ವೀರಭದ್ರಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರು ಮುಖಮಂತ್ರಿ ಹುದ್ದೆಗೆ ಪ್ರಭಲ ಆಕಾಂಕ್ಷಿಯಾಗಿದ್ದರು. ತನಗೆ ಮುಖ್ಯಮಂತ್ರಿ ಹುದ್ದೆ ಕೈ ತಪ್ಪುತ್ತದೆ ಎಂದು ಗೊತ್ತಾದಗ, ಕಾಂಗ್ರೇಸ್ ವೀಕ್ಷಕರು ರಾಜ್ಯಕ್ಕೆ ಆಗಮಿಸಿದ ವೇಳೆ ತನ್ನ ಬೆಂಬಲಿಗರಿಂದ ಘೋಷಣೆಗಳನ್ನು ಕೂಗಿಸಿ ಅವರ ಕಾರುಗಳಿಗೆ ಘೇರಾವು ಹಾಕಿಸುವ ಕಾರ್ಯವನ್ನು ಪರೋಕ್ಷವಾಗಿ ಮಾಡಿಸಿದ್ದರು. ಇನ್ನು ತನಗೆ ಸಿಎಂ ಕೈ ತಪ್ಪಿದೆ ಎಂದು ಅರಿವಾದಗ ತನ್ನ ಶಾಸಕ ಪುತ್ರನನ್ನು ಡೆಪ್ಯೂಟಿ ಸಿಎಂ ಮಾಡಬೇಕು ಎಂದು ಆಗ್ರಹಿಸಿದರು . ಆದರೇ ಇವರಿಬ್ಬರಿಗೆ ಪಕ್ಷದ ಉನ್ನತ ಹುದ್ದೆ ಕೊಟ್ಟರೆ, ವಂಶವಾದ ರಾಜಕಾರಣದ ಆರೋಪ ಕೇಳಿ ಬರಬಹುದು ಎಂದು ಆಲೋಚಿಸಿದ ಕಾಂಗ್ರೆಸ್ ಹೈಕಮಾಂಡ್ ಎಲ್ಲ ಶಾಸಕರ ಅಭಿಪ್ರಾಯ ಪಡೆದು ಸರ್ವ ಸಮ್ಮತಿಯಿಂದ ಸುಖು ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದೆ