ಕೊಚ್ಚಿ(ಕೇರಳ): ಡಿ 2 : ತಿಂಗಳ ಹಿಂದೆ ಕೊಚ್ಚಿಯಲ್ಲಿ ಇಬ್ಬರು ಮಾಡೆಲ್ಗಳು ಸೇರಿದಂತೆ ಕಾರು ಅಪಘಾತದಲ್ಲಿ ಮೂವರು ಮೃತಪಟ್ಟಿದ್ದ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮೇಲ್ನೋಟಕ್ಕೆ ಇದೊಂದು ರಸ್ತೆ ಅಪಘಾತದಂತೆ ಕಂಡು ಬಂದಿದ್ದರೂ, ದಿನಗಳೆದಂತೆ ಈ ಪ್ರಕರಣ ಸಂಬಂಧ ಹಲವು ರಹಸ್ಯಗಳು ಬೆಳಕಿಗೆ ಬಂದಿದ್ದವು. ಪೊಲೀಸ್ ತನಿಖೆಯ ವೇಳೆ ಪ್ರತಿ ದಿನ ಒಂದಲ್ಲ ಒಂದು ಹೊಸ ತಿರುವುಗಳು ಕಾಣಿಸಿಕೊಂಡಿದ್ದವು. ಇದೊಂದು ಸಾಮಾನ್ಯ ರಸ್ತೆ ಅಪಘಾತವೇ ಅಥವಾ ಕೊಲೆಯಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಂಡಿದ್ದೇವು. ಇದೀಗ ಕೇರಳ ಪೊಲೀಸರು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ.
ತನಿಖೆ ವೇಳೆ ಮಾಡೆಲ್ಗಳು ಪಾಲ್ಗೊಂಡಿದ್ದ ಪಾರ್ಟಿ ನಡೆದ ಹೋಟೆಲ್ ಮಾಲೀಕನ ನಡೆ ಹಾಗೂ ಅಪಘಾತಕ್ಕೀಡಾದ ಕಾರನ್ನು ಚೇಸ್ ಮಾಡಿದ್ದ ಆಡಿ ಕಾರು ಪ್ರಕರಣವನ್ನು ನಿಗೂಢತೆಗೆ ದೂಡಿತ್ತು. ಹೀಗಿದ್ದರೂ ಇದೊಂದು ಕೊಲೆಯಲ್ಲ, ಮದ್ಯದ ಅಮಲಿನಲ್ಲಿ ಸಂಭವಿಸಿದ ಸಾಮಾನ್ಯ ರಸ್ತೆ ಅಪಘಾತ ಎಂದು ಬಿಂಬಿಸುವ ಹಲವಾರು ಯತ್ನಗಳು ನಡೆದಿದ್ದವು. ಆದರೆ ಅಪಘಾತಕ್ಕೀಡಾದ ಕಾರು ಚಾಲಕನ ಹೇಳಿಕೆ ಹಾಗೂ ಹೋಟೆಲ್ ಮಾಲೀಕನ ಅನುಮಾನಾಸ್ಪದ ನಡೆ ಈ ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು. ಆರೋಪಿಯೊಬ್ಬನ ಮೊಬೈಲ್ನಲ್ಲಿ ಲಭ್ಯವಾದ ವಿಡಿಯೋಗಳು ಪ್ರಕರಣದ ತನಿಖೆಯನ್ನು ಕೊನೆ ಮುಟ್ಟಿಸಿದ್ದವು.
ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಡ್ರಗ್ ಪೆಡ್ಲರ್ ಕಂ ಇಂಟೀರಿಯರ್ ಡಿಸೈನರ್ ಈ ಇಬ್ಬರು ಮಾಡೆಲ್ ಗಳನ್ನು ಬೆಂಬಿಡದೆ ಹಿಂಬಾಲಿಸಿದ್ದರಿಂದ ಗಾಬರಿಯಾದ ಅವರು ವೇಗವಾಗಿ ಕಾರು ಚಲಾಯಿಸಿದರಿಂದಲೇ ಅವರ ವಾಹನ ಅಪಘಾತಕ್ಕಿಡಾಗಿ ದುರಂತ ಸಂಭವಿಸಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರ ಕ್ರೈಂ ಬ್ರಾಂಚ್ ವಿಭಾಗವು ಬುಧವಾರ ತಿಳಿಸಿದೆ. ಹಾಗಾಗಿ ಕೇರಳದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ರೂಪದರ್ಶಿಯರು ಸಾವಿಗೆ ಇಂಟೀರಿಯರ್ ಡಿಸೈನರ್ ಆಗಿರುವ ಡ್ರಗ್ ಪೆಡ್ಲರ್ ಸೈಜು ತಂಕಚನ್ ಕಾರಣ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.

ಏನಿದು ಪ್ರಕರಣ ?
ಅಕ್ಟೋಬರ್ 31ರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಕೇರಳದ ಮಾಜಿ ಸುಂದರಿ ಅನ್ಸಿ ಕಬೀರ್ (24) ಮತ್ತು ರನ್ನರ್ ಅಪ್ ಅಂಜನಾ ಶಾಜನ್ (25) ಮೃತಪಟ್ಟಿದ್ದರು.ಈ ಇಬ್ಬರು ಪ್ರಯಾಣಿಸುತ್ತಿದ್ದ ಕಾರು ಕೊಚ್ಚಿ ಬಳಿಯ ವೈಟಿಲ್ಲಾ ಎಂಬಲ್ಲಿ ಅಪಘಾತಕ್ಕೀಡಾಗಿತ್ತು.ಕಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದ ವೇಳೆ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಇವರು ಪಲ್ಟಿಯಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ವಾರದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ವಾಹನ ಚಲಾಯಿಸುತ್ತಿದ್ದ ಅವರ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ನೋಡಿ : ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ
ಅವತ್ತು ಏನಾಯಿತು ?
ಅಕ್ಟೋಬರ್ 31 ರಂದು ಆನ್ಸಿ ಮತ್ತು ಅಂಜನಾ ತಮ್ಮ ಸ್ನೇಹಿತರೊಂದಿಗೆ ಪಬ್ʼವೊಂದಕ್ಕೆ ಪಾರ್ಟಿಗೆ ಹೋಗಿದ್ದರು. ಆರೋಪಿ ಸೈಜು ತಂಕಚನ್ ಕೂಡ ಅಲ್ಲಿಗೆ ಬಂದಿದ್ದಾನೆ. ಈ ವೇಳೆ, ಆರೋಪಿ ರೂಪದರ್ಶಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ರಾತ್ರಿ ಒಂದೋ ಹೊಟೇಲ್ನಲ್ಲಿ ತಂಗಿ ಅಥಾವ ನನ್ನ ಮನೆಗೆ ಬನ್ನಿ ಎಂದು ಬೆದರಿಸಿದ್ದಾನೆ. ಇದರಿಂದ ಗಾಬರಿಗೆ ಬಿದ್ದ ಇಬ್ಬರು ಮಾಡೆಲ್ಗಳು ಈತ ತಮಗೆ ಲೈಂಗಿಕವಾಗಿ ಕಿರುಕುಳ ಕೊಡಬಹುದು ಎಂಬ ಭಯದಿಂದ ತಕ್ಷಣ ತಮ್ಮ ಸ್ನೇಹಿತರೊಂದಿಗೆ ಹೋಟೆಲ್ನಿಂದ ಹೊರಬಂದು ಕಾರಿನಲ್ಲಿ ಮನೆಗೆ ತೆರಳಿದ್ದಾರೆ.
ಈ ವೇಳೆ ಸೈಜು ಕೂಡ ಅವರನ್ನು ಹಿಂಬಾಲಿಸಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತ ವೇಗವಾಗಿ ಕಾರು ಚಲಾಯಿಸಲು ಆರಂಭಿಸಿದ್ದೆ ಭೀಕರ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಶಂಕೆಯ ಸೈಜುನನ್ನು ಬಂಧಿಸಿದ ಪೋಲಿಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಸೈಜು ಮೊಬೈಲ್ ಫೋನ್ನಲ್ಲಿ ಮಾದಕ ದ್ರವ್ಯ ಸೇವನೆಯ ವೀಡಿಯೊಗಳು ಸೇರಿದಂತೆ ಹಲವು ದೋಷಾರೋಪಣೆಯ ಸಾಕ್ಷ್ಯಗಳಿವೆ ಎಂದು ಅಪರಾಧ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಸಾಕ್ಷ್ಯ ನುಡಿದ ಸಿಸಿಟಿವಿ :
“ಆರೋಪಿ ಸೈಜು ಪಬ್ನಿಂದ ರೂಪದರ್ಶಿಗಳನ್ನು ಹಿಂಬಾಲಿಸುತ್ತಿರುವುದು ಹಾಗೂ ಕುಂದನ್ನೂರು ಎಂಬಲ್ಲಿ ಮಾಡೆಲ್ ಗಳಿದ್ದ ಕಾರನ್ನು ಹಿಂಬಾಲಿಸಿ ಅದನ್ನು ತಡೆಯಲು ಯತ್ನಿಸಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದು ಬಂದಿದೆ. ಬಳಿಕ ಆರೋಪಿಯಿಂದ ತಪ್ಪಿಸಿ ಕೊಳ್ಳಲು ಮಾಡೆಲ್ಗಳಿದ್ದ ಕಾರಿನ ಚಾಲಕ ಅದನ್ನು ವೇಗವಾಗಿ ಓಡಿಸಿದ್ದು ಹೀಗಾಗಿ ಅದು ಅಪಘಾತಕ್ಕೀಡಾಯಿತು.” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸೈಜು ಮಾದಕ ವ್ಯಸನಿ ಹಾಗೂ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಎನ್ನುವ ವಿಚಾರ ಆತನ ಈ ಹಿಂದಿನ ಚಟುವಟಿಕೆಗಳಿಂದ ಸಾಬೀತಾಗಿದೆ. ಆತನಿಂದ ಈ ರೀತಿ ಸಮಸ್ಯೆಗೆ ಒಳಗಾದವರು ದೂರುಗಳನ್ನು ನೀಡಿದರೆ ನಾವು ಪ್ರಕರಣಗಳನ್ನು ದಾಖಲಿಸುತ್ತೇವೆ ಅಥಾವ ಸೋ ಮೋಟೋ ಪ್ರಕರಣವನ್ನು ದಾಖಲಿಸಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಕೊಚ್ಚಿ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೈಜು ಬಂಧನದ ಬಳಿಕ ಈ ಅತೀ ಕ್ಲಿಷ್ಟಕರವಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಸಫಲರಾದರು. ಆರೋಪಿಯ ಮೊಬೈಲ್ ಪೋನ್ ಪೊಲೀಸರಿಗೆ ಅತೀ ದೊಡ್ಡ ಸಾಕ್ಷ್ಯದ ರೂಪದಲ್ಲಿ ಸಹಾಯ ಮಾಡಿತ್ತು. ಮೂಲಗಳ ಪ್ರಕಾರ ಸೈಜು ಮೊಬೈಲ್ನಿಂದ ಸಿಕ್ಕ ವಿಡಿಯೋಗಳಲ್ಲಿ ಇತರ ಅನೇಕ ಯುವತಿಯ ವಿಡಿಯೋಗಳೂ ಇರುವುದು ಪತ್ತೆಯಾಗಿದೆ. ಯುವತಿಯರಿಗೆ ಡ್ರಗ್ಸ್ ನೀಡಿ ಮತ್ತು ಬರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವಿಡಿಯೋ ಇರುವುದಾಗಿ ತನಿಖಾಧಿಕಾರಿಗಳು ಹೇಳಿದ್ದಾರೆ. ಮೊಬೈಲ್ ಫೋನ್ನಲ್ಲಿರುವ ದೃಶ್ಯಗಳ ಪ್ರಕಾರ ಕೊಚ್ಚಿಯ ಅನೇಕ ಐಷಾರಾಮಿ ಹೋಟೆಲ್ಗಳಲ್ಲಿ ರಾತ್ರಿ ನಡೆಯುತ್ತಿದ್ದ ಪಾರ್ಟಿಗಳಿಗೆ ಸೈಜು ಪ್ರಮುಖ ಆಯೋಜಕನಾಗಿದ್ದ ಎಂಬ ಪೊಲೀಸರ ಹಿಂದಿನ ಅನುಮಾನಗಳಿಗೆ ಪುಷ್ಠಿ ನೀಡಿದೆ. ಅಲ್ಲದೆ, ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದವರಿಗೆ ಡ್ರಗ್ಸ್ ಕೂಡ ಈತನೇ ಪೂರೈಸುತ್ತಿದ್ದ ಎಂಬುವುದು ತಿಳಿದು ಬಂದಿದೆ.

ಸಂತ್ರಸ್ತ ಕುಟುಂಬದ ಆರೋಪ:
ಇದಕ್ಕೂ ಮೊದಲು “ಅಫಘಾತದ ಘಟನೆಯ ಬಳಿಕ ಪಬ್ ಮಾಲಕರು ಭಯಗೊಂಡಿದ್ದಾರೆ ಹಾಗೂ ಸಿಸಿಟಿವಿ ಪೊಟೋಜ್ ಸಹಿತ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆಂದು ಮೃತ ಅಂಜನಾಳ ಸಹೋದರ ಆರೋಪಿಸಿದ್ದರು. ಅಲ್ಲದೆ, ಸಂತ್ರಸ್ತೆಯ ಕುಟುಂಬಸ್ಥರು ರಾಜ್ಯದ ಪೊಲೀಸರು ನಡೆಸಿತ್ತಿರುವ ತನಿಖೆಯಲ್ಲಿ ವಿಶ್ವಾಸವಿಲ್ಲ” ಇದನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದರು.
ಮೂಲಗಳ ಪ್ರಕಾರ, ಸೈಜ್ ವಿಚಾರಣೆಯೊಂದಿಗೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಗಿಸಿದ್ದು ಡಿಜೆ ಪಾರ್ಟಿ ನಡೆದ ಹೋಟೆಲ್ನಿಂದ ಧಾವಿಸಿ ಬಂದ ಸೈಜು ಕಾರು ಮಾಡೆಲ್ʼಗಳ ಕಾರನ್ನು ಹಿಂಬಾಲಿಸಿದ್ದೆ ಸಾವಿಗೆ ಕಾರಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಇದನ್ನೂ ನೋಡಿ : ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ