ಮಂಗಳೂರು: ಈ ಹಿಂದೆ ಪತ್ತೆಯಾದ ಕೊವೀಡ್ ವೈರಸಿನ ತಳಿಗಳಿಗಿಂತ ಅಧಿಕ ವೇಗದಲ್ಲಿ ಹಬ್ಬತ್ತದೆ ಎಂಬ ಆತಂಕ ವ್ಯಕ್ತವಾಗುತ್ತಿರುವ ರೂಪಾಂತರಿತ ತಳಿ ಒಮ್ರಿಕಾನ್ ತಳಿಯೂ ದಕ್ಷಿಣ ಆಫ್ರಿಕಾ ಸೇರಿದಂತೆ ನಾನಾ ಕಡೆ ಪತ್ತೆಯಾದ ಬೆನ್ನಲೆ ಭಾರತದಲ್ಲಿ ಮೂರನೇ ಅಲೆಯ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ದ.ಕ ಜಿಲ್ಲೆಯ ಕೇರಳ – ಕರ್ನಾಟಕ ಗಡಿಭಾಗಗಳಲ್ಲಿ ಸೋಮವಾರದಿಂದ ವಾಹನ ತಪಾಸಣೆ ಬಿಗಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.
ಅರ್ ಟಿ ಪಿಸಿಅರ್ ನೆಗೆಟಿವ್ ವರದಿ ಕಡ್ಡಾಯ :
ಕೇರಳದಿಂದ ದ.ಕ ಗಡಿ ಪ್ರವೇಶಿಸುವವರು ಕಡ್ಡಾಯವಾಗಿ ಅರ್ ಟಿ ಪಿಸಿಅರ್ ನೆಗೆಟಿವ್ ವರದಿ ಹೊಂದಿರಬೇಕು. ಇಲ್ಲದಿದ್ದರೆ ಗಡಿ ಭಾಗದಲ್ಲಿ ಸ್ವಾಬ್ ಟೆಸ್ಟ್ ಮಾಡಲಾಗುತ್ತದೆ. 2 ಡೋಸ್ ಕೊವೀಡ್ ಲಸಿಕೆ ಪಡೆದಿದ್ದರೂ ಅರ್ ಟಿ ಪಿಸಿಅರ್ ಟೆಸ್ಟ್ ಕಡ್ಡಾಯ ಎಂಬ ತೀರ್ಮಾನಕ್ಕೆ ಜಿಲ್ಲಾಡಳಿತ ಬಂದಿದೆ.
ಸಿ.ಎಂ ಸೂಚನೆಯ ಬಳಿಕ ಜಿಲ್ಲಾಡಳಿತದ ತೀರ್ಮಾನ :
ಭಾನುವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, “ ರಾಜ್ಯದ ಮುಖ್ಯಮಂತ್ರಿಯವರು ಶನಿವಾರ ಸಭೆ ನಡೆಸಿ ನೀಡಿದ ಸೂಚನೆಯಂತೆ ಕೇರಳದಿಂದ ಗಡಿ ದಾಟಿ ಜಿಲ್ಲೆಗೆ ಬರುವವರಿಗೆ ಸೋಮವಾರದಿಂದ ಕೆಲವೊಂದು ಕಠಿಣ ನಿಬಂಧನೆಗಳನ್ನು ಹಾಕಲಾಗುವುದು. ಕೇರಳ ರಾಜ್ಯದಲ್ಲಿ ಪಾಸಿಟಿವ್ ದರ ಶೇ. 8ಕ್ಕಿಂತ ಇನ್ನೂ ಕಡಿಮೆಯಾಗಿಲ್ಲ. ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಗಡಿ ಪ್ರದೇಶದಲ್ಲಿ ದಿನದ 24 ಗಂಟೆಯೂ ಪೊಲೀಸರು ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಮೂರು ಪಾಳಿಯಲ್ಲಿ ತಪಾಸಣೆ ನಡೆಯಲಿದೆ ಎಂದರು.

ತುಸು ಸಡಿಲಗೊಳಿಸಲಾಗಿತ್ತು
ಅನ್ಲಾಕ್ ಬಳಿಕ ಕಳೆದ ಒಂದು ತಿಂಗಳಿನಿಂದ ಗಡಿ ತಪಾಸಣೆ ತುಸು ಸಡಿಲಗೊಳಿಸಲಾಗಿತ್ತು. ಇದೀಗ ಸಂಭಾವ್ಯ ಮೂರನೇ ಅಲೆಯನ್ನು ತಡೆಯಲು ತಪಾಸಣೆ ಬಿಗಿಗೊಳಿಸಲಾಗುತ್ತಿದೆ. ಕೇರಳ – ದಕ್ಷಿಣ ಕನ್ನಡ ಜಿಲ್ಲೆ ನಡುವೆ ಬಸ್ ಸಂಚಾರ ಆರಂಭಿಸಲಾಗಿದ್ದು, ಇದು ಸದ್ಯ ಮುಂದುವರಿಯಲಿದೆ. ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಇರುವುದರಿಂದ ನಮಗೆ ಇದೊಂದು ಸವಾಲಾಗಿದೆ. ಕಾಸರಗೋಡಿನ ಸುಮಾರು ಶೇ. 40 ಮಂದಿ ದ.ಕ. ಜಿಲ್ಲೆಯನ್ನು ನಾನಾ ಕಾರಣಗಳಿಂದ ಅವಲಂಬಿಸಿದ್ದಾರೆ. ಕಾಸರಗೋಡು ಮತ್ತು ದ.ಕ. ಜಿಲ್ಲೆ ಅವಿನಾಭಾವ ಸಂಬಂಧ ಹೊಂದಿದೆ. ಜನರಿಗೆ ತೊಂದರೆಯಾಗದಂತೆ ಹಾಗೂ ಜಿಲ್ಲೆಯಲ್ಲಿ ಸಂಭಾವ್ಯ 3ನೇ ಅಲೆ ಬಾರದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು.

ನಿತ್ಯ ಸಂಚಾರಿಗಳ ಮುಗಿಯದ ಗೋಳು
ಹೊದೆಯೋ ಪಿಶಾಚಿ ಎಂದರೆ ಮತ್ತೆ ಬಂದೆ ಗವಾಕ್ಷಿಯಲ್ಲಿ ಎನ್ನುವ ಆಡು ಮಾತಿನಂತೆ ಕೇರಳ – ಕರ್ನಾಟಕ ಗಡಿ ಭಾಗದ ಮೂಲಕ ನಿತ್ಯ ಓಡಾಟ ನಡೆಸುವವರಿಗೆ ಇದು ಮತ್ತೆ ಕಿರಿಕಿರಿ ಸಂಕಷ್ಟ ಉಂಟು ಮಾಡಿದೆ. ಎರಡು ಬಾರಿಯ ಲಾಕ್ ಡೌನ್ ಸಂದರ್ಭವೂ ತೀವ್ರ ತೊಂದರೆ ಅನುಭವಿಸಿದ ಈ ನಿತ್ಯ ಪ್ರಯಾಣಿಕರಿಗೆ ಇದೀಗ ಮತ್ತೊಮ್ಮೆ ಸವಾಲು ಎದುರಾಗಿದೆ
ಈ ಬಗ್ಗೆ ಜಿಲ್ಲಾಧಿಕಾರಿಗಳು “ ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಮಧ್ಯೆ ದಿನನಿತ್ಯ ಓಡಾಡುವವರೇ ನಿಜವಾದ ಸವಾಲು. ಆದುದರಿಂದ ಈ ಬಗ್ಗೆ ಜಾಗೃತರಾಗಬೇಕಾಗಿದೆ. ನಾವು ಏನು ಕ್ರಮಕೈಗೊಂಡರೂ ಜನರ ಸುರಕ್ಷತೆಗೆ ಎಂದು ತಿಳಿದು ಎಲ್ಲರೂ ಸಹಕಾರ ನೀಡಬೇಕು. ತಲಪಾಡಿ ಗಡಿಯಲ್ಲಿ ನಿಮಿಷಕ್ಕೆ 60ಕ್ಕೂ ಅಧಿಕ ವಾಹನಗಳು ಓಡಾಡುವುದರಿಂದ ಅವುಗಳ ತಪಾಸಣೆ ನಡೆಸಬೇಕಾಗಿದೆ. ಕೇರಳಕ್ಕೆ ಪ್ರವಾಸ ಹೋದವರು, ಬರುವವರು ಕೂಡ ಕಡ್ಡಾಯವಾಗಿ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕಾಗಿದೆ ಎಂದರು.
Watch video : ಸುರತ್ಕಲ್ ನ ಹಿಂದೂ ಸಮಾವೇಶದಲ್ಲಿ ಕು| ಹಾರಿಕ ಮಂಜುನಾಥ್
ರಿಸ್ಕಿ ದೇಶದಿಂದ ಬರುವವರ ವಿಶೇಷ ನಿಗಾ
ದಕ್ಷಿಣ ಆಫ್ರಿಕಾ ಸೇರಿದಂತೆ ಸೋಂಕು ಹೆಚ್ಚಿರುವ ಅಪಾಯದ ಪಟ್ಟಿಯಲ್ಲಿರುವ ದೇಶದಿಂದ ಬಂದವರ ಪಟ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿಲ್ಲಾಡಳಿತಕ್ಕೆ ಕಳುಹಿಸುವುದಾಗಿ ರಾಜ್ಯದಿಂದ ಸೂಚನೆ ಬಂದಿದೆ. ಅದರಂತೆ ಕಳೆದ 15 ದಿನಗಳಿಂದೀಚೆಗೆ ಜಿಲ್ಲೆಗೆ ಬಂದವರ ಮಾಹಿತಿ ಸಂಗ್ರಹಿಸಿ ಅವರನ್ನು ತಪಾಸಣೆ ನಡೆಸಲಾಗುವುದು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಈಗಾಗಲೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳು ಜಾರಿಯಲ್ಲಿವೆ ಎಂದರು.
ಕೇರಳ ವಿದ್ಯಾರ್ಥಿಗಳ ತಪಾಸಣೆ :
15 ದಿನಗಳಿಂದ ಕೇರಳದಿಂದ ಬಂದ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ. ಕ್ಯಾಂಪಸ್ ಮತ್ತು ಕಾಲೇಜುಗಳ ವಿದ್ಯಾರ್ಥಿಗಳನ್ನು ಮತ್ತೊಂದು ಸುತ್ತು ಸ್ಕ್ರೀನಿಂಗ್ ಮಾಡಲು ನಿರ್ದೇಶನ ನೀಡಲಾಗಿದೆ. ಹೆಚ್ಚಿನ ಲ್ಯಾಬ್ ಟೆಕ್ನಿಶಿಯನ್ಗಳನ್ನು ನಿಯೋಜಿಸಿಕೊಂಡು ಆ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ನಾಗಬನ ಧ್ವಂಸ ಗುರುಪುರ ಸ್ವಾಮೀಜಿ ಹೇಳಿಕೆಯ ವಿಡಿಯೋ