ಮಂಗಳೂರು : ನ 13 : ನಾಗಬನದಲ್ಲಿ ನಿರಂತರವಾಗಿ ಆರಾಧಿಸಿಕೊಂಡು ಬರುತ್ತಿದ್ದ ನಾಗನ ಕಲ್ಲುಗಳ ಪೈಕಿ ಒಂದನ್ನು ಯಾರೋ ಕಿಡಿಗೇಡಿಗಳು ಕಿತ್ತು ಎಸೆದಿರುವ ಹಾಗೂ ನಾಗ ಬನಕ್ಕೆ ಹಾನಿಗೊಳಿಸಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿರುವ ಘಟನೆ ಮಂಗಳೂರಿನ ಕೋಡಿಕಲ್ ಬಳಿ ನಡೆದಿದೆ.
ಶನಿವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದೂ, ವಿಷಯ ತಿಳಿಯುತ್ತಲೇ ನೋವಿಗೆ ಒಳಗಾದ ಭಕ್ತ ಸಮೂಹ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಬೇಕು ಹಾಗೂ ತಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಪ್ರತಿಭಟನ ನಿರತರು ಅಗ್ರಹಿಸಿದರು.
ಇಲ್ಲಿನ ನಾಗ ಬನದಲ್ಲಿನ 13 ನಾಗಕಲ್ಲುಗಳ ಪೈಕಿ ಒಂದು ಬಿಂಬವನ್ನು ಕಿಡಿಗೇಡಿಗಳು ಅಂಗಳದಲ್ಲಿ ಎಸೆದು ಹೋಗಿದ್ದು ಇದು ಅಲ್ಲಿನ ಸ್ಥಳೀಯರ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ. ಇದರ ವಿರುದ್ದ ಕೋಡಿಕಲ್ನ ನಾಗಬನದ ಬಳಿ ಶ್ರೀ ನಾಗಬ್ರಹ್ಮ ದೈವಗಳ ಸೇವಾ ಸಮಿತಿ ಕೋಡಿಕಲ್ ಇದರ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಂಗಳೂರು ಉತ್ತರ ಶಾಸಕ ಡಾ| ಭರತ್ ಶೆಟ್ಟಿಯವರು ಭಾಗವಹಿಸಿದ್ದು ಮಾತ್ರವಲ್ಲದೆ, ಸ್ವತ: ಪ್ರತಿಭಟನಕಾರರ ಜತೆ ಕೂತು ನ್ಯಾಯಕ್ಕಾಗಿ ಅಗ್ರಹಿಸಿದರು. ನಾಗಬನದ ಮುಂಭಾಗದಲ್ಲಿ ಭಕ್ತರು ಹನುಮಾನ್ ಚಾಲಿಸಾ ಸಹಿತ ಭಜನೆ ಹಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಸೋಮವಾರ ಬಂದ್
ಸಭೆಯಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ನ ಮುಖಂಡ ಶರಣ್ ಪಂಪ್ವೆಲ್ ಕೃತ್ಯ ಎಸಗಿದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸದಿದ್ದಲ್ಲಿ ಸೋಮವಾರ ಕೋಡಿಕಲ್ ಬಂದ್ಗೆ ಕರೆನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಉರ್ವ ಪೊಲೀಸರು ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗು ಭದ್ರತೆ ಕೈಗೊಂಡಿದ್ದರು. ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಿಂದ ಹೋಗಲು ಬಿಡುವುದಿಲ್ಲ :
ಆರೋಪಿಗಳನ್ನು ಬಂಧಿಸಲು ವಿಳಂಬ ಏಕೆ ? ಎಂದು ಈ ಸಂದರ್ಭ ಪೊಲೀಸ್ ಕಮಿಷನರನ್ನು ಪ್ರತಿಭಟನಕಾರರು ಪ್ರಶ್ನಿಸಿದರು. ಆರೋಪಿಗಳನ್ನು ಬಂಧಿಸುವುದಾಗಿ ಹೇಳಿಕೆ ನೀಡಬೇಕೆಂದು ಇಲ್ಲದಿದ್ದರೆ ನಿಮ್ಮನ್ನು ಸ್ಥಳದಿಂದ ಕದಲಲು ಬಿಡುವುದಿಲ್ಲ ಎಂದು ಶರಣ್ ಪಂಪ್ವಲ್ ಅವರು ಈ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದರು
“ಜಿಲ್ಲೆಯಾದ್ಯಾಂತ ಇಂತಹ ಹಲವು ಪ್ರಕರಣ ನಡೆಯುತ್ತಿದೆ. ಆದರೂ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ದೇವಸ್ಥಾನ, ದೈವಸ್ಥಾನದ ಮೇಲೂ ಕಿಡಿಗೇಡಿಗಳ ಕೃತ್ಯ ಹೆಚ್ಚಾಗುತ್ತಿದೆ. ಅಪವಿತ್ರಗೊಳಿಸಲಾಗುತ್ತಿದೆ” ಎಂದು ಶರಣ್ ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಮತದ ಸ್ಥಾನದಲ್ಲಿ ಆಗುತ್ತಿದ್ದರೆ ಗಲಾಟೆಯಾಗುತಿತ್ತು :
ಪ್ರತಿಭಟನೆ ಹಾಗೂ ಶಾಸಕ ಭರತ್ ಶೆಟ್ಟಿ ಮಾತನ್ನು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
ಬಳಿಕ ಮಾತನಾಡಿದ ಶಾಸಕ ಭರತ್ ಶೆಟ್ಟಿ “ ಇದೇ ರೀತಿಯ ಕೃತ್ಯ ಪದೇ ಪದೇ ಅಗುತ್ತಿದ್ದೂ ಇದು ಗಂಭೀರವಾದ ವಿಚಾರ. ಪೊಲೀಸ್ ಇಲಾಖೆ ತನ್ನ ಎಲ್ಲ ಪೋರ್ಸ್ ಬಳಸಿ ಈ ಪ್ರಕರಣವನ್ನು ಹಚ್ಚಬೇಕು. ನಾವು ಪೊಲೀಸರ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇದೇ ರೀತಿಯ ಕೃತ್ಯ ಬೇರೆ ಮತ, ಧರ್ಮದ ಜಾಗದಲ್ಲಿ ಈ ರೀತಿಯ ಕೃತ್ಯ ನಡೆದಿದ್ದರೆ ಇಷ್ಟು ಹೊತ್ತಿಗೆ ದೊಡ್ಡ ಗಲಾಟೆಯಾಗುತಿತ್ತು ಎಂದ ಅವರು ಹಿಂದೂಗಳು ಸಹಿಷ್ಣುಗಳು. ಹಾಗಾಗಿ ಇಲ್ಲಿ ಇನ್ನೂ ಶಾಂತಿ ಕದಡಿಲ್ಲ. ಅದರೇ ಹಿಂದೂಗಳ ತಾಳ್ಮೆಗೂ ಮಿತಿ ಇದೆ ಎಂದರು
ಸರಕಾರ ನಮ್ಮದೂ, ಮತ್ತೋಂದು ಎನ್ನುವ ವಿಚಾರವೇ ಇಲ್ಲ … ಧರ್ಮದ ವಿಚಾರ ಬಂದಾಗ ಅದನ್ನೆಲ್ಲಾ ನೋಡಲು ಸಾಧ್ಯವಿಲ್ಲ .ಈಗಾಗಾಲೇ ಕಮೀಷನರ್ ಗೆ ಎಚ್ಚರಿಕೆ ಕೊಟ್ಟಿದ್ದೇವೆ. ಇನ್ನು ಮುಂದೆ ವಿಶ್ವ ಹಿಂದೂ ಪರಿಷದ್ ಈ ಘಟನೆಯ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ. ಅದಕ್ಕೆ ನಾನು ಬದ್ದ ಎಂದು ಅವರು ಹೇಳಿದರು