ಮಂಗಳೂರು: ಜಿಲ್ಲೆಯವರೇ ಸಚಿವರಾದರೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ಕರಾವಳಿಯ ಯಕ್ಷಗಾನ ಹಾಗೂ ಭರತನಾಟ್ಯ ಕಲೆಯ ಸಾಧಕರನ್ನು ನಿರ್ಲಕ್ಷಿಸಿರುವುದು ಖೇದಕರ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೃದಂಗ ವಿದ್ವಾಂಸ ಬಾಬು ರೈ, ಪ್ರಥಮ ಮಹಿಳಾ ಭಾಗವತಿಕೆಯ ಲೀಲಾವತಿ ಬೈಪಡಿತ್ತಾಯ, ವಿಮರ್ಶಕ ಡಾ.ಪ್ರಭಾಕರ ಜೋಶಿ, ಸಾಹಿತಿ ಮುಹಮ್ಮದ್ ಕುಳಾಯಿ ಹೆಸರು ಪರಿಗಣಿಸದಿರುವುದು ಸರಿಯಲ್ಲ.
ಡಿ.ಕೆ.ಶಿವಕುಮಾರ್ ಅವರು ಸಚಿವರಾಗಿದ್ದಾಗ ಜಿಲ್ಲೆಯ ಎಲ್ಲ ನೋಂದಾಯಿತ ಕಲಾ ಸಂಸ್ಥೆಗಳಿಗೆ ಅನುದಾನ ನೀಡಿದ್ದರು. ಈಗ ಜಿಲ್ಲೆಯವರೇ ಕನ್ನಡ ಮತ್ತು ಸಂಸ್ಕೃತಿ ಸಚಿವರಿದ್ದರೂ, ನೃತ್ಯ ಸಂಸ್ಥೆಗಳನ್ನು ಅನುದಾನದಿಂದ ಹೊರಗಿಟ್ಟು ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ನಾಥೂರಾಮ ಗೋಡ್ಸೆ ವಾದಿಗಳೇ ವಿನಾ ಅಂಬೇಡ್ಕರ್ವಾದಿಗಳಲ್ಲ. ಅವರಿಗೆ ಧೈರ್ಯವಿದ್ದರೆ ಸಂವಿಧಾನ ಬದಲಾಯಿಸಲಿ. ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಟೀಕೆ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಖಾದರ್ ಸವಾಲು ಹಾಕಿದರು.
ಸುರತ್ಕಲ್ ಸರ್ಕಲ್ಗೆ ಸಾವರ್ಕರ್ ಹೆಸರಿಡುವ ಮೊದಲು ಬಿಜೆಪಿ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಲಿ. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿರುವ ಶ್ರೀನಿವಾಸ ಮಲ್ಯ, ಕಾರ್ನಾಡ್ ಸದಾಶಿವ ರಾವ್, ಬಿ. ಜನಾರ್ದನ ಪೂಜಾರಿ ಅವರ ಹೆಸರಿಡುವ ಬಗ್ಗೆ ಯೋಚನೆ ಮಾಡಲಿ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಝಕರಿಯಾ, ರಹಮಾನ್, ಶಮೀರ್ ಕೋಟೆಪುರ ಉಪಸ್ಥಿತರಿದ್ದರು.