ಪುತ್ತೂರು: ಪುತ್ತೂರಿನ ಎಪಿಯಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ‘ವಿದ್ಯಾಮಾತ ಅಕಾಡೆಮಿ’ ಮತ್ತು ‘ವಿದ್ಯಾಮಾತ ಫೌಂಡೇಶನ್’ ನ ಪ್ರಧಾನ ಕಚೇರಿಗೆ ಕರ್ನಾಟಕ ರಾಜ್ಯದಲ್ಲೇ ಅತ್ಯಂತ ಹೆಸರುವಾಸಿಯಾಗಿರುವ ಮತ್ತು ಸಾವಿರಾರು ಜನರಿಗೆ ಸರಕಾರಿ ಉದ್ಯೋಗ ಲಭಿಸಲು ಕಾರಣಕರ್ತರಾಗಿರುವ ‘ಚಾಣಕ್ಯ ಅಕಾಡೆಮಿ’ ವಿಜಯಪುರ ಇಲ್ಲಿನ ಮುಖ್ಯಸ್ಥರಾದ ಎನ್.ಎಮ್.ಬಿರಾದರರವರು ನ.11 ರಂದು ಭೇಟಿ ನೀಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ನೇಮಕಾತಿ, ಬ್ಯಾಂಕಿಂಗ್ ಸೇರಿದಂತೆ ಐಎಎಸ್ ವರೆಗಿನ ಹುದ್ದೆಗಳಿಗೆ ತರಬೇತಿಯನ್ನು ನೀಡುತ್ತಿರುವ ವಿದ್ಯಾಮಾತ ಅಕಾಡೆಮಿಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು.
ವಿದ್ಯಾಮಾತ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವತಯಾರಿ ಬಗ್ಗೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಎನ್. ಎಮ್. ಬಿರಾದರ ಅವರನ್ನು ವಿದ್ಯಾಮಾತ ಅಕಾಡೆಮಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾಮಾತ ಅಕಾಡೆಮಿಯ ಆಡಳಿತ ನಿರ್ದೇಶಕರಾಗಿರುವ ಭಾಗ್ಯೇಶ್ ರೈಯವರು “ನನ್ನ ಆತ್ಮೀಯರಾಗಿರುವ ಎನ್.ಎಮ್.ಬಿರಾದರ ರವರು ನಮ್ಮ ಸಂಸ್ಥೆಗೆ ಬಂದಿರುವುದು ಅತ್ಯಂತ ಸಂತೋಷದ ವಿಷಯ, ಮುಂದೆ ವಿದ್ಯಾಮಾತ ಅಕಾಡೆಮಿಯಲ್ಲಿ ಐಎಎಸ್ / ಐಪಿಎಸ್ ತರಬೇತಿಯನ್ನು ಚಾಣಕ್ಯ ಅಕಾಡೆಮಿಯ ಸಹಯೋಗದಲ್ಲಿ ಪ್ರಾರಂಭಿಸುವ ಯೋಜನೆಯಿದೆ. ಈ ನಿಟ್ಟಿನಲ್ಲಿ ಎನ್ ಎಮ್ ಬಿರಾದರ ರವರ ಸಹಕಾರ ಅತ್ಯಗತ್ಯ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಲೇಖಕರು, ವಿದ್ಯಾಮಾತ ಅಕಾಡೆಮಿಯ ಮಾರ್ಗದರ್ಶಕರು ಆದ ಅರವಿಂದ ಚೊಕ್ಕಾಡಿ ಯವರು , ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀಧರ ಭಿಡೆ, ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಮೊದಲಾದವರು ವಿದ್ಯಾಮಾತ ಅಕಾಡೆಮಿಯ ಕಾರ್ಯಕ್ರಮಗಳಿಗೆ ಶುಭವನ್ನು ಹಾರೈಸಿದರು.