ಮಂಗಳೂರು: ಪಂಪ್ ವೆಲ್ ಬಸ್ ನಿಲ್ದಾಣ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ನ.26 ರಂದು ಶಿವರಾಜ್ ಎಂಬವರಿಗೆ ನೋಟಿನ ಬಂಡಲ್ ಗಳು ಸಿಕ್ಕಿದ್ದರ ಬಗ್ಗೆ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ (Mangalore).
ಘಟನೆ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಹಣ ಕಳೆದುಕೊಂಡವರಿದ್ದರೆ ತಕ್ಷಣ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ. ಈ ಬಗ್ಗೆ ಮಾತನಾಡಿದ ಕಮಿಷನರ್ ಶಶಿಕುಮಾರ್, ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪ್ವೆಲ್ ನಲ್ಲಿ ಘಟನೆ ನಡೆದಿದೆ. ಹಣ ಸಿಕ್ಕಿದ ಶಿವರಾಜ್ ಗಾಡಿ ಕ್ಲೀನ್, ಮೆಕಾನಿಕ್ ಕೆಲಸ ಮಾಡಿಕೊಂಡಿದ್ದರು. ಕುಡಿದು ಮಲಗೋದು ಆತನ ದಿನ ನಿತ್ಯದ ಕೆಲಸವಾಗಿದೆ. ನ.26 ರಂದು ಬಾಕ್ಸ್ ಮತ್ತು ಕವರ್ ನಲ್ಲಿ ಶಿವರಾಜ್ ಗೆ ಹಣ ಸಿಕ್ಕಿದೆ.
ಸ್ಪಷ್ಟವಾಗಿ ಅದರಲ್ಲಿ ಎಷ್ಟು ಹಣ ಇತ್ತು ಅಂತ ಅತನಿಗೆ ಗೊತ್ತಿಲ್ಲ. ಹಣ ಸಿಕ್ಕಿದ ಸಂದರ್ಭದಲ್ಲಿ ಶಿವರಾಜ್, ತುಕರಾಮ್ ಎಂಬುವವರಿಗೆ 50 ಸಾವಿರದ ಆರು ಕಟ್ಟು ಹಣ ನೀಡಿದ್ದಾನೆ. ಅಂದರೆ ತುಕರಾಮ್ ಗೆ ಮೂರು ಲಕ್ಷ ರೂಪಾಯಿ ನೀಡಿದ್ದಾನೆ. ಆ ಹಣದಲ್ಲಿ ತುಕರಾಮ್ 500 ರೂಪಾಯಿ ಮಾತ್ರ ಉಪಯೋಗಿಸಿದ್ದಾನೆ. ಮಾಧ್ಯಮಗಳಲ್ಲಿ ಹಣ ಸಿಕ್ಕಿದ ವಿಚಾರ ಗೊತ್ತಾಗಿ ತುಕರಾಮ್ ಆ ಹಣವನ್ನು ಮತ್ತೆ ಠಾಣೆಗೆ ನೀಡಿದ್ದಾರೆ ಎಂದು ತಿಳಿಸಿದರು.
ತುಕರಾಮ್ ಮತ್ತು ಆತನ ಮನೆಯವರು 2 ಲಕ್ಷದ 99 ಸಾವಿರದ 500 ರೂಪಾಯಿ ನೀಡಿದ್ದಾರೆ. ಶಿವರಾಜ್ ನೀಡಿದ ಹಣದಲ್ಲಿ 500 ರೂಪಾಯಿಯನ್ನು ತುಕರಾಮ್ ಖರ್ಚು ಮಾಡಿದ್ದಾರೆ. ಪೊಲೀಸರು ಆ ದಿನ ಶಿವರಾಜ್ ನನ್ನು ಪರಿಶೀಲನೆ ಮಾಡಿದಾಗ 49,500 ರೂಪಾಯಿ ಹಣ ಸಿಕ್ಕಿದೆ. ಸದ್ಯ ಮೂರೂವರೆ ಲಕ್ಷ ರೂಪಾಯಿ ಹಣವನ್ನು ಸುಪರ್ದಿಗೆ ಪಡೆದಿದ್ದೇವೆ. ಘಟನಾ ಸ್ಥಳದ ಸಿಸಿ ಟಿವಿ ಫೂಟೇಜ್ ನ್ನು ಪರಿಶೀಲನೆ ಮಾಡುತ್ತಿದ್ದೇವೆ.
ಹಣ ಕಳೆದುಕೊಂಡವರು ಪೊಲೀಸ್ ಠಾಣೆಗೆ ಬಂದು ತಮ್ಮದೇ ಹಣ ಅಂತಾ ಸಾಬೀತು ಮಾಡಬೇಕು. ಶಿವರಾಜ್ ನಿಂದ ಹಣ ಎತ್ತಿಕೊಂಡು ಹೋದವರು ಇದ್ದಲ್ಲಿ ಠಾಣೆಗೆ ಬಂದು ಹಣ ಕೊಡಬೇಕು. ಶಿವರಾಜ್ ಮತ್ತು ತುಕರಾಮ್ ಮೇಲೆ ಪ್ರಕರಣ ದಾಖಲಾಗೋದಿಲ್ಲ. ಯಾರಾದರೂ ಕೊಂಡು ಹೋಗಿ ಮತ್ತೆ ಕೊಡದಿದ್ದರೂ ಪ್ರಕರಣ ದಾಖಲು ಮಾಡುತ್ತೇವೆ. ಪೊಲೀಸರು ಆ ದಿನ ಡೈರಿ ಎಂಟ್ರಿ ಮಾಡಿಕೊಂಡಿದ್ದಾರೆ ಅಷ್ಟೇ.
ವಾರಸುದಾರರು ಬಂದ ಸಂದರ್ಭದಲ್ಲಿ ಹಿಂದಿರುಗಿಸಬಹುದು. ಯಾರಾದರೂ ಬಂದ್ರೆ ಅಲ್ಲೇ ಕೊಡೋಣ ಅಂತಾ ಪೊಲೀಸರು ಠಾಣೆಯಲ್ಲಿ ಹಣ ಇಟ್ಟಿದ್ದಾರೆ.ಹೀಗಾಗಿ ಹಣ ಕಳೆದುಕೊಂಡವರು ಇದ್ದರೆ ಮುಂದೆ ಬನ್ನಿ. ಪೊಲೀಸರು ತಡವಾಗಿ ಪ್ರಕರಣ ದಾಖಲು ಮಾಡಿದ ಬಗ್ಗೆ ವರದಿ ತರಿಸುತ್ತೇನೆ. ಈ ವಿಚಾರದಲ್ಲಿ 75KP ಆಕ್ಟ್ ನಡಿ ವಾರಸುದಾರರಿಲ್ಲದ ಹಣದ ಪ್ರಕರಣ ಮಾಡಿದ್ದೇವೆ ಎಂದು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.