Uncategorized
ದೇವಿಯ ಮುಂಭಾಗ ಗೆಜ್ಜೆ ಪೂಜೆ ನಡೆಸಿ ತಿರುಗಾಟ ಆರಂಭಿಸಿದ ಕಟೀಲಿನ ಆರು ಯಕ್ಷಗಾನ ಮೇಳಗಳು – ಮುಂದಿನ 20 ವರ್ಷ ಮುಂಗಡ ಬುಕ್ಕಿಂಗ್ | ರೂಪಾಂತರಿ ತಳಿಯ ಭೀತಿಯ ನಡುವೆಯೂ ತಿರುಗಾಟ ಆರಂಭಿಸಿದ ಬಹುತೇಕ ಮೇಳಗಳು

ಕಟೀಲ್ : ನ 30 : ಕಳೆದೆರಡು ವರ್ಷಗಳಿಂದ ಕೊವೀಡ್ ಮಹಾಮಾರಿಯ ಕಾರಣದಿಂದ ಕರವಾಳಿಯ ಪ್ರಧಾನ ಕಲೆ ಯಕ್ಷಗಾನ ತೀವ್ರ ಸಮಸ್ಯೆಯನ್ನು ಎದುರಿಸಿತ್ತು. ಈ ಬಾರಿ ಕೊರೊನಾ ಇಳಿಮುಖವಾದ ಹಿನ್ನಲೆಯಲ್ಲಿ ಬಯಲಾಟ ಮತ್ತೆ ಹೊಸ ಹುರುಪನೊಂದಿಗೆ ಮೇಳಗಳು ತಿರುಗಾಟ ಆರಂಭಿಸಿವೆ.
ಕರ್ನಾಟಕದ ಗಡಿಜಿಲ್ಲೆಯಾದ ಕಾಸರಗೋಡು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಿಂದ ಹಾಗೂ ಉತ್ತರ ಕನ್ನಡ ಜಿಲ್ಲೆಯವರೆಗೂ ಯಕ್ಷಗಾನದ ವ್ಯಾಪ್ತಿಯಿದೆ. ಬದಲಾದ ಕಾಲಮಾನದಲ್ಲೂ, ತಲೆಮಾರುಗಳ ಬದಲಾವಣೆಯ ಬಳಿಕವೂ ಯಕ್ಷಗಾನ ಈಗಲೂ ತನ್ನದೇ ಆದ ಪ್ರೇಕ್ಷಕರ ಬಳಗವನ್ನು ಹೊಂದಿದೆ.
ಮೇಳಗಳು ತಮ್ಮ ತಿರುಗಾಟವನ್ನು ಆರಂಭಿಸಲು ಹೆಜ್ಜೆ ಇಡುವಾಗಲೇ ರೂಪಾಂತರಿ ಕೊರೊನಾ ಭೀತಿ ಎದುರಾಗಿದೆ . ಈ ಆತಂಕದ ನಡುವೆಯೂ ಎಲ್ಲ ಯಕ್ಷಗಾನ ತಂಡಗಳು ತಮ್ಮ ತಿರುಗಾಟವನ್ನು ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಕೆಲ ಮೇಳಗಳು ತಿರುಗಾಟ ಆರಂಭಿಸಿವೆ.

ನ .29 ರಂದು ತೆಂಕುತಿಟ್ಟಿನ ಪ್ರಸಿದ್ಧ ಹರಕೆಯಾಟದ ಯಕ್ಷಗಾನ ಮೇಳ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 6 ಮೇಳಗಳು ತನ್ನ ತಿರುಗಾಟವನ್ನು ಆರಂಭಿಸಿದೆ. ದೇವರ ಸೇವೆಯಾಟವೆಂದು ದೇವಸ್ಥಾನದಲ್ಲಿ ಆರೂ ರಂಗಸ್ಥಳದಲ್ಲಿ ಏಕಕಾಲದಲ್ಲಿ ಯಕ್ಷಗಾನ ಸೇವೆಯಾಟ ಜರುಗಿತು. ಇಂದಿನಿಂದ ಭಕ್ತರು ಸೇವೆ ನೀಡುವಲ್ಲಿಗೆ ಹೋಗಿ ಯಕ್ಷಗಾನ ಪ್ರಸಂಗವನ್ನು ಕಲಾವಿದರು ಆಡಿ ತೋರಿಸುತ್ತಾರೆ.

ಯಕ್ಷಗಾನ ಹರಕೆಯಾಟ ‘ಯಕ್ಷಗಾನ ಪ್ರಿಯೆ’ ಕಟೀಲು ಶ್ರೀ ದುರ್ಗೆಗೆ ಅತಿ ಪ್ರಿಯವಾದದು ಹಾಗೆಯೇ ದೊಡ್ಡ ಸೇವೆಯೂ ಆಗಿದೆ. ಆದ್ದರಿಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ತಾಯಿಗೆ ಯಕ್ಷಗಾನ ಸೇವೆ ನೀಡುತ್ತೇವೆ ಎಂದು ಹರಕೆ ಹೊರುತ್ತಾರೆ. ಯಕ್ಷಗಾನ ನಡೆಯುವಲ್ಲಿಗೆ ಸಾಕ್ಷಾತ್ ಕಟೀಲು ಶ್ರೀ ದೇವಿಯೇ ಬರುತ್ತಾಳೆಂಬ ಪ್ರತೀತಿ ಈಗಲೂ ಇದೆ.

ಕಾರ್ತಿಕ ಪಂಚಮಿಯಂದು ಕಟೀಲು ದೀಪೋತ್ಸವ ನಡೆಯುತ್ತದೆ. ಬಳಿಕ ದೇವರ ತಾರಾನುಕೂಲದ ದಿನದಂದು ದೇವಸ್ಥಾನದ ಯಕ್ಷಗಾನ ಮೇಳಗಳ ತಿರುಗಾಟವನ್ನು ನಡೆಸಲಾಗುತ್ತದೆ. ವೃಷಭ ಸಂಕ್ರಮಣದ ಬಳಿಕ 11 ನೇ ದಿನದಂದು (ಮೇ 25 ರ ಸುಮಾರಿಗೆ) ವರ್ಷದ ತಿರುಗಾಟ (ಜೈತ್ರಯಾತ್ರೆ) ಮುಕ್ತಾಯವಾಗುತ್ತದೆ.ದೇವಿ ಸಮ್ಮುಖದಲ್ಲಿ ಕುಣಿದ ಕಲಾವಿದರುಯಕ್ಷಗಾನ ತಿರುಗಾಟ ಆರಂಭದ ದಿನವಾದ ನಿನ್ನೆ ಕಲಾವಿದರು ಶ್ರೀದೇವಿಯ ಸಮ್ಮುಖದಲ್ಲಿಯೇ ಗಜ್ಜೆಕಟ್ಟಿ ಕುಣಿದರು.

ಬಳಿಕ ಕಲಾವಿದರು ದೇವಸ್ಥಾನದ ಪ್ರಾಂಗಣದಲ್ಲಿ ಹಾಕಲಾಗುವ ಆರೂ ರಂಗಸ್ಥಳಗಳಲ್ಲಿ ಪೂರ್ವರಂಗ ಕುಣಿತವನ್ನು ಪ್ರದರ್ಶಿಸಿ ‘ಪಾಂಡವಾಶ್ವಮೇಧ’ ಪ್ರಸಂಗವನ್ನು ಪ್ರದರ್ಶಿಸಿದರು. ನಾಳೆಯಿಂದ ಆರು ಮೇಳಗಳು ತಿರುಗಾಟವನ್ನು ಆರಂಭಿಸಿ, ಮುಂದಿನ ಆರು ತಿಂಗಳ ಕಾಲ ವಿವಿಧ ಕಡೆಗಳಲ್ಲಿ ಯಕ್ಷಗಾನ ಹರಕೆಯಾಟ ಸೇವೆ ನಡೆಯುತ್ತದೆ. ನವೆಂಬರ್ 29ರಿಂದ ಆರಂಭವಾದ ಕಟೀಲು ಯಕ್ಷಗಾನ ಪ್ರದರ್ಶನ ಮೇ 25ರವರೆಗೆ ಅಂದರೆ ಸರಿಸುಮಾರು 167 ದಿನಗಳ ಕಾಲ ಪ್ರದರ್ಶನ ನಡೆದು ವರ್ಷದ ತಿರುಗಾಟ ಮುಕ್ತಾಯವಾಗುತ್ತದೆ.

ಅಂಡಾಲ ದೇವಿ ಪ್ರಸಾದ ಶೆಟ್ಟಿ, ಬಲಿಪ ಪ್ರಸಾದ ಭಟ್, ದೇವಿಪ್ರಸಾದ ಆಳ್ವ ತಲಪಾಡಿ, ಶ್ರೀನಿವಾಸ ಬಳ್ಳಮಂಜ, ಪದ್ಯಾಣ ಗೋವಿಂದ ಭಟ್ ಮತ್ತು ಪುಂಡಿಕಾಯ್ ಗೋಪಾಲಕೃಷ್ಣ ಭಟ್ ರವರ ಪ್ರಧಾನ ಭಾಗವತಿಕೆಯಲ್ಲಿ ಈ ಆರು ಮೇಳಗಳು ಈ ಸಾಲಿನ ತಿರುಗಾಟ ನಡೆಸಲಿವೆ
ಕಟೀಲು ಯಕ್ಷಗಾನ ಮಂಡಳಿಯಲ್ಲಿ ಆರು ಮೇಳಗಳಿದ್ದರೂ, 20 ವರ್ಷಕ್ಕೆ ಯಕ್ಷಗಾನ ಮುಂಗಡ ಬುಕ್ಕಿಂಗ್ ಆಗಿದೆ ಅನ್ನುವುದು ಕರಾವಳಿಗರ ಯಕ್ಷಗಾನದ ಮೇಲಿನ ಶ್ರದ್ಧೆ, ಕಟೀಲು ದುರ್ಗೆಯ ಮೇಲಿನ ಭಕ್ತಿಗೆ ದ್ಯೋತಕವಾಗಿದೆ. ಕಟೀಲು ಮೇಳದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಪ್ರಸಂಗಕ್ಕೆ ವಿಶೇಷ ಪ್ರಾಶಸ್ತ್ಯವಿದ್ದು, ಒಂದೊಂದು ಮೇಳಗಳಲ್ಲಿಯೂ ವರ್ಷಕ್ಕೆ ಕನಿಷ್ಠ 90ರಿಂದ 100ರಷ್ಟು ಇದೇ ಪ್ರಸಂಗವನ್ನು ಆಡಿಸಲಾಗುತ್ತದೆ. ಉಳಿದಂತೆ “ಶ್ರೀದೇವಿ ಲಲಿತೋಪಾಖ್ಯಾನ’, ಕಟೀಲು ಕ್ಷೇತ್ರ ಮಹಾತ್ಮೆ ಸೇರಿದಂತೆ ಎಲ್ಲಾ ಪೌರಾಣಿಕ ಪ್ರಸಂಗಗಳನ್ನು ಆಡಿಸಲಾಗುತ್ತದೆ.

ಈಗಾಗಲೇ ಹಟ್ಟಿಯಂಗಡಿ, ಮಂದಾರ್ತಿ, ಬಪ್ಪನಾಡು, ಪಾವಂಜೆ ಮೇಳಗಳು ತಿರುಗಾಟ ಆರಂಭಿಸಿದೆ. ಧರ್ಮಸ್ಥಳ ಮೇಳವು ಒಂದು ತಿಂಗಳ ಕಾಲ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಯೇ ಪ್ರದರ್ಶನ ನೀಡಲಿದೆ. ಡಿಸೆಂಬರ್ 5ರ ಬಳಿಕ ತಿರುಗಾಟ ಆರಂಭಿಸಲಿದೆ.

ಅದೇ ರೀತಿ ತೆಂಕಿನ ಗಜಮೇಳವಾದ ಹನುಮಗಿರಿ, ತುಳು ಪ್ರಸಂಗಗಳನ್ನು ಪ್ರದರ್ಶಿಸುವ ಸುಂಕದಕಟ್ಟೆ, ಸಸಿಹಿತ್ಲು, ಮಂಗಳಾದೇವಿ, ದೇಂತಡ್ಕ ಮೇಳಗಳು ತಿರುಗಾಟಕ್ಕೆ ಸಜ್ಜಾಗುತ್ತಿವೆ. ಬಡಗಿನ ಟೆಂಟ್ ಮೇಳಗಳಾದ ಪೆರ್ಡೂರು, ಸಾಲಿಗ್ರಾಮ ಮೇಳಗಳು ಹೊಸ ಪ್ರಸಂಗಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದು, ಉಳಿದಂತೆ ಬಡಗಿನ ಕಮಲಶಿಲೆ, ಗೋಳಿಗರಡಿ, ಸೌಕೂರು ಮುಂತಾದ ಮೇಳಗಳು ತಿರುಗಾಟಕ್ಕೆ ಅಣಿಯಾಗುತ್ತಿದೆ.

ಒಟ್ಟಾರೆಯಾಗಿ ಕಳೆದೆರಡು ವರ್ಷದಿಂದ ಪೂರ್ಣ ಪ್ರಮಾಣದ ಯಕ್ಷಗಾನ ತಿರುಗಾಟ ನಡೆಯದೇ ಅದನ್ನೆ ನಂಬಿಕೊಂಡು ಜೀವನ ನಡೆಸುತ್ತಿರುವ ಕಲಾವಿದರು ಕಂಗಾಲಾಗಿದ್ದರು. ಆದರೆ ಈ ಬಾರಿ ಪೂರ್ಣ ಪ್ರಮಾಣದ ಯಕ್ಷಗಾನ ನಡೆಯಲಿದೆ ಎಂಬ ವಿಶ್ವಾಸದಿಂದ ಯಕ್ಷ ಕಲಾವಿದರು ಗೆಜ್ಜೆ ಕಟ್ಟಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಲು ತಯಾರಾಗಿದ್ದಾರೆ. ಯಕ್ಷಗಾನವನ್ನೇ ನಂಬಿ ಬದುಕು ಕಟ್ಟಿಕೊಂಡ ಕಲಾವಿದರು ಕರಾವಳಿಯಲ್ಲಿ ಸಾವಿರಾರು ಮಂದಿ ಇದ್ದಾರೆ. ಯಕ್ಷಗಾನ ತಿರುಗಾಟ ಪೂರ್ಣ ಪ್ರಮಾಣದಲ್ಲಿ ನಡೆಯದೇ ಹೋದರೆ ಜೀವನಕ್ಕಾಗಿ ತುಂಬಾ ಕಷ್ಟ ಪಡುವ ಸ್ಥಿತಿ ಈ ಕಲಾವಿದರ ಕುಟುಂಬದ್ದು. ಹೀಗಾಗಿ ಈ ಬಾರಿ ಆದರೂ ಯಾವುದೇ ಅಡೆ ತಡೆ ಬಾರದೆ ಇರಲಿ ಅಂತ ದೇವರ ಮೇಲೆ ಭಾರ ಹಾಕಿ ವಿಶ್ವಾಸದೊಂದಿಗೆ ಗೆಜ್ಜೆ ಕಟ್ಟಲು ಸಿದ್ದತೆ ಮಾಡಿಕೊಂಡಿದ್ದಾರೆ ಯಕ್ಷಗಾನ ಕಲಾವಿದರು.




ಪೋಟೊ : ಟೆಲಿಗ್ರಾಮ್
Uncategorized
loan write off ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂ. ರೈಟ್-ಆಫ್….

ನವದೆಹಲಿ: ದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂಪಾಯಿ ಸಾಲವನ್ನು ರೈಟ್ ಆಫ್ ಮಾಡಿದ್ದು, ಇದರಲ್ಲಿ 5.52 ಲಕ್ಷ ಕೋಟಿ ರೂ. ದೊಡ್ಡ ಕೈಗಾರಿಕೆಗಳಿಗೆ ಸಂಬಂಧಿಸಿರುವುದಾಗಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ನಿನ್ನೆ (ಡಿ.05) ಮಾಹಿತಿಯನ್ನು ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾಹಿತಿಯ ಪ್ರಕಾರ ದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳು ಕಳೆದ ಐದು ಹಣಕಾಸು ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂಪಾಯಿಯನ್ನು ರೈಟ್ ಆಫ್ ಮಾಡಿವೆ ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ವಿತ್ತ ಖಾತೆಯ ರಾಜ್ಯ ಸಚಿವ ಭಾಗವತ್ ಕರದ್ ಈ ರೀತಿಯಾಗಿ ಸಂಸತ್ತಿನಲ್ಲಿ ಮಾಹಿತಿ ನೀಡಿದರು.ಇದೇ ಅವಧಿಯಲ್ಲಿ ವಸೂಲಾಗದ ಒಟ್ಟು ಸಾಲದಲ್ಲಿ (ಎನ್ಪಿಎ) ₹7.15 ಲಕ್ಷ ಕೋಟಿಯನ್ನು ವಸೂಲಿ ಮಾಡಲಾಗಿದೆ ಎಂದು ಹೇಳಿದರು.
ರೈಟ್ ಆಫ್ ಮತ್ತು ಸಾಲಮನ್ನಾ ನಡುವೆ ಒಂದು ವ್ಯತ್ಯಾಸವಿದೆ. ಅದೇನೆಂದರೆ, ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ನಿಂದ ಮರುಪಾವತಿಯಾದ ಸಾಲವನ್ನು ತೆಗದುಹಾಕಿ ಎನ್ಪಿಎ ವರ್ಗಕ್ಕೆ ಸೇರಿಸುತ್ತದೆ. ಅಂದರೆ, ಸಾಲವನ್ನು ಬ್ಯಾಂಕ್ನ ಆಸ್ತಿ ಎಂದು ಪರಿಗಣಿಸುವುದಿಲ್ಲ. ಆದರೆ, ಸಾಲವನ್ನು ರೈಟ್ ಆಫ್ ಮಾಡಿದ ನಂತರವೂ ಸಾಲ ಮರುಪಾವತಿ ಪ್ರಕ್ರಿಯೆ ಮುಂದುವರಿಯುತ್ತದೆ. ಆದರೆ, ಸಾಲಮನ್ನಾ ವಿಚಾರಕ್ಕೆ ಬಂದಾಗ ಬ್ಯಾಂಕ್ ನೀಡಿದ ಸಾಲವನ್ನು ಸಂಪೂರ್ಣವಾಗಿ ವಜಾಗೊಳಿಸಲಾಗುತ್ತದೆ. ಅಂದರೆ, ಬ್ಯಾಂಕ್ ಮತ್ತು ಸಾಲ ಪಡೆದವನ ನಡುವೆ ಯಾವುದೇ ಒಪ್ಪಂದ ಇರುವುದಿಲ್ಲ. ಹೀಗಾಗಿ ಸಾಲವನ್ನು ಮರುಪಾವತಿ ಮಾಡುವ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.
ಸುಮಾರು 2300 ಕಂಪನಿಗಳು ವಿವಿಧ ವಾಣಿಜ್ಯ ಬ್ಯಾಂಕ್ಗಳಿಂದ 5 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದು ಮರುಪಾವತಿ ಮಾಡಿಲ್ಲ. ಈ ಮೊತ್ತವೇ ಸುಮಾರು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ಮಾರ್ಗಸೂಚಿಗಳು ಮತ್ತು ನೀತಿಯ ಪ್ರಕಾರ, ಬ್ಯಾಂಕ್ಗಳು ಈ ಮೊತ್ತವನ್ನು ಎನ್ಪಿಎ ವರ್ಗಕ್ಕೆ ಸೇರಿಸಿವೆ.
ಸರ್ಕಾರದ ಸೂಕ್ತ ಕ್ರಮಗಳ ಅನುಷ್ಠಾನದಿಂದ ಇದು ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
2018-19ನೇ ಹಣಕಾಸು ವರ್ಷದಿಂದ 2022-23ನೇ ಹಣಕಾಸು ವರ್ಷದವರೆಗೆ ಕಳೆದ ಐದು ವರ್ಷಗಳಲ್ಲಿ ಬೃಹತ್ ಕೈಗಾರಿಕೆಗಳು ಮತ್ತು ಇತರೆ ಸೇವೆಗಳಿಗೆ ಸಂಬಂಧಿಸಿದ 5.52 ಲಕ್ಷ ಕೋಟಿ ರೂ.ಗಳನ್ನು ವಾಣಿಜ್ಯ ಬ್ಯಾಂಕುಗಳು ರೈಟ್ ಆಫ್ ಮಾಡಿವೆ. ಇದರಲ್ಲಿ 93,874 ಕೋಟಿ ರೂ. ವಂಚನೆಯ ಹಣವೂ ಸೇರಿದೆ. ಒಟ್ಟು 10.57 ಲಕ್ಷ ಕೋಟಿ ರೂ.ಗಳು ಅಂದರೆ, ಶ್ರೀಮಂತರ ಲಕ್ಷಾಂತರ ಕೋಟಿ ರೂಪಾಯಿ ಕೂಡ ಮನ್ನಾವಾದಂತೆ.
Uncategorized
New Simcard Rules :ಸಿಮ್ ಕಾರ್ಡ್ ಖರೀದಿಗೆ ಕೇಂದ್ರ ಸರಕಾರ ಜಾರಿಗೆ ತಂದಿದೆ ಕಠಿಣ ನಿಯಮಗಳು – ಬೇಕಾಬಿಟ್ಟಿ ಅಕ್ಟಿವೇಶನ್ ಗೆ ಕಡಿವಾಣ – ಇಲ್ಲಿದೆ ಕಂಪ್ಲಿಟ್ ಡಿಟೈಲ್

New simcard Rules: ಒಂದು ಕಾಲದಲ್ಲಿ ನಾಯಿ ಕೊಡೆಗಳಂತೆ ಬೇಕಾಬಿಟ್ಟಿಯಾಗಿ ಸಿಗುತ್ತಿದ್ದ ಮೊಬೈಲ್ ಸಿಮ್ ಕಾರ್ಡ್ (Sim card) ಗಳ ಖರೀದಿ ಎನ್ನುವುದು ಮುಂದಿನ ದಿನಗಳಲ್ಲಿ ಗಜ ಪ್ರಸವ ಆಗಲಿದೆ. ಈ ಹಿಂದೆ ಯಾರು ಯಾರದೋ ಗುರುತಿನ ಚೀಟಿ (ID Card) ಭಾವಚಿತ್ರಕ್ಕೆ ಇನ್ಯಾರಿಗೋ ಸಿಮ್ ಕಾರ್ಡ್ ನೀಡುತ್ತಿದ್ದ ಹಲವು ನಿದರ್ಶನಗಳು ಕಂಡು ಬಂದಿದ್ದವು . ವಂಚಕರು ಕಾಳ ಸಂತೆಯಲ್ಲಿ ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿ , ಅದನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದನ್ನು ನಾವು ಕಾಣಬಹುದು . ಸದ್ಯ ಪೊಲೀಸರಿಗೆ ಅಪರಾಧ ತನಿಖೆಯಲ್ಲಿ ಸಿಮ್ ಕಾರ್ಡ್ ಅತೀ ದೊಡ್ಡ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಅಲ್ಲದೇ ದೇಶದಲ್ಲಿ ದಿನೇದಿನೆ ಸೈಬರ್ ಪ್ರಾಡ್ ಗಳು ಹೆಚ್ಚುತ್ತಿದ್ದು, ವಂಚಕರು ಪೊಲೀಸ್ ತನಿಖೆಯಿಂದ ತಪ್ಪಿಸಿಕೊಳ್ಳಲು ನಕಲಿ ಸಿಮ್ ಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಸಿಮ್ ಕಾರ್ಡ್ಗಳ ಮೋಸದ ಮಾರಾಟವನ್ನು ತಡೆಯಲು ಭಾರತದ ಟೆಲಿಕಾಂ ಇಲಾಖೆ ಈ ವರ್ಷದ ಆಗಸ್ಟ್ನಲ್ಲಿ ಟೆಲಿಕಾಂ ಆಪರೇಟರ್ಗಳಿಗೆ ಹೊಸ ನಿಯಮಗಳನ್ನು ಘೋಷಿಸಿತ್ತು. ಆರಂಭದಲ್ಲಿ, ಈ ನಿಯಮಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ನಿಯಮಗಳ ಜಾರಿಯನ್ನು ಎರಡು ತಿಂಗಳ ಕಾಲ ಮುಂದೂಡಲಾಯಿತು.
ದೂರಸಂಪರ್ಕ ಇಲಾಖೆ (DoT) ನಕಲಿ ಸಿಮ್ ಕಾರ್ಡ್ಗಳಿಗೆ ಸಂಬಂಧಿಸಿದ ವಂಚನೆಗಳನ್ನು ತಡೆಗಟ್ಟಲು ಡಿಸೆಂಬರ್ 1, 2023 ರಿಂದ ಹೊಸ ಸಿಮ್ ಕಾರ್ಡ್ ನಿಯಮಗಳನ್ನು ಜಾರಿಗೆ ಬಂದಿದೆ. ನಕಲಿ ಸಿಮ್ ಕಾರ್ಡ್ಗಳಿಗೆ ಲಿಂಕ್ ಮಾಡಲಾದ ವಂಚನೆಗಳನ್ನು ಪರಿಹರಿಸಲು ಈ ನಿಯಮಗಳನ್ನು ರೂಪಿಸಲಾಗಿದ್ದು, ಅನುಸರಿಸದಿದ್ದಲ್ಲಿ ದಂಡ ಮತ್ತು ಜೈಲು ಶಿಕ್ಷೆಗೆ ಒಳಗಾಗಬಹುದು.
ಹೊಸ ಸಿಮ್ ಕಾರ್ಡ್ ಪಡೆಯಲು ಸಾಮಾನ್ಯವಾಗಿ ಗುರುತಿನ ಚೀಟಿಯನ್ನು ಕೊಟ್ಟರೆ ಕೆಲವು ಗಂಟೆಗಳ ನಂತರ ಸಿಮ್ ಕಾರ್ಡ್ ಆಕ್ಟಿವೇಶನ್ ಆಗುತ್ತಿತ್ತು, ಆದರೆ ಈಗ ಅದು ಸಾಧ್ಯವಿಲ್ಲ.ದೂ ಇನ್ನು ಮುಂದೆ, ಮಾರಾಟಗಾರರು ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವಲ್ಲಿ ಅನೇಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ದೂರಸಂಪರ್ಕ ಇಲಾಖೆಯ ಈ ನಿಯಮವನ್ನು ಪಾಲಿಸದಿದ್ದರೆ 10 ಲಕ್ಷ ರೂಪಾಯಿಗಳವರೆಗೆ ದಂಡ ಕಟ್ಟಬೇಕು. ದೇಶದಲ್ಲಿ ಹೆಚ್ಚುತ್ತಿರುವ ಸಿಮ್ ಕಾರ್ಡ್ ವಂಚನೆ ದರವನ್ನು ತಡೆಯಲು ಸರ್ಕಾರದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಕಲಿ ಸಿಮ್ ಕಾರ್ಡ್ಗಳ ಮಾರಾಟವನ್ನು ತಡೆಯಲು ಮಾರಾಟಗಾರರಿಗೆ ಈ ನಿಯಮ ತಂದಿದ್ದರೂ, ಇದು ಖರೀದಿದಾರರ ಮೇಲೂ ಪರಿಣಾಮ ಬೀರುತ್ತದೆ.
ಪ್ರಮುಖವಾಗಿ ಪ್ರಿ-ಆಕ್ಟಿವೇಟೆಡ್ ಸಿಮ್ ಕಾರ್ಡ್ಗಳು ದೇಶದಲ್ಲಿ ಮಾರಾಟವಾಗುತ್ತಿರುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ, ಆ ಸಿಮ್ಗಳನ್ನು ಬೇರೆಯವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈಗ ಸಿಮ್ ಕಾರ್ಡ್ ಮಾರಾಟವನ್ನು ಕಟ್ಟುನಿಟ್ಟಾಗಿ ಮಾಡಲು ಸಾಧ್ಯವಾದರೆ, ಅಂತಹ ವಂಚನೆಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಸರ್ಕಾರ ಹೇಳಿದೆ.
ಹೊಸ ಸಿಮ್ ಕಾರ್ಡ್ ಪಡೆಯಲು ನಿಯಮಗಳು :
*ವ್ಯಾಪಾರ ಸಂಪರ್ಕದ ಮೂಲಕ ಮಾತ್ರ ಸಿಮ್ ಕಾರ್ಡ್ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿಸಲಾಗಿದೆ. ಸಾಮಾನ್ಯ ಬಳಕೆದಾರರು ಹಿಂದಿನಂತೆ ಈಗಲೂ ಕೂಡ ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್ಗಳನ್ನು ಪಡೆಯಬಹುದು.
*ಸಿಮ್ ಕಾರ್ಡ್ ಅನ್ನು ಕ್ಲೋಸ್ ಆದ 90 ದಿನಗಳ ಅವಧಿಯ ನಂತರವೇ ಆ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಲಾಗುತ್ತದೆ.
*ಅಸ್ತಿತ್ವದಲ್ಲಿರುವ ತಮ್ಮ ಫೋನ್ ಸಂಖ್ಯೆಗಳಿಗೆ ಸಿಮ್ ಕಾರ್ಡ್ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ ಮತ್ತು ಇತರ ಡೆಮೊಗ್ರಾಫಿಕ್ ಡೇಟಾವನ್ನು ಸಲ್ಲಿಸಬೇಕಾಗುತ್ತದೆ.
*ರಿಜಿಸ್ಟರ್ ಆಗದ ಡೀಲರ್ಗಳ ಮೂಲಕ ಸಿಮ್ ಕಾರ್ಡ್ಗಳ ಮಾರಾಟ ಮಾಡಿಸಿದರೆ ಟೆಲಿಕಾಂ ಆಪರೇಟರ್ಗಳ ಮೇಲೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
*ರಿಜಿಸ್ಟರ್ ಆಗದ ಡೀಲರ್ಗಳ ಮೂಲಕ ಪಡೆದ ಸಿಮ್ ಕಾರ್ಡ್ ಹಾಗೂ ಫೋನ್ ನಂಬರ್ಗಳನ್ನು ಮರುಪರಿಶೀಲಿಸಲಾಗುತ್ತದೆ.
*ಅಸ್ತಿತ್ವದಲ್ಲಿರುವ ಪಾಯಿಂಟ್ ಆಫ್ ಸೇಲ್ (ಪಿಒಎಸ್) ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಪಿಒಎಸ್ ಅಥವಾ ಚಿಲ್ಲರೆ ವ್ಯಾಪಾರಿಗಳು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಲಿಮಿಟೆಟ್ ಲಯಾಬಿಲಿಟಿ ಪಾರ್ಟ್ನರ್ಶಿಪ್ ಐಡೆಂಟಿಫಿಕೇಶನ್ ನಂಬರ್ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್, ಪಾನ್ ಕಾರ್ಡ್, ಸರಕು ಮತ್ತು ಸೇವಾ ತೆರಿಗೆ (GST) ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.
*ಪಿಒಎಸ್ CIN, LLPIN, ಇನ್ಕಾರ್ಪೊರೇಶನ್ ಪ್ರಮಾಣಪತ್ರ, ಪಾನ್ ಮತ್ತು ಜಿಎಸ್ಟಿ ಪ್ರಮಾಣಪತ್ರವಿಲ್ಲದಿದ್ದರೆ, ಅದು ಅಫಿಡವಿಟ್ ಸಲ್ಲಿಸಬೇಕು. ಮತ್ತು ಈ ದಾಖಲೆಗಳನ್ನು ಲಭ್ಯವಾದ ತಕ್ಷಣವೇ ಸಲ್ಲಿಸಬೇಕಾಗುತ್ತದೆ.
* ಒಂದು ವೇಳೆ ಪಿಒಎಸ್ ನಕಲಿ ದಾಖಲೆಗಳನ್ನು ಸಲ್ಲಿಸಿದರೆ ಟೆಲಿಕಾಂ ಆಪರೇಟರ್ಗಳು ಅದರ ಐಡಿ ಅನ್ನು ನಿರ್ಬಂಧಿಸಬೇಕಾಗುತ್ತದೆ ಮತ್ತು ಪಿಒಎಸ್ ನಿಂದ ನೋಂದಾಯಿಸಲ್ಪಟ್ಟ ಎಲ್ಲಾ ಗ್ರಾಹಕರ ಸಿಮ್ಗಳನ್ನು ಮರುಪರಿಶೀಲಿಸಬೇಕಾಗುತ್ತದೆ.
Uncategorized
Yettinahole project: ಎತ್ತಿನಹೊಳೆ ಯೋಜನೆ ಪ್ರಾಯೋಗಿಕ ಪರೀಕ್ಷೆ : ಪೈಪ್ ಗಳಿಂದ ಭಾರಿ ಪ್ರಮಾಣದ ನೀರು ಸೋರಿಕೆ – ನಡುಗಿದ ಭೂಮಿ, ಅದುರಿದ ಮನೆಗಳು – 6 ಕಿಮೀಗೆ ಹೀಗಾದರೇ ನೂರಾರು ಕಿಮೀ ಹರಿಯುವಾಗ ಏನಾಗಬಹುದು?

ಹಾಸನ: ಎತ್ತಿನಹೊಳೆ ಯೋಜನೆಯ (Yettinahole project) ಅಂಗವಾಗಿ ಕಟ್ಟಲಾಗಿರುವ ಸಕಲೇಶಪುರ (Sakleshpur) ತಾಲ್ಲೂಕಿನ ಕಾಡುಮನೆ ಚೆಕ್ ಡ್ಯಾಂನಿಂದ ದೊಡ್ಡ ನಾಗರ ಶೇಖರಣಾ ಘಟಕಕ್ಕೆ ಅಧಿಕಾರಿಗಳು ನಿನ್ನೆ ಪ್ರಾಯೋಗಿಕವಾಗಿ ನೀರು ಹರಿಸಿದ್ದಾರೆ. ಇದುವರೆಗೆ ಪೈಪ್ಲೈನ್ ಪೂರ್ಣಗೊಂಡಿರುವ 6 ಕಿ.ಮೀಗಳಷ್ಟು ದೂರದವರೆಗೆ ಪ್ರಾಯೋಗಿಕವಾಗಿ ನೀರು ಹರಿಸಿದ್ದಾರೆ.
ಹೀಗೆ ಪ್ರಾಯೋಗಿಕವಾಗಿ ನೀರು ಹರಿಸಿದ ವೇಳೆ ಭಾರಿ ಪ್ರಮಾಣದ ನೀರು (Water leakage) ಸೋರಿಕೆಯಾಗಿದೆ. ಅರ್ಧಕ್ಕೂ ಹೆಚ್ಚು ನೀರು ಪೈಪ್ಲೈನ್ನಿಂದ ಆಚೆ ಬಂದಿದೆ. ಹಲವೆಡೆ ರಸ್ತೆ ಕುಸಿತವುಂಟಾಗಿದೆ. ಹಾಸನ ಜಿಲ್ಲೆಯ ದೇಖಲ, ಕುಂಬರಡಿ, ಮಲ್ಲಾಗದ್ದೆ ಗ್ರಾಮಗಳಲ್ಲಿ ರಸ್ತೆಗಳು ಕುಸಿದಿವೆ. ಈ ಎಲ್ಲ ಕಡೆ ರಸ್ತೆ ಹಾನಿಯಿಂದ ಜನರ ಓಡಾಟಕ್ಕೆ ತೊಂದರೆಯಾಯಿತು. ಪೈಪ್ ನಿಂದ ನೀರು ಸೋರಿಕೆಯ ರಭಸಕ್ಕೆ ದೇಖಲ ಗ್ರಾಮದಲ್ಲಿ ಮುಖ್ಯ ರಸ್ತೆಯೊಂದು ಕುಸಿದಿದೆ. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಕಾಫಿ ಮಂಡಳಿಯ ಜೀಪು ಈ ಗುಂಡಿಯೊಳಗೆ ಸಿಕ್ಕಿಕೊಂಡು ಹರಸಾಹಸದಿಂದ ಮೇಲೆತ್ತಲಾಗಿದೆ.
ಕಾಡಮನೆಯಿಂದ ದೊಡ್ಡನಾಗರ ನೀರು ಶೇಖರಣಾ ಕೇಂದ್ರದವರೆಗೆ, ಕಾಡಮನೆ, ಮಲ್ಲಾಗದ್ದೆ, ನಡಹಳ್ಳಿ, ದೇಖಲ, ಕುಂಬರಡಿ, ಹೆಬ್ಬಸಾಲೆ ಮುಖ್ಯ ರಸ್ತೆಯ ಬದಿಯಲ್ಲಿಯೇ ಪೈಪ್ಗಳನ್ನು ಜೋಡಿಸಲಾಗಿದೆ.. ಭೂಮಿಯೊಳಗೆ ಜೋಡಣೆ ಮಾಡಿರುವ ಪೈಪ್ನಲ್ಲಿ ನೀರು ಹರಿಯುವ ವೇಗ ಹಾಗೂ ಒತ್ತಡಕ್ಕೆ ಮೇಲ್ಬಾಗದ ಭೂಮಿ ನಡುಗುತ್ತದೆ. ಮನೆಯೇ ಅದುರುತ್ತಿದ್ದು, ಭಯದಿಂದ ಮನೆಯೊಳಗಿನಿಂದ ಹೊರಗೆ ಓಡಿ ಬಂದಿದ್ದಾಗಿ’ ದೇಖಲ ಗ್ರಾಮಸ್ಥರು ಹೇಳಿದ್ದಾರೆ.
ಈ ʼಪ್ರಾಯೋಗಿಕ ಅನಾಹುತʼದ ಪರಿಣಾಮ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ನೀರು ಹರಿಸುವಿಕೆ ನಿಲ್ಲಿಸಿದ್ದಾರೆ. ಆರು ಕಿಲೋಮೀಟರ್ ಕಾಮಗಾರಿಗೇ ಇಷ್ಟು ಅನಾಹುತ ಆದರೆ, ಇನ್ನು ಕೋಲಾರದವರೆಗೂ ತಲುಪಬೇಕಿರುವ ನೂರಾರು ಕಿಲೋಮೀಟರ್ ಕಾಮಗಾರಿ ಹೇಗಿರಬಹುದು, ಏನೇನು ಅನಾಹುತ ಉಂಟುಮಾಡಬಹುದು ಎಂದು ಸ್ಥಳೀಯರು ಪ್ರಶ್ನಿಸುವಂತಾಗಿದೆ.

ಒಟ್ಟು 8 ಪಂಪ್ಗಳಿಂದ, 5 ಪೈಪ್ಗಳಲ್ಲಿ ದೊಡ್ಡನಾಗರ ಶೇಖರಣಾ ಕೇಂದ್ರಕ್ಕೆ ನೀರು ಹರಿಸಲಾಗುತ್ತದೆ. ಕಾಡಮನೆ ವೈರ್ 5 ರಿಂದ ಡಿಸಿ 2 ರವರೆಗೆ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿದೆ. ನೀರು ಯಾವ ರೀತಿ ಹರಿಯುತ್ತದೆ ಎಂಬುದನ್ನು ಪರೀಕ್ಷೆ ಮಾಡಲು, ಈ ಮಾರ್ಗದ 6 ಕಿ.ಮೀ. ಪ್ರದೇಶದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.
‘ಭೂಮಿಯೊಳಗೆ ಪೈಪ್ಗಳನ್ನು ಜೋಡಣೆ ಮಾಡಿ 5 -6 ವರ್ಷಗಳಾಗಿವೆ. ಹಾಗಾಗಿ ಕೆಲವೆಡೆ ವೆಲ್ಡಿಂಗ್ ಬಿಟ್ಟು ಹೋಗಿರುವುದು, ಮತ್ತೆ ಕೆಲವು ತಾಂತ್ರಿಕ ಕಾರಣಗಳಿಂದ ಕೆಲವೆಡೆ ನೀರು ಸೋರಿಕೆ ಆಗಿದೆ. ನೀರು ಹರಿಸಿ ಪರೀಕ್ಷೆ ಮಾಡುವುದರಿಂದ ಇಂತಹ ಸೋರಿಕೆ, ನೀರು ಹರಿವಿನ ಒತ್ತಡ ಗೊತ್ತಾಗುತ್ತದೆ’ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ತಿಳಿಸಿದ್ದಾರೆ.
“ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಲಾಗಿದೆ. ದುರಸ್ತಿ ಕಾಮಗಾರಿಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ. ರಸ್ತೆ ಹಾಗೂ ಇನ್ನಿತರ ಯಾವುದೇ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿ ಹಾನಿ ಆಗಿದ್ದರೆ ದುರಸ್ತಿ ಮಾಡಲಾಗುವುದು. ಈ ಬಗ್ಗೆ ಸುತ್ತಲಿನ ಗ್ರಾಮಸ್ಥರು ಆತಂಕ ಪಡುವುದು ಬೇಡ. ಯಾವುದೇ ಸಮಸ್ಯೆಗಳಿದ್ದರೂ ಇಲಾಖೆ ತಕ್ಷಣ ಸ್ಪಂದಿಸುತ್ತದೆ’ ಎಂದು ಭರವಸೆ ನೀಡಿದ್ದಾರೆ.

ಸಕಲೇಶಪುರ (Sakleshpura) ತಾಲೂಕಿನ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಮತ್ತು ಹೊಂಗಡಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹ ನೀರನ್ನು ಏಳು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ 6,657 ಗ್ರಾಮಗಳ 75.59 ಲಕ್ಷ ಜನ-ಜಾನುವಾರುಗಳಿಗೆ 13.931 ಟಿಎಂಸಿ ಕುಡಿಯುವ ನೀರು ಒದಗಿಸುವುದು ಎತ್ತಿನ ಹೊಳೆ ಯೋಜನೆಯ ಪ್ರಮುಖ ಉದ್ದೇಶ
ಇದರ ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ಐದು ಜಿಲ್ಲೆಯ ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 10.064 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ 50% ರಷ್ಟು ತುಂಬಿಸಿ ಅಂತರ್ಜಲ ಮರುಪೂರ್ಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
-
ದಕ್ಷಿಣ ಕನ್ನಡ2 days ago
ಪುತ್ತೂರು : ಕುಡಿದು ಟೈಟಾಗಿದ್ದ ಚಾಲಕ ವಿವೇಕಾನಂದ ವಿದ್ಯಾ ಸಂಸ್ಥೆಯ ಬಸ್ಸನ್ನು ಯದ್ವಾತದ್ವಾ ಚಲಾಯಿಸಿ ಸರಣಿ ಅಪಘಾತ – ಮಾಜಿ ಶಾಸಕಿಯ ಪುತ್ರನ ಕಾರು ಸೇರಿ 3 ವಾಹನಕ್ಕೆ ಢಿಕ್ಕಿ – ಪಾನಮತ್ತ ಚಲಾಯಿಸುತ್ತಿದ್ದ ಬಸ್ಸಿನಲ್ಲಿದ್ದರು ವಿದ್ಯಾರ್ಥಿಗಳು..̆
-
ದಕ್ಷಿಣ ಕನ್ನಡ2 days ago
ವಿಟ್ಲ : ಅಡಿಕೆ ಮರ ಮುರಿದು ಬಿದ್ದು ಮಹಿಳೆ ಸಾವು
-
ಸುಳ್ಯ1 day ago
College student rape case ಪುತ್ತೂರು : ಕಾಲೇಜ್ ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ ಪ್ರಕರಣ – ಬಂಧಿತ ಆರೊಪಿಗೆ 2 ತಿಂಗಳ ಬಳಿಕ ಜಾಮೀನು
-
ರಾಜಕೀಯ2 days ago
CM Siddaramaiah: ಐಸಿಸ್ ಉಗ್ರ ಸಂಘಟನೆಯ ಬೆಂಬಲಿಗನ ಜತೆ ಹುಬ್ಬಳಿಯಲ್ಲಿ ವೇದಿಕೆ ಹಂಚಿಕೊಂಡ ಸಿ. ಎಂ.ಸಿದ್ದರಾಮಯ್ಯ : ಚಿತ್ರ ಸಹಿತ ಯತ್ನಾಳ್ ಗಂಭೀರ ಆರೋಪ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
-
ಉದ್ಯೋಗ1 day ago
Job Alert: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ – ಸದ್ಯದಲ್ಲೆ ಸಾರಿಗೆ ಇಲಾಖೆಗೆ 9 ಸಾವಿರ ಸಿಬ್ಬಂದಿಗಳ ನೇಮಕ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
-
Uncategorized2 days ago
loan write off ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂ. ರೈಟ್-ಆಫ್….
-
ಪುತ್ತೂರು1 day ago
Puthila Parivara | ಪುತ್ತೂರು ನಗರಸಭೆ 2 ವಾರ್ಡ್ ಮರುಮತದಾನ – ಬಿಜೆಪಿ ಕಾಂಗ್ರೇಸ್ ನಡುವೆ ಕಾರ್ಯಕರ್ತರ ಒತ್ತಾಯದಂತೆ ಪುತ್ತಿಲ ಪರಿವಾರ ಮತ್ತೊಂದು ಚುನಾವಣೆ ಎದುರಿಸುವುದು ಬಹುತೇಕ ಫಿಕ್ಸ್ : ವಿಧಾನಸಭಾ ಚುನಾವಣೆಯಲ್ಲಿ ಈ ವಾರ್ಡ್ ಗಳಲ್ಲಿ ಯಾರಿಗೆ ಎಷ್ಟು ಮತದಾನವಾಗಿತ್ತು ಗೊತ್ತೇ.?
-
ಅಪರಾಧ21 hours ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?