ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಸನಿಧಾನದಲ್ಲಿ ಅಂಚೆ ಪ್ರಸಾದ ವಿತರಣೆ ಪುನರಾರಂಭಗೊಂಡಿದ್ದು, ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ನಿಗದಿತ ಹಣ ಪಾವತಿಸಿದರೆ, ಏಳು ದಿನಗಳೊಳಗೆ ಅರವಣ ಪ್ರಸಾದ ಮನೆ ಬಾಗಿಲಿಗೆ ತಲುಪಲಿದೆ
ಆನ್ಲೈನ್ ಪ್ರಸಾದ ವಿತರಣೆ ವ್ಯವಸ್ಥೆಯಲ್ಲಿ ಮೂರು ವಿಧದಲ್ಲಿದೆ. 520 ರೂ.ಕಿಟ್ನಲ್ಲಿ ಒಂದು ಅರವಣ, 960 ರೂ.ಕಿಟ್ನಲ್ಲಿ ನಾಲ್ಕು ಅರವಣಗಳು ಮತ್ತು 1,760 ರೂ.ಕಿಟ್ನಲ್ಲಿ 10 ಅರವಣ ಪ್ರಸಾದ ಇರುತ್ತದೆ. ಈ ಎಲ್ಲಾ ಕಿಟ್ನಲ್ಲಿ ತುಪ್ಪ, ಕುಂಕುಮ, ಅರಿಶಿನ ಮತ್ತು ವಿಭೂತಿಯನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾಗುತ್ತದೆ.
ದೇಶದ ಯಾವುದೇ ಅಂಚೆ ಕಚೇರಿಯಿಂದ ಆನ್ಲೈನ್ನಲ್ಲಿ ಬುಕ್ ಮಾಡುವ ಮೂಲಕ ಶಬರಿಮಲೆ ಪ್ರಸಾದವನ್ನು ಪಡೆಯಬಹುದು.ಸ್ಪೀಡ್ ಪೋಸ್ಟ್ ಮೂಲಕ ಗರಿಷ್ಠ ಏಳು ದಿನಗಳ ಒಳಗೆ ಪ್ರಸಾದ ಮನೆಗೆ ತಲುಪುವುದು.ಕಳೆದ ಮಂಡಲ ಕಾಲದ ಅವಧಿಯಲ್ಲಿ ಅಂಚೆ ಪ್ರಸಾದ ವಿತರಣೆ ಮೂಲಕ ಅಂಚೆ ಕಚೇರಿ ಹಾಗೂ ದೇವಸ್ವಂ ಮಂಡಳಿಗೆ ಎರಡೂವರೆ ಕೋಟಿ ರೂ. ಆದಾಯ ಲಭಿಸಿತ್ತು.
ಪುನಾರಂಭಗೊಂಡ ಬಳಿಕ ಸನ್ನಿಧಾನಂ ಅಂಚೆ ಕಚೇರಿಗೆ ಕಳೆದ 15 ದಿನಗಳಲ್ಲಿ ದೇಶದ ವಿವಿಧ ಭಾಗಗಳಿಂದ 208 ಆರ್ಡರ್ಗಳು ಬಂದಿವೆ.ಈ ಮೂಲಕ 1,34,800ರೂ.ಸಂಗ್ರಹವಾಗಿದೆ.
ಬಿಗಿ ಭದ್ರತೆ
ಡಿಸೆಂಬರ್ 6ರ ಹಿನ್ನಲೆಯಲ್ಲಿ ಶಬರಿಮಲೆ ಅಯ್ಯಪ್ಪ ಸನ್ನಿಧಿ, ಪಂಪಾ, ನಿಲಕ್ಕಲ್ ಮೊದಲಾದೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.100 ಮಂದಿಯ ಕಮಾಂಡೋ ಪಡೆ ಭಾನುವಾರ ಸಂಜೆ ಸನ್ನಿಧಾನ ತಲಪಿದೆ.ಹೆಚ್ಚುವರಿ ಪೊಲೀಸ್ ಪಡೆಯನ್ನೂ ನಿಯೋಜಿಸಲಾಗಿದೆ.
ಸನ್ನಿಧಾನದ ವಿಶೇಷ ಅಧಿಕಾರಿ, ಕಾಸರಗೋಡು ಬದಿಯಡ್ಕ ಕರಿಂಬಲದ ಕೆ.ಹರಿಶ್ಚಂದ್ರ ನಾಯ್ಕ್ ನೇತೃತ್ವದಲ್ಲಿ ಸೋಮವಾರ ಭದ್ರತಾ ಸಿದ್ಧತೆಗಳ ಮೌಲ್ಯಮಾಪನ ನಡೆಸಲಾಗಿದೆ.ಇದರ ಭಾಗವಾಗಿ ಕಮಾಂಡೋಗಳು, ಕೇರಳ ಪೊಲೀಸ್, ಎನ್ಡಿಆರ್ಎಫ್, ಆರ್ಎಎಫ್, ಅಬಕಾರಿ, ಅರಣ್ಯ, ಬಾಂಬ್ ಸ್ಕ್ವಾಡ್ ಮತ್ತು ಇತರ ಇಲಾಖೆಗಳು ಸನ್ನಿಧಾನ ಮಂಟಪದಿಂದ ಮರಕ್ಕೂಟಮ್ವರೆಗೆ ಮಾರ್ಚ್-ಪಾಸ್ಟ್ ನಡೆಸಿದ್ದಾರೆ.ಶಬರಿಮಲೆ ಎಡಿಎಂ ಪಿ.ವಿಷ್ಣುರಾಜ್ ಶಬರಿಮಲೆ ಸನ್ನಿಧಾನಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಹೆಚುವರಿ ಭದ್ರತೆಯ ಅಂಗವಾಗಿ ಶಬರಿಮಲೆ ತಲುಪುವ ಎಲ್ಲಾ ಭಕ್ತರಿಗೆ ಗುರುತು ಚೀಟಿ ಕಡ್ಡಾಯಗೊಳಿಸಲಾಗಿದೆ.ಸನ್ನಿಧಾನದ ಹೊರತಾಗಿ, ನಿಲಕ್ಕಲ್, ಪಂಪಾ ಮತ್ತು ಮರಕ್ಕೂಟಂನಲ್ಲಿ ಮೆಟಲ್ ಡಿಟೆಕ್ಟರ್ ಸಹಿತ ಅತ್ಯಾಧುನಿಕ ಸಲಕರಣೆಗಳ ಮೂಲಕ ಎಲ್ಲಾ ಅಯ್ಯಪ್ಪ ಭಕ್ತರನ್ನು ಸರಿಯಾದ ರೀತಿಯಲ್ಲಿ ತಪಾಸಣೆ ನಡೆಸಿ ಸನ್ನಿಧಾನಕ್ಕೆ ಬಿಡಲಾಗುತ್ತಿದೆ.
ಮೆಟಲ್ ಡಿಟೆಕ್ಟರ್ ಮತ್ತು ಬಾಂಬ್ ಡಿಟೆಕ್ಟರ್ ಗಳ ಜೊತೆಗೆ ಆಕಾಶ ಮಾರ್ಗವಾಗಿಯೂ ಕಣ್ಗಾವಲು ಮತ್ತು ಡ್ರೋನ್ ಕಣ್ಗಾವಲು ಬಲಪಡಿಸಿದ್ದಾರೆ.ಅರಣ್ಯ ಇಲಾಖೆ ನೇತೃತ್ವದಲ್ಲಿ ವಿವಿಧ ಕೇಂದ್ರಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿ ವಿಶೇಷ ನಿಗಾ ವಹಿಸಲಾಗುತ್ತಿದೆ.ಶಬರಿಮಲೆ ತಲುಪುವ ಎಲ್ಲಾ ವಾಹನಗಳನ್ನೂ ತಪಾಸಣೆ ಮಾಡಲಾಗುತ್ತಿದೆ.ಕೇಂದ್ರ ಹಾಗೂ ರಾಜ್ಯ ಗುಪ್ತಚರ ಏಜೆನ್ಸಿಗಳೂ ತೀವ್ರ ಕಟ್ಟೆಚ್ಚರ ಪಾಲಿಸುತ್ತಿದೆ.
ಸೋಮವಾರ ಮಂಡಲ ಅವಧಿಯ ಗರಿಷ್ಟ ಸಂಖ್ಯೆಯ ಅಯ್ಯಪ್ಪ ಭಕ್ತರು ವರ್ಚುವಲ್ ಕ್ಯೂ ಮೂಲಕ ಬುಕ್ ಮಾಡಿದ್ದಾರೆ.ಸೋಮವಾರ 89,737ಬುಕ್ ಮಾಡಿದ್ದಾರೆ. ನ.28 ರಂದು 89,580 ಮತ್ತು ನ.26 ರಂದು 87,492 ಹೆಚ್ಚು ಸಂಖ್ಯೆಯಲ್ಲಿ ಭಕ್ತರು ವರ್ಚುವಲ್ ಕ್ಯೂ ಮೂಲಕ ಬುಕ್ ಮಾಡಿದ್ದರು.ಡಿಸೆಂಬರ್ ಎರಡನೇ ವಾರದ ಬಳಿಕ 90,000 ಕ್ಕೂ ಹೆಚ್ಚು ಭಕ್ತರು ಈಗಾಗಲೇ ಬುಕ್ ಮಾಡಿದ್ದಾರೆ.ಶನಿವಾರ ಮತ್ತು ಭಾನುವಾರದ ರಜಾ ದಿನಗಳಲ್ಲಿ ಸನ್ನಿಧಾನದಲ್ಲಿ ಜನಸಂದಣಿ ಕಡಿಮೆ ಇತ್ತು.