ಪುತ್ತೂರು: ಅ.31ರಂದು ತಾರಿಗುಡ್ಡೆಯಲ್ಲಿ ಪುತ್ತೂರು ಶಾಸಕರು ಹಾಗೂ ಅವರ ಪಟಾಲಂ ಪ್ರದರ್ಶಿಸಿದ್ದು ದುರಾಂಹಕಾರ. ಅಧಿಕಾರದ ಅಮಲಿನಲ್ಲಿ ತನ್ನದೇ ಮತದಾರರ ಮೇಲೆ ಅವರು ದಬ್ಬಾಳಿಕೆ ನಡೆಸಿದ್ದಾರೆ. ರಸ್ತೆ ದುರಸ್ತಿಗಾಗಿ ಜನರು ಮಾಡಿದ ಅಗ್ರಹವನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕುವ ಕಾರ್ಯವನ್ನು ಮಾಡಲಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಅಮಳ ರಾಮಚಂದ್ರ ಆಕ್ರೋಶ ವ್ಯಕ್ತಪಡಿಸಿ ಇಡೀ ಘಟನೆಯನ್ನು ಖಂಡಿಸಿದ್ದಾರೆ.
ಅ.31ರಂದು ಪುತ್ತೂರು ನಗರಸಭೆ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಎಂಬಲ್ಲಿ ಅಲ್ಲಿನ ಬಿಜೆಪಿಯ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸಲು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಹಾಗೂ ನಗರ ಬಿಜೆಪಿಯ ಪದಾಧಿಕಾರಿಗಳು ತೆರಳುತಿದ್ದ ಕಾರನ್ನು ಸ್ಥಳೀಯ ನಾಗರೀಕರು ತಡೆದ ಘಟನೆ ನಡೆದಿತ್ತು. ಈ ವಿಚಾರವಾಗಿ ಮಾತನಾಡಲು ಅಮಳರವರು ಪುತ್ತೂರು ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದರು.
ಚುನಾವಣೆ ಬಳಿಕ ತಮ್ಮ ಕೈಗೆ ಸಿಗದ ಶಾಸಕರು ತಮ್ಮ ಊರಿಗೆ ಬರುತ್ತಿರುವುದನ್ನು ಗಮನಿಸಿದ ಅಲ್ಲಿನ ಊರವರು ತಮ್ಮ ಗ್ರಾಮದ ಹದಗೆಟ್ಟ ರಸ್ತೆಯ ದುರಸ್ತಿಗಾಗಿ ಅಗ್ರಹಿಸಲು ಅಲ್ಲಿ ಸೇರಿದ್ದರು. ಅದರಲ್ಲಿ ಮಹಿಳೆಯರು ಹಾಗೂ ಕ್ಯಾನ್ಸರ್ ರೋಗಿಯೂ ಸೇರಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕಿಗಾಗಿ ಜನರು ಪ್ರತಿಭಟಿಸುವುದು ಸಹಜ ಪ್ರಕ್ರಿಯೆ. ಅದರಂತೆ ಅಲ್ಲಿ ಸೇರಿದ ನಾಗರೀಕರು ಶಾಸಕರ ಕಾರನ್ನು ನಿಲ್ಲಿಸಿ ಈ ಹಿಂದೆ ಚುಣಾವಣೆಯ ಸಂದರ್ಭ ನೀಡಿದ ಭರವಸೆಯಂತೆ ತಮ್ಮ ರಸ್ತೆ ದುರಸ್ತಿಗೊಳಿಸುವಂತೆ ಅಗ್ರಹಿಸಿದ್ದಾರೆ ಎಂದು ತಿಳಿಸಿದರು
ಆದರೆ ಇಷ್ಟಕ್ಕೆ ಕೆರಳಿದ ಶಾಸಕರು ಹಾಗೂ ಅವರ ಪಟಾಲಂ ಅಲ್ಲಿ ನೆರೆದಿದ್ದ ನಾಗರೀಕರು ಮೇಲೆ ಮುಗಿಬಿದ್ದಿದ್ದಾರೆ. ದಬಾಯಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ ಅವರು ಅಲ್ಲಿ ಪಕ್ಷಾತೀತ ನೆಲೆಯಲ್ಲಿ ಗ್ರಾಮಸ್ಥರು ಸೇರಿದ್ದರು. ಆದರೇ ಅವರನ್ನು ಸಮಾಧಾನಿಸುವ , ಅವರ ಅವಹಲುಗಳನ್ನು ಆಲಿಸುವ, ಅದನ್ನು ಪರಿಹರಿಸುವ ಬಗೆಯನ್ನು ಚಿಂತಿಸುವ ಬದಲು ಹಕ್ಕೊತ್ತಾಯ ಮಂಡಿಸಿದವರ ಸ್ವರ ಅಡಗಿಸುವ ಕಾರ್ಯ ಶಾಸಕರು ಹಾಗೂ ಅವರ ಸಂಗಡಿಗರು ಮಾಡಿದ್ದಾರೆ.
ಕಳೆದ ಮೂರು ಬಾರಿ ನಗರಸಭೆಗೂ ತೆರಳಿ ಅಲ್ಲಿನ ಗ್ರಾಮಸ್ಥರು ರಸ್ತೆ ರಿಪೇರಿ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಚುಣಾವಣೆ ಸಂದರ್ಭ ರಸ್ತೆಯಲ್ಲೂ ಕಾಲಿಗೆ ಅಡ್ಡಬಿದ್ದು ಓಟು ಕೇಳುವವರಿಗೆ , ರಸ್ತೆಯಲ್ಲಿ ನಿಂತು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರೇ ಅದರಲ್ಲಿ ಕೋಪಗೊಳ್ಳುವ ವಿಚಾರ ಏನಿದೆ? ಎಂದು ಅಮಳ ಪ್ರಶ್ನಿಸಿದರು.
ಈ ನಾಗರೀಕರ ಪೈಕಿ ಒಬ್ಬರು ಕ್ಯಾನ್ಸರ್ ಪೀಡಿತರು ಇದ್ದು ಅವರು ಅಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳುವಾಗ ಈ ಹದಗೆಟ್ಟ ರಸ್ತೆಯಿಂದಾಗುವ ಯಾತನೆಯನ್ನು ವಿವರಿಸಲು ಯತ್ನಿಸಿದ್ದಾರೆ. ನಿಜವಾಗಿಯೂ ಒಬ್ಬ ಕ್ಯಾನ್ಸರ್ ಪೀಡಿತ ಪ್ರಯಾಣಿಸುವ ವಾಹನ ಗುಂಡಿಗೆ ಬಿದ್ದಾಗ ಆತನ ದೇಹಕ್ಕೆ ಆಗುವ ನೋವು , ಸಂಕಟ ಅಪರಿಮಿತ. ಆದರೆ ಅದನ್ನು ಆಲಿಸುವ ಔದಾರ್ಯ ಶಾಸಕರಲ್ಲಿರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅದಾದ ಬಳಿಕ ಬಿಜೆಪಿಯ ಪುತ್ತೂರು ನಗರ ಅಧ್ಯಕ್ಷರು ಠಾಣೆಗೆ ಮೌಕಿಕ ದೂರು ನೀಡಿ ಪೊಲೀಸ್ ಬಲದ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದರು. ಅಲ್ಲದೇ, ಪೊಲೀಸರು ಇಬ್ಬರು ಅಮಾಯಕ ಹುಡುಗರನ್ನು ವಶಕ್ಕೆ ಪಡೆದರು. ಅಲ್ಲದೇ, ಯಾವುದೇ ದೂರುಗಳಿಲ್ಲದೆ, ಎಫ್ ಐ ಅರ್ ಕೂಡ ದಾಖಲಿಸದೇ ಅಕ್ರಮವಾಗಿ ಠಾಣೆಯಲ್ಲಿರಿಸಿದ ಘಟನೆಯೂ ನಡೆಯಿತ್ತು. ಇದರಿಂದ ಮನನೊಂದ ಆ ಹುಡುಗನ ತಾಯಿ ವಿಷ ಸೇವಿಸುವ ನಿರ್ಧಾರಕ್ಕೆ ಬರುವಷ್ಟು ಅಘಾತ ಅನುಭವಿಸಿದರು ಎಂದರು.
ಈ ಹಿನ್ನಲೆಯಲ್ಲಿ ಆ ನಾಗರೀಕರಿಗೆ ಬೆಂಬಲವಾಗಿ ಹಾಗೂ ಅವರ ಪರವಾಗಿ ನ್ಯಾಯ ಕೇಳಲು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ಇತರ ಕಾಂಗ್ರೇಸ್ ಮುಖಂಡರು ಪುತ್ತೂರು ನಗರ ಠಾಣೆಗೆ ತೆರಳಿದ್ದರು. ಅಲ್ಲಿ ಈ ಇಬ್ಬರು ಯುವಕರ ಅಮಾಯಕತೆಯನ್ನು ಠಾಣೆಯಲ್ಲಿದ್ದ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಆ ಬಳಿಕ ಅಲ್ಲಿನ ಅಧಿಕಾರಿಗಳು ಆ ಹುಡುಗರನ್ನು ಬಿಡಲು ಒಪ್ಪಿಗೆ ಸೂಚಿಸಿದ್ದು ಬಳಿಕ ನಮ್ಮ ನಿಯೋಗ ಅಲ್ಲಿಂದ ಹಿಂತಿರುಗಿತ್ತು. ಬಳಿಕ ಆ ಯುವಕರ ಬಿಡುಗಡೆ ಮಾಡಿದ ಬಗ್ಗೆಯೂ ಪೊಲೀಸರು ನಮಗೆ ಮಾಹಿತಿ ನೀಡಿದರು ಎಂದು ಅವರು ತಿಳಿಸಿದರು.
ಆದರೆ, ಇದಾದ ಬಳಿಕ ಬಿಜೆಪಿ ನಗರಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಪೊಲೀಸರ ವಶದಲ್ಲಿದ್ದ ಆ ಇಬ್ಬರು ಯುವಕರು ಶಾಸಕರ ಕ್ಷಮೆಯಾಚಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿದೆ ಅವರನ್ನು ಬಿಡಲಾಯಿತು ಎಂದು ಹೇಳಿದ್ದಾರೆ. ಅವರು ಯಾವ ತಪ್ಪಿಗೆ ಕ್ಷಮೆಯಾಚಿಸಿದ್ದು ಎಂದು ಬಿಜೆಪಿಯವರು ತಿಳಿಸಬೇಕು . ತಮ್ಮ ನಿತ್ಯ ಬಳಕೆಯ ರಸ್ತೆಗಾಗಿ ಹಕ್ಕೋತ್ತಾಯ ಮಾಡಿದವರನ್ನು ಪೊಲೀಸ್ ಬಳಸಿ ಹತ್ತಿಕ್ಕಿದ , ದಬ್ಬಾಳಿಕೆ ಮಾಡಿದ ದುರಂಹಕಾರ ಪ್ರದರ್ಶಿಸಿದ ಶಾಸಕರು ಹಾಗೂ ಅವರ ತಂಡ ತಾರಿಗುಡ್ಡೆಯ ನಾಗರೀಕರ ಕ್ಷಮೆಯಾಚಿಸಬೇಕಿತ್ತು. ಆದರೇ ಆ ಅಮಾಯಕ ಯುವಕರು ಕ್ಷಮೆಯಾಚಿಸಿದರು ಎನ್ನುವುದು ಬಿಜೆಪಿಯ ದಾರ್ಷ್ಟ್ಯವಲ್ಲದೆ ಬೇರೇನೂ ಅಲ್ಲ. ಇದು ದುರಂಹಕಾರದ ಪರಮಾವಧಿ ಎಂದು ಅವರು ಕಿಡಿಕಾರಿದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ಕೇಶವ ಪಡೀಲ್, ನಗರ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಯೂಸಫ್ ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಕುರಿಯ ಉಪಸ್ಥಿತರಿದ್ದರು.