ಪುತ್ತೂರು : ನ 30 : ಪ್ರೋ ಕಬ್ಬಡಿಯ ಪ್ರತಿಷ್ಟಿತ ತಂಡ ಪಾಟ್ನಾ ಪೈರೆಟ್ಸ್ ನ ನಾಯಕನಾಗಿ ತುಳುನಾಡಿನ ಕುವರ, ಕರ್ನಾಟಕದ ತಂಡದ ಮಾಜಿ ನಾಯಕ ಪುತ್ತೂರಿನ ಪ್ರಶಾಂತ್ ರೈ ಆಯ್ಕೆಯಾಗಿದ್ದಾರೆ. ಹಿಂದಿನ ಸೀಸನ್ನಲ್ಲಿ ಕೋಟಿ ಸರದಾರ ಪರ್ದೀಪ್ ನರ್ವಾಲ್ ತಂಡದ ಕಪ್ತಾನರಾಗಿದ್ದರು.
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ನ ಸೀಸನ್ 8ರ ಪಂದ್ಯಗಳು ಡಿ.22ರಿಂದ ಬೆಂಗಳೂರಿನಲ್ಲಿ ನಡೆಯಲಿವೆ.
ಕರ್ನಾಟಕ ಕಬಡ್ಡಿ ತಂಡದ ಮಾಜಿ ನಾಯಕ 36ರ ಹರೆಯದ ಪ್ರಶಾಂತ್, ವಿಜಯ ಬ್ಯಾಂಕ್ನ ಕಬಡ್ಡಿ ತಂಡದ ಕಪ್ತಾನ. ಪ್ರೊ ಕಬಡ್ಡಿ ಲೀಗ್ನ ಮೊದಲ ಮೂರು ಆವೃತ್ತಿಗಳಲ್ಲಿ ತೆಲುಗು ಟೈಟನ್ಸ್ ತಂಡದ ಸದಸ್ಯರಾಗಿದ್ದ ಪ್ರತಿಭಾವಂತ ರೈಡರ್ ಪ್ರಶಾಂತ್, ನಂತರ ದಬಾಂಗ್ ಡೆಲ್ಲಿ , ಬಳಿಕ ಹರಿಯಾಣ ಸ್ಟೀಲರ್ಸ್ ತಂಡ ಹಾಗೂ ಯುಪಿ ಯೋಧ ತಂಡವನ್ನು ಪ್ರತಿನಿಧಿಸಿದ್ದರು.
ಈ ಸಾಲಿಗೆ ಅವರು ಪಟ್ನಾ ಪೈರೆಟ್ಸ್ ತಂಡದ ಪಾಲಿಗೆ ಒಲಿದಿದ್ದರು . 55 ಲಕ್ಷ ರೂಪಾಯಿ ಮೊತ್ತಕ್ಕೆ ತಂಡವೂ ಅವರನ್ನು ಖರೀದಿಸಿತ್ತು. ಅದರೊಟ್ಡಿಗೆ ಅವರಿಗೆ ಈ ಬಾರಿಯ ನಾಯಕತ್ವವೂ ಒಲಿದಿದೆ. ಇದು ಪ್ರೋ ಕಬ್ಬಡಿಯಲ್ಲಿ ಕನ್ನಡಿಗನೊಬ್ಬನಿಗೆ ದೊರೆತ ಅತ್ಯುನ್ನತ ಸ್ಥಾನ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೈಕರ ಮನೆತನದಲ್ಲಿ ಅರಳಿರುವ ಪ್ರಶಾಂತ್, ಪತ್ನಿ ವಜ್ರೇಶ್ವರಿ ರೈ ಮತ್ತು ಪುತ್ರ ಶತಾಯು ರೈ ಜತೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಾರಣ ಇಲ್ಲೇ ನೆಲೆಸಿದ್ದಾರೆ. ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ತಂದೆ ಸೀತಾರಾಮ್ ಮತ್ತು ಗೃಹಿಣಿ ತಾಯಿ ಸತ್ಯವತಿ ರೈ ಅವರ ಮುದ್ದಿನ ಮಗ; ವಾಸ್ತವದಲ್ಲಿ ಅವರಿಲ್ಲದ ನೋವು ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ಪ್ರಶಾಂತ್ ಶಾಲಾ ದಿನಗಳಲ್ಲಿ ಕಬಡ್ಡಿಯಿಂದ ದೂರ ಇದ್ದವರು.

ಆದರೆ ಆಕಸ್ಮಿಕವಾಗಿ ಪಿಯುಸಿ ಓದುತ್ತಿದ್ದ ವೇಳೆ ಕಬಡ್ಡಿ ಕ್ರೀಡೆ ಬಗ್ಗೆ ಆಕರ್ಷಿತರಾದರು. ವೇಟ್ಲಿಫ್ಟರ್ ಆಗಬೇಕೆಂದುಕೊಂಡಿದ್ದ ಪ್ರಶಾಂಶ್ಗೆ ಕೈ ಬೀಸಿ ಕರೆದಿದ್ದು ಮಾತ್ರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕಬಡ್ಡಿ ಮೈದಾನ. ಆ ಮೈದಾನದ ಧೂಳಿನಲ್ಲೇ ಆಡಿ ಬೆಳೆದ ಪ್ರಶಾಂತ್, ಕೋಚ್ ಹಬೀಬ್ ಮತ್ತು ಫಿಲೋಮಿನಾ ಕಾಲೇಜಿನ ಕೋಚ್ ಇಲಿಯಾಸ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಕಬಡ್ಡಿ ಆಟದ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಸತತ ಮೂರು ವರ್ಷ ಮಂಗಳೂರು ಅಂತರ್ಕಾಲೇಜು ಟೂರ್ನಿಗಳಲ್ಲಿ ಫಿಲೋಮಿನಾ ಕಾಲೇಜಿಗೆ ಟ್ರೋಫಿ ಗೆದ್ದುಕೊಟ್ಟ ಪ್ರಶಾಂತ್, ಅಂತರ ವಿಶ್ವವಿದ್ಯಾಲಗಳ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪಡೆದ ಪ್ರಶಾಂತ್ಗೆ ಬದುಕು ಕಲ್ಪಿಸಿದ್ದು ಬೆಂಗಳೂರಿನ ವಿಜಯ ಬ್ಯಾಂಕ್. ಉದ್ಯೋಗದ ಜತೆ ಜತೆಗೆ ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದ ಪ್ರಶಾಂತ್, ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ ಅದು ಕೈಗೂಡಲಿಲ್ಲ. ಅದರೂ ವಿಜಯ ಬ್ಯಾಂಕ್ ಮತ್ತು ರಾಜ್ಯ ತಂಡದ ಪ್ರಮುಖ ಆಸ್ತಿಯಾಗಿ ಗುರುತಿಸಿಕೊಂಡಿದ್ದರು.
ಪ್ರಶಾಂತ್ ರೈ ಯವರ ಜತೆ ನಿಖರ ನ್ಯೂಸ್ ನಡೆಸಿದ ಸಂದರ್ಶನದ ವಿಡಿಯೋ
ದಾಖಲೆ ಮೊತ್ತಕೆ ಹರಾಜಾಗಿದ್ದರು
ಆರನೇ ಆವೃತ್ತಿಯ ಹರಾಜಿನಲ್ಲಿ ಪ್ರಶಾಂತ್ ಕುಮಾರ್ ರೈ, ಯುಪಿ ಯೋಧಾಸ್ ತಂಡಕ್ಕೆ 79 ಲಕ್ಷ ರೂ.ಗಳಿಗೆ ಮಾರಾಟಗೊಂಡಿದ್ದರು. ಈ ಮೂಲಕ ರಾಜ್ಯದ ಪರ ಅತ್ಯಧಿಕ ಮೊತ್ತ ಪಡೆದ ಮೊದಲ ಆಟಗಾರ ಎಂಬ ಶ್ರೇಯಕ್ಕೆ ಪಾತಸಾಬೀತುಪಡಿಸಿದರು.
ನಾಲ್ಕನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿಗೆ 13 ಲಕ್ಷ ಕ್ಕೆ ಬಿಕರಿಯಾಗಿದ್ದ ಪ್ರಶಾಂತ್ 5ನೇ ಅವತರಣಿಕೆಯಲ್ಲಿ 21 ಲಕ್ಷ ರೂ.ಗೆ ಹರಾಜುಗೊಂಡಿದ್ದರು. ಇದೀಗ 6ನೇ ಆವೃತ್ತಿಗೆ ಸುಮಾರು ಮೂರು ಪಟ್ಟು ಹೆಚ್ಚು ಹಣ ಪಡೆಯುವ ಮೂಲಕ ದೇಶದ ಅಗ್ರಮಾನ್ಯ 20 ರೈಡರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಲೀಗ್ನ ಮೊದಲ ಮೂರು ಆವೃತ್ತಿಗಳಲ್ಲಿ ಸೂಕ್ತ ಅವಕಾಶ ಸಿಗದೆ ಎಲೆಮರೆಯ ಕಾಯಿಯಂತಿದ್ದ ಪ್ರಶಾಂತ್ ರೈ, 4ನೇ ಹಾಗೂ 5ನೇ ಆವೃತ್ತಿಯಲ್ಲಿ ಮುನ್ನಲೆಗೆ ಬರುವ ಮೂಲಕ ತಾವೊಬ್ಬ ಪ್ರತಿಭಾವಂತ ರೈಡರ್ ಎಂಬುದನ್ನು ಸಾಬೀತುಪಡಿಸಿದರು. ಅದಾದ ಬಳಿಕ ಅವರು ಹಿಂತುರುಗಿ ನೋಡಿಲ್ಲ . ಪ್ರತಿ ಸೀಸನ್ ನಲ್ಲು ಅತ್ಯುನ್ನತ ಪ್ರದರ್ಶನ ನೀಡುತ್ತಲೆ ಸಾಗಿದರು.