ಪುತ್ತೂರು, ನ. 10: ಕನ್ನಡ-ಬದುಕು-ಬಂಗಾರ ಎಂಬ ವಿನೂತನ ಕನ್ನಡ ಭಾವಗೀತಾಭಿನಯ ಕಾರ್ಯಕ್ರಮವನ್ನು ಪುತ್ತೂರಿನ ಮುಳಿಯ ಜುವೆಲ್ಸ್ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜುವೆಲ್ಸ್ ಸಂಸ್ಥೆಯೂ ನಡೆಸಿಕೊಂಡು ಬರುತ್ತಿರುವ ʼಬೆಳೆಸೋಣ ನಮ್ಮತನʼ ಮಾಲಿಕೆಯ ಭಾಗವಾಗಿ ಈ ವಿಶಿಷ್ಟ ಮಾದರಿಯ ಕಾರ್ಯಕ್ರಮವನ್ನು ಉಡುಪಿ ಕೊಡೆವೂರಿನ ನೃತ್ಯ ನಿಕೇತನ ಸಂಸ್ಥೆಯ ಮಾನಸಿ ಸುಧೀರ್ ನಡೆಸಿಕೊಟ್ಟರು.
ಮುಳಿಯದ ಬಂಗಾರ ಮತ್ತು ಬದುಕು ಬಂಗಾರ ಎಂಬ ಪರಿಕಲ್ಪನೆಯನ್ನು ಕನ್ನಡ ಗೀತೆಗಳನ್ನು ಹಾಡುವ ಹಾಗೂ ಭಾವಭಿನಯದ ಮೂಲಕ ಪ್ರದರ್ಶಿಸುವ ಮೂಲಕ ಪ್ರಸ್ತುತ ಪಡಿಸಿದರು. ಈಗಾಗಲೇ ತನ್ನ ವಿಶಿಷ್ಟ ಮ್ಯಾನರಿಸಂ ಮೂಲಕ ಕನ್ನಡ ಗೀತೆಗಳನ್ನು ಜನ ಮಾನಸಕ್ಕೆ ಹತ್ತಿರವಾಗಿಸುವಲ್ಲಿ ಯಶಸ್ವಿಯಾಗಿರುವ, ತನ್ನ ಸೊಷೀಯಲ್ ಮೀಡಿಯಾ ಖಾತೆಗಳ ಮೂಲಕ ಭಾರೀ ಜನಪ್ರಿಯತೆಯನ್ನು ಗಳಿಸಿರುವ ಮಾನಸಿ ಸುಧೀರ್ ಇಲ್ಲೂ ಅದೇ ದಾಟಿಯ ಹಲವು ಗೀತೆಗಳನ್ನು ಪ್ರಸ್ತುತ ಪಡಿಸಿ ಬದುಕು ಬಂಗಾರವಾಗಲಿ ಎಂದರು .

ಬಳಿಕ ಮುಳಿಯ ಸಂಸ್ಥೆ ತಯಾರಿಸಿದ ಅಪೂರ್ವ ಯುನಿಕಿಯ ಸರವನ್ನು ಮಾನಸಿ ಸುಧೀರ್ ರವರು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು “ ಮುಳಿಯ ಸಂಸ್ಥೆಯು ಆಭರಣ ಕ್ಷೇತ್ರದಲ್ಲಿ ನಂಬಿಕೆ, ವಿಶ್ವಾಸದ ಪ್ರತೀಕ. ಉದ್ಯಮದ ಜತೆಗೆ ಕನ್ನಡದ ಕಂಪು ಪಸರಿಸುವ ಕಾರ್ಯವನ್ನು ಮಾಡುವ ಮೂಲಕ ನಾಡಿಗೆ ಹೊಸ ಅಭಿರುಚಿಯನ್ನು ಪರಿಚಯಿಸಿದೆ ಎಂದರು.
45 ವರ್ಷಗಳ ಹಿಂದಿನ ನೆಕ್ಲೆಸ್ ಗೆ ಬೇಡಿಕೆ :
ಮಾನಸಿ ಸುಧೀರ್ ರವರ ತಾಯಿ 45 ವರ್ಷಗಳ ಹಿಂದೆ ಮುಳಿಯದಿಂದ ನೆಕ್ಲೆಸ್ ಒಂದು ಖರೀದಿಸಿದ್ದು, ಅದನ್ನು ಇದೇ ವೇಳೆ ಪ್ರದರ್ಶಿಸಿದರು. ಅಲ್ಲದೇ, ಈ ನೆಕ್ಲೆಸ್ ನ್ನು ತಾಯಿ ನನಗೆ ಕೊಟ್ಟಿದ್ದು, ಅದನ್ನು ಇಗಲೂ ನಾನು ಬಳಸುತ್ತೇನೆ ಎಂದು ತಿಳಿಸಿದ ಅವರು ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವುದಾಗಿಯೂ ತಿಳಿಸಿದರು.
ಕೆಲ ಹೊತ್ತಿನ ಬಳಿಕ ಈ ಬಗ್ಗೆ ಮಾತನಾಡಿದ ಮುಳಿಯ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯರವರು “ ಈ ಮಾದರಿಯ ನೆಕ್ಲೆಸ್ ಈಗ ಸಿಗುತ್ತಾ ಎಂದು ಇನ್ಸ್ಟಾಗ್ರಾಮ್ ಮೂಲಕ ಚೆನ್ನೈ ಹಾಗೂ ಹುಬ್ಬಳ್ಳಿಯಿಂದ ಗ್ರಾಹಕರು ವಿಚಾರಿಸಿರುವುದಾಗಿಯು ತಿಳಿಸಿದರು.

ಕನ್ನಡ ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ ಮಾತನಾಡಿ, “ನಮ್ಮತನವನ್ನು ಬೆಳೆಸುವುದು ಹೇಗೆ ಎನ್ನುವುದಕ್ಕೆ ಮುಳಿಯ ಸಂಸ್ಥೆಯು ಸಾಕ್ಷಿಯಾಗಿ ನಿಂತಿದೆ. ಹಲವು ತಲೆಮಾರುಗಳಿಂದ ಕನ್ನಡದ ಕಂಪನ್ನು ನಾಡಿಗೆ ಪರಿಚಯಿಸುತ್ತಿರುವ ಮುಳಿಯ ಕುಟುಂಬಸ್ಥರು ಕನ್ನಡಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಸಹಕಾರ ನೀಡುವವರು. ಇದು ಶ್ಲಾಘನೀಯ” ಎಂದರು.
ಸಾಧಕರಿಗೆ ಗೌರವ
ಇದೇ ಸಂದರ್ಭದಲ್ಲಿ ಸಾಧಕರಾದ ಪಾಂಡುರಂಗ ನಾಯಕ್ ಮತ್ತು ರವಿ ರಾಮಕುಂಜ ಅವರನ್ನು ಸಮ್ಮಾನಿಸಲಾಯಿತು. ಮುಳಿಯ ಸಂಸ್ಥೆಯ ಹಿರಿಯರಾದ ಸುಲೋಚನಾ ಶ್ಯಾಮ ಭಟ್, ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಕೃಷ್ಣವೇಣಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮಾರುಕಟ್ಟೆ ವಿಭಾಗದ ಪ್ರಬಂಧಕ ನಾಮ್ ದೇವ್ ಮಲ್ಯ ಸ್ವಾಗತಿಸಿದರು. ಮಾರುಕಟ್ಟೆ ಸಲಹೆಗಾರ ವೇಣುಶರ್ಮ ಸಮ್ಮಾನಿತರ ಪರಿಚಯ ವಾಚಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.