ಮಂಗಳೂರು, ನ. 12: ಕೇರಳ ಮತ್ತು ಕರ್ನಾಟಕದಲ್ಲಿ ದುಷ್ಕೃತ್ಯದಲ್ಲಿ ಭಾಗಿಯಾದ ರೌಡಿಶೀಟರ್ ಖಾಲಿಯಾ ರಫೀಕ್ನನ್ನು ಕೊಲೆ ಮಾಡಿದ ಆರೋಪಿ ಯೂಸುಫ್ ಜಿಯಾನನ್ನು ಕೇರಳ ಎಟಿಎಸ್ (ಆ್ಯಂಟಿ ಟೆರರಿಸ್ಟ್ ಸ್ಟ್ಯಾಡ್) ಮುಂಬಯಿಯಲ್ಲಿ ಗುರುವಾರ ರಾತ್ರಿ ಬಂಧಿಸಿದೆ.
2017ರ ಫೆ.14ರಂದು ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಲಿಯಾ ರಫೀಕ್ನನ್ನು ಕೋಟೆಕಾರು ಪೆಟ್ರೋಲ್ ಬಂಕ್ ಬಳಿ ಗುಂಡಿಕ್ಕಿ ಬಳಿಕ ತಲವಾರು ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಉಪ್ಪಳ ಕೊಂಡಕೂರು ನಿವಾಸಿ ನೂರ್ಆಲಿ, ಪೆನಂತ್ತೂರು ರಶೀದ್, ಬಂಟ್ವಾಳ ಸಂಗಬೆಟ್ಟು ನಿವಾಸಿ ಹುಸೈನ್ ಅಲಿಯಾಸ್ನನ್ನು ಈ ಹಿಂದೆಯೇ ಮಂಗಳೂರು ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ಜಿಯಾ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.
ಜಿಯಾ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲಿ ಲುಕ್ಔಟ್ ನೋಟಿಸು ಹೊರಡಿಸಲಾಗಿತ್ತು. ಖಾಲಿಯಾ ಕೊಲೆ ಪ್ರಕರಣದ ಹೆಚ್ಚಿನ ವಿಚಾರಣೆಗೆ ಜಿಯಾನನ್ನು ವಶಕ್ಕೆ ನೀಡುವಂತೆ ಶೀಘ್ರವೇ ಕೇರಳ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಜಿಯಾನ ವಿರುದ್ದ ಕರ್ನಾಟಕ ರಾಜ್ಯದಲ್ಲಿ ಒಟ್ಟು ಮೂರು ಕೊಲೆ ಕೇಸುಗಳು ಇವೆ. ಗುಲ್ಬಾರ್ಗದಲ್ಲಿ 1, ಚಿಕ್ಕಮಗಳೂರಿನಲ್ಲಿ 1 ಹಾಗೂ ದ.ಕ ಜಿಲ್ಲೆಯಲ್ಲಿ ಖಾಲಿಯಾ ಮರ್ಡರ್ ಕೇಸ್ ವಿಚಾರಣೆಗೆ ಬಾಕಿ ಇದೆ. ಇದರ ಜತೆಗೆ ಕಾಸರಗೋಡಿನಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ ಸೇರಿದಂತೆ ಒಟ್ಟು 8 ಪ್ರಕರಣಗಳಿವೆ.
ಬಂಧನ ಹೀಗೆ :
ಭೂಗತ ಪಾತಕಿ ರವಿ ಪೂಜಾರಿಯ ಸಹಚರನಾಗಿದ್ದ ಜಿಯಾ ಕೇರಳ ನಟಿ ಲೀನಾ ಮರಿಯಾ ಪೌಲ್ ಬಳಿ ಹಸ್ತಾ ವಸೂಲಿಗಾಗಿ 2018ರ ಡಿ.15ರಂದು ಬ್ಯೂಟಿ ಪಾರ್ಲರ್ಗೆ ಗುಂಡು ಹಾರಿಸಿದ್ದ.

ಈ ಘಟನೆಯ ಬಳಿಕ ಜಿಯಾ ವಿದೇಶಕ್ಕೆ ಪರಾರಿಯಾಗಿದ್ದು, ಕೆಲವು ಸಮಯದ ಬಳಿಕ ನಕಲಿ ಪಾಸ್ಪೋರ್ಟ್ ಬಳಸಿ ಕೇರಳಕ್ಕೆ ಆಗಮಿಸಿದ್ದ ಗುರುವಾರ ಮತ್ತೆ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದು, ಈ ಸಂದರ್ಭ ಎಮಿಗ್ರೇಷನ್ ಅಧಿಕಾರಿಗಳು ಪರಿಶೀಲನ ನಡೆಸಿದಾಗ ನಕಲಿ ಪಾಸ್ಪೋರ್ಟ್ ಎಂದು ದೃಢಪಟ್ಟಿದೆ. ಕೂಡಲೇ ಈತನ ಬಗ್ಗೆ ಶೋಧ ನಡೆಸಿದಾಗ ಕರ್ನಾಟಕ ಮತ್ತು ಕೇರಳ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿರುವುದು ತಿಳಿದುಬಂದಿದೆ.