ಪುತ್ತೂರು: ಮೈಸೂರಿನ ಫೊಟೋಗ್ರಾಫರ್ ಜಗದೀಶ್ ಅವರನ್ನು ಪುತ್ತೂರಿನ ಹೊರವಲಯ ಈಶ್ವರಮಂಗಲದ ಸಮೀಪ ಹತ್ಯೆಗೈದು ಸಿನಿಮೀಯ ಮಾದರಿಯಲ್ಲಿ ಕಾಡಿನಲ್ಲಿ ಹೂತಿಟ್ಟ ಪ್ರಕರಣದ ತನಿಖೆ ಚುರುಕು ಪಡೆದಿದ್ದು ಇಂದು ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರಿನಲ್ಲಿ ಸಂಚಲನ ಮೂಡಿಸಿದ ನಟೋರಿಯಸ್ ರೌಡಿ ತಿಂಗಳಾಡಿ ಉಮೇಶ್ ರೈ ಕೊಲೆ ಪ್ರಕರಣ ಪ್ರಮುಖ ಆರೋಪಿಯಾಗಿದ್ದ, ಸದ್ಯ ಆ ಪ್ರಕರಣದಿಂದ ಖುಲಾಸೆಗೊಂಡಿರುವ ಬಡಗನ್ನೂರು ಗ್ರಾಮದ ಹ್ಯಾಮರ್ ಜಯರಾಜ್ ಅಲಿಯಾಸ್ ಅಣಿಲೆ ಜಯರಾಜ್ ಶೆಟ್ಟಿ (48ವ) ಬಂಧಿತ ಆರೋಪಿ. ಈತನ ವಿರುದ್ದ ಉಮೇಶ್ ರೈ ಕೊಲೆ ಪ್ರಕರಣ ಹೊರತುಪಡಿಸಿಯೂ ಹಲವು ಕ್ರಿಮಿನಲ್ ಪ್ರಕರಣಗಳು ವಿವಿಧ ಠಾಣೆಯಲ್ಲಿ ದಾಖಲಾಗಿದ್ದವು. ಜಯರಾಜ್ ಬಂಧನದ ಬಳಿಕ ಜಗದೀಶ್ ಹತ್ಯೆಯ ಒಟ್ಟು ಬಂಧಿತರ ಸಂಖ್ಯೆ 5ಕ್ಕೆರಿದೆ
ಪ್ರಸ್ತುತ ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರ ನಿವಾಸಿಯಾಗಿದ್ದ, ಮೂಲತ: ಮಂಗಳೂರು ತಾಲೂಕು ಕಾವೂರು ಗ್ರಾಮದ ಶಿವನಗರ ಮುಲ್ಲಕಾಡು ಸಿಂಧೂರ ಮನೆ ನಿವಾಸಿ ದಿ.ಶಂಭು ಶೆಟ್ಟಿಯವರ ಮಗ ಜಗದೀಶ್ (58ವ.)ರವರು ನ 18ರಿಂದ ಕಣ್ಮರೆಯಾಗಿದ್ದು ಅವರನ್ನು ಹತ್ಯೆಗೈದಿರುವುದು ನ .24 ರಂದು ಬೆಳಕಿಗೆ ಬಂದಿತ್ತು.

ತನ್ನ ಕೃಷಿ ಜಮೀನನ್ನು ನೋಡಲು ನ .18ರಂದು ಬೆಳಿಗ್ಗೆ ಮೈಸೂರಿನಿಂದ ಪುತ್ತೂರಿಗೆ ಆಗಮಿಸಿ ತನ್ನ ಸಂಬಂಧಿ ಮನೆಗೆ ತೆರಳಿದ್ದ ವೇಳೆ ಅವರನ್ನು ಉಪಾಯವಾಗಿ ಕಾರಿನಲ್ಲಿ ಕೂರಿಸಿ ಹಿಬ್ಬಂದಿಯಿಂದ ಅವರ ತಲೆಗೆ ಹ್ಯಾಮರ್ ನಿಂದ ಬಡಿದು ಹತ್ಯೆಗೆಯ್ಯಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಜಗದೀಶ್ ದೂರದ ಸಂಬಂಧಿಯಾಗಿದ್ದ ಹಾಗೂ ಅವರ ಪುತ್ತೂರಿನಲ್ಲಿರುವ ಎರಡು ಜಮೀನಿನ ಪವರ್ ಅಪ್ ಅಟಾರ್ನಿ ಹೋಲ್ಡರ್ ಎನ್ನಲಾಗುತ್ತಿರುವ ನೆಟ್ಟಣಿಗೆಮುಡ್ನೂರು ಗ್ರಾಮದ ಪಟ್ಲಡ್ಕ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರೈ, ಆತನ ಪತ್ನಿ ಜಯಲಕ್ಷ್ಮೀ ರೈ, ಮಗ ಪ್ರಶಾಂತ್ ರೈ ಮತ್ತು ಹತ್ತಿರದ ಮನೆಯ ಸಂಜೀವ ಗೌಡ ಪಟ್ಲಡ್ಕ ಅವರ ಮಗ ಜೀವನ್ಪ್ರಸಾದ್ ರವರನ್ನು ನ.24 ರಂದು ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗಳ ಪೈಕಿ ಜಯಲಕ್ಷ್ಮೀ ರೈಗೆ ನ್ಯಾಯಾಲಯವೂ ನ್ಯಾಯಾಂಗ ಬಂಧನ ವಿಧಿಸಿದರೆ, ಉಳಿದ ಮೂವರನ್ನು ಹೆಚ್ಚಿನ ತನಿಖೆಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.

ಹತ್ಯೆಯ ಒಳ ಸಂಚು ನಡೆಸಿದ ಆರೋಪದ ಮೇರೆಗೆ ಜಯರಾಜ್ ನನ್ನು ಪೊಲೀಸರು ಬಂಧಿಸಿದ್ದರು. ಮೂಲಗಳ ಪ್ರಕಾರ ಹತ್ಯೆಯೊಂದು ಪೂರ್ವಯೋಜಿತ ಕೃತ್ಯವಾಗಿದ್ದು ಕೊಲೆಯ ಸಂಪೂರ್ಣ ರೂಪುರೇಶೆಯನ್ನು ಜಯರಾಜ್ ಸಿದ್ದ ಪಡಿಸಿದ್ದ ಎನ್ನಲಾಗಿದೆ. ಹಾಗಾಗಿಯೂ ಆತ ಕೊಲೆಯಲ್ಲಿ ನೇರ ಬಾಗಿಯಾದ ಬಗ್ಗೆ ಯಾವುದೇ ಖಚಿತ ಕುರುಹು ಸಿಕ್ಕಿಲ್ಲ ಎನ್ನಲಾಗಿದೆ.
ಆರೋಪಿ ಜಯರಾಜನನ್ನು ಇಂದು ಸಂಜೆ ಪುತ್ತೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ಕೋರ್ಟು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.