ಮಂಗಳೂರು: ಡಿ 2 : ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸದೆ ಅದೇ ಹೆಸರಿನ ಬೇರೆ ವ್ಯಕ್ತಿಯನ್ನು ಬಂಧಿಸಿದ ಪ್ರಕರಣದಲ್ಲಿ ತಪ್ಪೆಸಗಿದ ಮಹಿಳಾ ಪೊಲೀಸ್ ಅಧಿಕಾರಿಗಳಿಬ್ಬರು ತಮ್ಮ ಸ್ವಂತ ಹಣದಿಂದ ನೊಂದ ಯುವಕನಿಗೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಮಂಗಳೂರಿನ ಎರಡನೇ ಹೆಚ್ಚುವರಿ ಎಫ್ಟಿಎಸ್ಸಿ ಪೋಕ್ಸೋ ನ್ಯಾಯಾಲಯ ಆದೇಶವಿತ್ತಿದೆ. ನವೀನ್ ಸಿಕ್ವೇರ ಎಂಬವರು ನೊಂದ ಯುವಕನಾಗಿದ್ದು , ಇವರು ಮಾಡದ ತಪ್ಪಿಗೆ ಸುಮಾರು ಒಂದು ವರ್ಷ ಕಾಲ ನ್ಯಾಯಾಂಗ ಬಂಧನ ಶಿಕ್ಷೆ ಅನುಭವಿಸಿದರು.
ನವೀನ್ ಎಂಬಾತ ಕೃತ್ಯ ಎಸಗಿರುವುದಾಗಿ ಸಂತ್ರಸ್ತ ಬಾಲಕಿಯೂ ತನಿಖಾಧಿಕಾರಿಗಳ ಬಳಿ ಹೇಳಿಕೆ ನೀಡಿದ್ದು,ಆತನನ್ನು ಬಂಧಿಸುವ ಬದಲು ನವೀನ್ ಸಿಕ್ವೇರ ಎಂಬವರನ್ನು ಬಂಧಿಸಿದ್ದರು. ಆದರೇ ಬಂಧಿತನು ನಿಜವಾದ ಅರೋಪಿಯಲ್ಲ ಎಂದ ತಿಳಿದ ನ್ಯಾಯಾದೀಶರು ನವೀನ್ ಸಿಕ್ವೇರ ಅವರಿಗೆ 5,00,000 ರೂ. ಪರಿಹಾರವನ್ನು ನೀಡಬೇಕು ಎಂದು ಅದೇಶಿಸಿದ್ದು, ಜತೆಗೆ ತಪ್ಪೆಸೆಗಿದ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆಯೂ ರಾಜ್ಯ ಸರಕಾರದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ನಿರ್ದೇಶಿಸಿದ್ದಾರೆ
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಪೋಕ್ಸೊ ಪ್ರಕರಣವೊಂದರಲ್ಲಿ ನವೀನ್ ಎನ್ನುವ ವ್ಯಕ್ತಿ ಆರೋಪಿಯಾಗಿದ್ದನು. ಬಾಲಕಿ ನೀಡಿದ ಹೇಳಿಕೆಯನ್ವಯ ಎಸ್.ಐ ರೋಸಮ್ಮ ಪಿ.ಪಿ ಅವರು ನವೀನ್ ಮೇಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸ್ ನಿರೀಕ್ಷಕಿ ರೇವತಿಯವರಿಗೆ ಹಸ್ತಾಂತರಿಸಿದ್ದರು. ತನಿಖಾ ಸಮಯ ನವೀನ್ ಸಿಕ್ವೇರ ಎಂಬವರನ್ನು ಬಂಧಿಸಲಾಗಿತ್ತು.
ನೊಂದ ಬಾಲಕಿ ತನ್ನ ಫಿರ್ಯಾದಿಯಲ್ಲಿ ಮತ್ತು ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯಲ್ಲಿ, ಕೇವಲ ನವೀನ್ ಎಂಬ ಆರೋಪಿಯ ಹೆಸರನ್ನು ಉಲ್ಲೇಖೀಸಿದ್ದಳು.ನವೀನ್ ಸಿಕ್ವೇರನನ್ನೇ ಆರೋಪಿಯನ್ನಾಗಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಆರೋಪಿ ಪರ ವಕೀಲರಾದ ರಾಜೇಶ್ಕುಮಾರ್ ಅಮಾಡಿ ಮತ್ತು ಗಿರೀಶ್ ಶೆಟ್ಟಿ ಅವರು ವಾದ ಮಂಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಯು.ರಾಧಾಕೃಷ್ಣ ಅವರು, ನವೀನ್ ಸಿಕ್ವೇರ ನಿರಪರಾಧಿ ಎಂದು ಖುಲಾಸೆ ಗೊಳಿಸಿದ್ದಾರೆ. ಅಲ್ಲದೆ ಪೊಲೀಸ್ ಅಧಿಕಾರಿಗಳು ನಿಜವಾದ ವ್ಯಕ್ತಿಯನ್ನು ಬಂಧಿಸದೆ, ನವೀನ್ ಸಿಕ್ವೇರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಕ್ಕೆ 5 ಲ.ರೂ. ಪರಿಹಾರ ನೀಡಲು ಆದೇಶಿಸಿದ್ದಾರೆ.