ಬೆಂಗಳೂರು: ಸದ್ಯ ಬಯೋಪಿಕ್ಗಳು ಟ್ರೆಂಡಿಂಗ್ನಲ್ಲಿವೆ. ಈಗಾಗಲೇ ಸಿನಿಮಾ ತಾರೆಯರು, ಕ್ರಿಕೆಟ್, ರಾಜಕೀಯ ವ್ಯಕ್ತಿಗಳು, ಸಾಧಕರ ಎಷ್ಟೋ ಬಯೋಪಿಕ್ಗಳು ತೆರೆ ಮೇಲೆ ಬಂದು ಕಮಾಲ್ ಮಾಡಿದೆ. ಈಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ (Siddaramaiah BioPic )ತಯಾರಿಯ ಕೂಗು ಕೇಳಿ ಬರುತ್ತಿದೆ.
ಸಿದ್ದರಾಮೋತ್ಸವದ ಬಳಿಕ ಸಿದ್ದರಾಮಯ್ಯ ಬಯೋಪಿಕ್ ಬರಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಿದ್ದು ಬೆಂಬಲಿಗರು ಕಥೆ, ಚಿತ್ರಕಥೆ ಬರೆದಿಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಸಿದ್ದು ಬೆಂಬಲಿಗರು ವಿಜಯ್ ಸೇತುಪತಿ ಅವರನ್ನು ಕಾಂಟ್ಯಾಕ್ಟ್ ಮಾಡಿದ್ದು, ಅದಕ್ಕೆ ವಿಜಯ್ ಸೇತುಪತಿ ಅವರು ಪ್ರಾಥಮಿಕ ಹಂತದಲ್ಲಿ ಓಕೆ ಎಂದಿದ್ದಾರಂತೆ.
ಸಿದ್ದು ಬೆಂಬಲಿಗರ ಬಳಿ ಸಿನಿಮಾ ಮಾಡುವಷ್ಟು ಹಣ ಇಲ್ಲದ ಕಾರಣ, ಈಗ ನಿರ್ಮಾಪಕರ ಮೂಲಕವಾಗಿ ಬೆಂಬಲಿಗರು ಸಿದ್ದು ಬಯೋಪಿಕ್ ಮಾಡಲು ರೆಡಿ ಇದ್ದಾರೆ. ಈ ಚಿತ್ರಕ್ಕೆ ಶಾಸಕರೋರ್ವರು ಹಣ ಹೂಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಸಿನಿಮಾ ಆಗಲು ಸಿದ್ದರಾಮಯ್ಯ ಅವರ ಅನುಮತಿ ಬೇಕು. ಸಿದ್ದರಾಮಯ್ಯ ಅವರ ಬಳಿ ಒಮ್ಮೆ ಈ ಬಗ್ಗೆ ಚರ್ಚೆ ಮಾಡಲಾಗಿದ್ದು, ಆದರೆ ಅವರಿನ್ನೂ ಒಕೆ ಅಂತ ಹೇಳಿಲ್ಲ.
ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು “ನಾನು ಸಿದ್ದು ಬಯೋಪಿಕ್ ಮಾಡುತ್ತಿಲ್ಲ, ಸಿದ್ದು ಸರ್ ಓಕೆ ಅಂದರೆ ಉತ್ತರ ಕರ್ನಾಟಕದ ಕೆಲವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಬಜೆಟ್ನಲ್ಲಿ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ. ಸಾಹೇಬ್ರು ಓಕೆ ಅಂದರೆ ಚುನಾವಣೆ ಬರುವ ಮುನ್ನವೇ ಈ ಚಿತ್ರ ತೆರೆಗೆ ಬರಲಿದೆ. ಸಿದ್ದರಾಮಯ್ಯ ಅವರ ಜನಪರ ಯೋಜನೆಗಳು, ಸಾಮಾಜಿಕ ಕಳಕಳಿ ವಿಚಾರವಾಗಿ ಸಿನಿಮಾ ಬರಲಿದೆಯಂತೆ” ಎಂದಿದ್ದಾರೆ.
“ಚುನಾವಣೆ ಸಲುವಾಗಿ ಈ ಸಿನಿಮಾ ಮಾಡುತ್ತಿಲ್ಲ, ಅವರ ಅಭಿಮಾನಿಗಳು ಈ ಸಿನಿಮಾ ಬರಬೇಕು ಎಂದು ಆಶಿಸುತ್ತಿದ್ದಾರೆ. ಚುನಾವಣೆಗಾಗಿ ಈ ರೀತಿ ಮಾಡಬೇಕಾದ ಅವಶ್ಯಕತೆಯಿಲ್ಲ. ಸಿದ್ದರಾಮಯ್ಯ ಜೀವನಚರಿತ್ರೆ, ರಾಜಕೀಯ ಜೀವನ ಈ ಸಿನಿಮಾದಲ್ಲಿ ಇರಲಿದೆ. ಸ್ಕ್ರಿಪ್ಟ್ ಅಂತೂ ತುಂಬ ಚೆನ್ನಾಗಿದೆ” ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ. ಈ ಚಿತ್ರದ ನಿರ್ದೇಶಕರು ಯಾರು ಎಂಬ ಕುತೂಹಲ ಶುರುವಾಗಿದೆ.
ಬಯೋಪಿಕ್ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಿದ್ದು, “ಕನಕಗಿರಿ ಕ್ಷೇತ್ರದವರು ಸಿನಿಮಾ ಮಾಡ್ತೀವಿ ಅಂತ ಒಂದು ವಾರದ ಹಿಂದೆ ನನ್ನ ಕಾಂಟ್ಯಾಕ್ಟ್ ಮಾಡಿದ್ದರು. ಅದರ ಬಗ್ಗೆ ಇನ್ನೂ ನಿರ್ಧಾರ ತಗೊಂಡಿಲ್ಲ. ನನಗೆ ನಟನೆ ಗೊತ್ತಿಲ್ಲ, ನಾನು ಸಿನಿಮಾದಲ್ಲಿ ನಟಿಸುತ್ತಿಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.