ಮಂಗಳೂರು: ಸ್ಥಳೀಯಾಡಳಿತ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅವರ ಚುನಾವಣಾ ಕಛೇರಿ ಉದ್ಘಾಟನೆ ನ. 16 ರಂದು ಕೊಡಿಯಾಲ್ ಬೈಲ್ ನ ಇನ್ಲ್ಯಾಂಡ್ ಓರ್ನಟ್ ಸಂಕೀರ್ಣದಲ್ಲಿ ನಡೆಯಿತು.
ಕಛೇರಿ ಉಧ್ಘಾಟನೆ ಬಳಿಕ ಸಭಾ ಕಾರ್ಯಕ್ರಮವನ್ನು ಧರ್ಮ ಗುರುಗಳಾದ ಫಾ. ಸಂತೋಷ್ ಕಾಮತ್, ಮಹಮ್ಮದ್ ಕಾಮಿಲ್ ಸಖಾಫಿ, ಪುರೋಹಿತ ರಮೇಶ್ ಭಟ್ ಉದ್ಘಾಟಿಸಿ ಆಶೀರ್ವಚನ ನೀಡಿದರು.
ರಾಜೇಂದ್ರ ಕುಮಾರ್ ಸರ್ವಧರ್ಮಗಳ ಪಕ್ಷಾತೀತ ಅಭ್ಯರ್ಥಿ. ಸಮಾಜ ಸೇವಕರಿಗೆ ಯಾವುದೇ ಪಕ್ಷದ ಅಗತ್ಯವಿಲ್ಲ. ಜನ ಸಾಮನ್ಯರ ಸಹಕಾರವೇ ಶಕ್ತಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಹೇಳಿದರು
ಸಮಾಜದಲ್ಲಿ ಅಶಕ್ತರು, ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಡಾ| ಎಂ.ಎನ್. ಆರ್. ಅವರು ಒಕ್ಕೂಟದ ಸಮಾಜ ಸೇವಾ ಕಾರ್ಯಗಳಿಗೆ ಸದಾ ನೆರವು ನೀಡುತ್ತ ಬಂದಿದ್ದಾರೆ ಎಂದು ಅವರು ಹೇಳಿದರು.

“ವಿಧಾನ ಪರಿಷತ್ನಲ್ಲಿ ಸಹಕಾರಿ ಕ್ಷೇತ್ರಕ್ಕೆ ಒಂದು ಅವಕಾಶವನ್ನು ನೀಡುವ ನಿಟ್ಟಿನಲ್ಲಿ ನನ್ನನ್ನು ಬೆಂಬಲಿಸಿ ಎಂದು ಮತದಾರರಲ್ಲಿ, ಎಲ್ಲ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಹಕಾರಿ ನೇತಾರ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಸಹಕಾರಿ ಕ್ಷೇತ್ರದ ಮೂಲಕ ಗ್ರಾಮೀಣ ಜನರ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸ್ವಾವಲಂಬಿ, ಸ್ವಾಭಿಮಾನಿ ಬದುಕು ಕಟ್ಟಿ ಕೊಡುವ ಕಾರ್ಯ ಆಗಿದೆ. ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲೂ ಇದೇ ರೀತಿ ನನ್ನನ್ನು ಬೆಂಬಲಿಸಿ ಎಂದವರು ಹೇಳಿದರು.
ಕಂಬಳ ಆಕಾಡೆಮಿಯ ಅಧ್ಯಕ್ಷ ಗುಣಪಾಲ ಕಡಂಬ ಅವರು ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್ನಲ್ಲಿ ಪ್ರಾತಿನಿಧ್ಯ ಸಿಗುವ ನಿಟ್ಟಿನಲ್ಲಿ ಡಾ| ಎಂ.ಎನ್. ಆರ್. ಅವರನ್ನು ಬೆಂಬಲಿಸಿ ಎಂದರು. ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ ಅವರು ಮಾತನಾಡಿ, ಚುನಾವಣೆಯಲ್ಲಿ ಗೆಲ್ಲುವ ಮೂಲಕ ಡಾ| ಎಂ. ಎನ್. ಆರ್. ಅವರು ಪಂಚಾಯತ್ರಾಜ್ ವ್ಯವಸ್ಥೆ ಹಾಗೂ ನಗರಾಡಳಿತ ಸಂಸ್ಥೆಗಳಿಗೆ ಶಕ್ತಿ ತುಂಬಲಿದ್ದಾರೆ ಎಂಬ ವಿಶ್ವಾಸ ಹೊಂದಿದ್ದೇವೆ ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನ ಸಂಚಾಲಕ ಸುಂದರ ಮಾಸ್ತರ್ ಅವರು ಮಾತನಾಡಿ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರು ವಿಧಾನ ಪರಿಷತ್ಗೆ ಆಯ್ಕೆಯಾಗುವುದು, ಸಹಕಾರಿ, ಗ್ರಾಮೀಣಾಭಿವೃದ್ಧಿಗೆ ಮಾತ್ರವಲ್ಲದೆ ಈ ವರ್ಗಕ್ಕೂ ಅವಶ್ಯವಾಗಿದೆ ಎಂದರು.
ಉಡುಪಿ ಜಿಲ್ಲಾ ಚುನಾವಣ ಉಸ್ತುವಾರಿ ಜಯಕರ ಶೆಟ್ಟಿ ಇಂದ್ರಾಳಿ, ಈಶ್ವರ ಭಟ್ ಪುತ್ತೂರು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಬಿಲ್ಲವ ಮುಖಂಡ ವೈ. ಸುಧೀರ್ ಕುಮಾರ್ ಮಾತನಾಡಿದರು. ಎಸ್ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಜಿ. ಪಂ. ಮಾಜಿ ಸದಸ್ಯರಾದ ಪದ್ಮಶೇಖರ ಜೈನ್, ಬಿ. ನಿರಂಜನ್, ಉದ್ಯಮಿಗಳಾದ ರೋಹನ್ ಮೊಂತೋರೊ, ಲಕ್ಷ್ಮೀಶ ಭಂಡಾರಿ, ಇನ್ಲ್ಯಾಂಡ್ ಓರ್ನೆಟ್ನ ಮಾಲಕ, ಉದ್ಯಮಿ ಸಿರಾಜ್ ಅಹಮ್ಮದ್, ಕೆ.ಪಿ.ಥೋಮಸ್ ಮತ್ತಿತರರು ಉಪಸ್ಥಿತರಿದ್ದರು.
ಎಲ್ಲರ ಗೆಲುವು
ಎಲ್ಲರ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಪಂಚಾಯತ್ರಾಜ್ ವ್ಯವಸ್ಥೆ, ನಗರಾಡಳಿತ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದ ಡಾ| ರಾಜೇಂದ್ರ ಕುಮಾರ್ ಅವರು ನ. 22 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.
ಚುನಾವಣ ಉಸ್ತುವಾರಿ ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ದ.ಕ. ಜಿಲ್ಲಾ ಚುನಾವಣ ಉಸ್ತುವಾರಿ ಶಶಿಕುಮಾರ್ ರೈ ಬಾಲ್ಯೋಟು ವಂದಿಸಿದರು. ಆರ್ಜೆ ಪ್ರಸನ್ನ ಅವರು ನಿರೂಪಿಸಿದರು.