ಮಡಿಕೇರಿ: ಮದುವೆ ಸಮಾರಂಭ ಹಾಗೂ ಇತರೆ ಆಚರಣೆಗಳ ಸಂದರ್ಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಸೇವನೆಯನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ಕೊಡವ ಸಮಾಜ ನಿಷೇಧಿಸಿದೆ. ಈ ಪದ್ಧತಿಗಳು ಕೊಡವ ಸಂಸ್ಕೃತಿಯ ಸಂಪ್ರದಾಯವಲ್ಲ ಎಂದು ಅದು ಹೇಳಿದೆ.
ಮದುವೆಯ ಗಂಡುಗಳು ಗಡ್ಡ ಬಿಡುವಂತಿಲ್ಲ. ಮದುವೆ ಹಾಗೂ ಸಮುದಾಯದ ಇತರೆ ಕಾರ್ಯಕ್ರಮಗಳಲ್ಲಿ ಸಂಪ್ರದಾಯವಲ್ಲದ ಆಚರಣೆಗಳನ್ನು ಇನ್ನು ಮುಂದೆ ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎಂದು ಕೂಡ ಕೊಡವ ಸಮಾಜ ಹೇಳಿದೆ.
ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಮದುವೆ ಹಾಗೂ ಇತರೆ ಸಮಾರಂಭಗಳನ್ನು ರಾತ್ರಿ 10 ಗಂಟೆಯ ಒಳಗೆ ಮುಗಿಸಬೇಕು ಎಂದು ಭಾನುವಾರ ನಡೆದ ತನ್ನ 99ನೇ ಸಾಮಾನ್ಯ ಸಭೆಯ ವೇಳೆ ಕೊಡವ ಸಮಾಜವು ಸಂಬಂಧಿತ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಅಧ್ಯಕ್ಷ ವಂಚಿರ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 15 ಮಂದಿ ನಿರ್ದೇಶಕರು ಮತ್ತು 357 ಮಂದಿ ಸದಸ್ಯರು ಭಾಗವಹಿಸಿದ್ದರು.
ನಿಯಮಗಳು ಹೀಗಿವೆ:
ಮದುಮಗ ತನ್ನ ಗಡ್ಡವನ್ನು ಸಂಪೂರ್ಣವಾಗಿ ಶೇವ್ ಮಾಡಿರಬೇಕು. ನವ ವಿವಾಹಿತೆಯು ತನ್ನ ತಲೆಗೂದಲನ್ನು ಸಡಿಲವಾಗಿ ಬಿಡಬಾರದು. ಗಂಗಾ ಪೂಜೆ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಬಾರದು. ಶಾಂಪೇನ್ ಬಾಟಲಿಗಳನ್ನು ತೆರೆಯಬಾರದು. ಕೇಕ್ ಕತ್ತರಿಸಬಾರದು. ಹೂವಿನ ದಳಗಳನ್ನು ಸುರಿಸುವುದನ್ನು ಮಾಡಬಾರದು. ನಾದಸ್ವರ ಮೇಳಗಳಲ್ಲಿನ ವಾದಕರು ‘ದೇವತಾ’ ಸ್ವರವನ್ನು ನುಡಿಸಬಾರದು.
ಕೊಡವ ಸಮುದಾಯದ ಯುವತಿಯರು ಬೇರೆ ಸಮುದಾಯದ ಯುವಕರನ್ನು ಮದುವೆಯಾದರೆ, ಅವರು ನಂತರ ಕೊಡವ ದಿರಿಸು ತೊಡಲು ಅವಕಾಶ ನೀಡುವಂತಿಲ್ಲ ಮತ್ತು ವಧುವಿನ ತಾಯಂದಿರು ಪತ್ತಾಕ್ ಆಭರಣವನ್ನು ಅವರಿಗೆ ತೊಡಿಸಬಾರದು ಎಂದೂ ಈ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
‘ಕೊಡವರು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ ಹೊಂದಿದ್ದಾರೆ. ನಮ್ಮ ಸಂಸ್ಕೃತಿ ಉಳಿದರೆ ಮಾತ್ರವೇ ನಾವೂ ಉಳಿಯುತ್ತೇವೆ. ಮದುವೆ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಹಂಚಿಕೊಳ್ಳುವುದು ನಮ್ಮ ಸಂಸ್ಕೃತಿ ಅಲ್ಲ. ಹೀಗಾಗಿ ಈ ಸಂಬಂಧ ವಾರ್ಷಿಕ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟಕ್ಮಾಡ ರಾಜೀವ್ ಬೋಪಯ್ಯ ಹೇಳಿದ್ದಾರೆ.