ಪುತ್ತೂರು : ಕನ್ನಡ ಚಿತ್ರರಂಗದ ಅನರ್ಘ್ಯ ರತ್ನ , ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಕೋಟ್ಯಂತರ ಅಭಿಮಾನಿಗಳನ್ನು ಅಗಲಿ ಶುಕ್ರವಾರ ಮಧ್ಯಾಹ್ನ ಬಾರದ ಲೋಕಕ್ಕೆ ತೆರಳಿದ್ದಾರೆ. ಅವರ ಜತೆ ಎರಡು ಸಿನಿಮಾಗಳಲ್ಲಿ ನಟಿಸಿರುವ ಚಿತ್ರ ನಟ, ರಂಗಭೂಮಿಯ ಹಿರಿಯ ಕಲಾವಿದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಎಂ. ಕೆ ಮಠರವರಿಗೆ ಪುನೀತ್ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ತನಗಿಂತ 7 ವರ್ಷ ಚಿಕ್ಕವರಾದ ಪುನೀತ್ ಕಾಣದಂತೆ ಮಾಯವಾಗಿರುವ ಶಾಕ್ ನಿಂದ ಹೊರ ಬರಲು ಅವರು ಚಡಪಡಿಸುತ್ತಿದ್ದಾರೆ.
ಪವರ್ ಸ್ಟಾರ್ ಸಾವು ಕನ್ನಡ ಚಿತ್ರರಂಗದ ಪವರನ್ನೇ ಕಟ್ ಮಾಡಿದೆ … ಎಂದು ಹೇಳುವ ಮೂಲಕ ಪುನೀತ್ ಸಾವಿನ ಹತಾಶೆ ಹಾಗೂ ನೋವನ್ನು ಎಂಕೆ ಮಠರವರು ಬಾವುಕವಾಗಿ ವ್ಯಕ್ತಪಡಿಸಿದರು.
ಪುನೀತ್ ಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಟಿವಿಯಲ್ಲಿ ಬಿತ್ತರವಾದ ಬಳಿಕ ಈವರೆಗೆ ಅವರ ಮನೆಯ ಟಿವಿ ಅಪ್ ಆಗಿಲ್ಲ. ಪುನೀತ್ ಹಾಗೂ ಮಠರವರು ಜತೆಯಾಗಿ ಅಭಿನಯಿಸಿದ ಕೊನೆಯ ಚಿತ್ರ ( ಇದು ಪುನೀತ್ ರಾಜಕುಮಾರ್ ರವರ ತೆರೆಕಂಡ ಕೊನೆಯ ಚಿತ್ರವೂ ಹೌದು )ದ ಕೊನೆಯ ದೃಶ್ಯದಲ್ಲಿ ಅವರಿಬ್ಬರು ಒಬ್ಬರನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾರೆ. ಆ ಅಪ್ಪುಗೆಯನ್ನು ನೆನೆಸಿಕೊಂಡು ಮಠರವರು ಗದ್ಗತಿತರಾಗುತ್ತಾರೆ.

ಪುನೀತ್ ಕನ್ನಡದ ಚಿತ್ರರಂಗದ ದೊಡ್ಮನೆ ಎನಿಸಿರುವ ರಾಜ್ ಕುಟುಂಬದ ಕುಡಿ. ಅಲ್ಲದೇ ಅವರೂ 25 ಅಧಿಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಸೂಪರ್ ಸ್ಟಾರ್ . ನಾನೊಬ್ಬ ಸಾಮಾನ್ಯರಲ್ಲಿ ಸಾಮಾನ್ಯನಾದ ಸಣ್ಣ ಕಲಾವಿದ. ಆದರೇ ಅಪ್ಪುವಿಗೆ ಅದ್ಯಾವುದೇ ಹಮ್ಮು –ಬಿಮ್ಮುಗಳಿರಲಿಲ್ಲ. ನಮ್ಮ ನಡುವೆ ಆ ರೀತಿಯ ಅಂತರಗಳಿಲ್ಲದೇ ಪೂರ್ವಜನ್ಮದ ಅನುಬಂಧವೇನೂ ಅನ್ನುವಂತೆ ಅತ್ಮೀಯರಾಗಿದ್ದೇವು ಎಂದು ತಮ್ಮ ಹಾಗೂ ದಿವಂಗತ ನಟನ ನಡುವಿನ ಒಡನಾಟವನ್ನು ಅವರು ಹಂಚಿಕೊಂಡರು.

ಎಂ. ಕೆ. ಮಠರವರು ಪುನೀತ್ ಅಭಿನಯದ ರಾಜಕುಮಾರ ಹಾಗೂ ಯುವರತ್ನ ಚಿತ್ರದಲ್ಲಿ ನಟಿಸಿದ್ದಾರೆ. ರಾಜಕುಮಾರ ಚಿತ್ರದ ಸೆಟ್ ನಲ್ಲಿ ನನಗೆ ಮೊದಲ ಬಾರಿ ಅವರ ಒಡನಾಟವಾಯಿತು. ಯುವರತ್ನ ಶೂಟಿಂಗ್ ವೇಳೆ ಈ ಅನುಬಂಧ ಇನ್ನಷ್ಟು ಗಟ್ಟಿಯಾಯಿತು. ಚಿತ್ರಿಕರಣದ ವೇಳೆ ಅವರ ಅಭಿನಯಿಸುವುದನ್ನು ದೂರದಲ್ಲಿ ನಿಂತು ಗಮನಿಸುತ್ತಿದೆ. ಅಗ ಅವರು ಮಠ ಸರ್ ಇಲ್ಲಿ ಬನ್ನಿ ಅಂತ ಹತ್ತಿರ ಕರೆಯೋರು, ಹೇಗಿದ್ದೀರಿ ? ಎಂದು ಕುಶಲ ವಿಚಾರಿಸುತ್ತಿದ್ದರು . ಯುವರತ್ನ ಸಿನಿಮಾ ಶೂಟಿಂಗ್ ವೇಳೆ ನನ್ನ ಕಷ್ಟಗಳನ್ನು ಹೇಳಿಕೊಂಡಾಗ , ಏನೂ ಹೆದರಬೇಡಿ ನಾನಿದಿನಿ ಅಂತ ಧೈರ್ಯ ತುಂಬಿದ್ದರು. ಆದರೇ ಈಗ ಅವರೇ ಇಲ್ಲ ಎಂದು ಶೂನ್ಯವನ್ನು ದಿಟ್ಟಿಸಿದರು.

ನಿನ್ನೆ ಅವರಿಗೆ ಹೃದಯಘಾತವಾಗಿದೆ ಎಂಬ ಸುದ್ದಿ ಗೊತ್ತಾದ ಆ ಕ್ಷಣ ಮನಸ್ಸಿನಲ್ಲಿ ಚಡಪಡಿಕೆ ಆರಂಭವಾಗಿತ್ತು. ಅವರು ಗುಣಮುಖರಾಗಿ ಮತ್ತೆ ಬರುತ್ತಾರೆ, ಅಂತಾನೇ ನಾನು ನಂಬಿದೆ. ಅವರು ಹೋಗಿ ಬಿಟ್ರು ಅಂತಾ ಗೊತ್ತಾದ ನನ್ನ ಚಿಕ್ಕ ಮಗಳು ಆಳೋಕೆ ಶುರು ಮಾಡಿದ್ದಳು. ಅವಳು ಯಾವಗಲೋ ನನ್ನಲ್ಲಿ ಹಠ ಮಾಡುತಿದ್ದಳು ಒಮ್ಮೆ ನನ್ನ ಅಪ್ಪು ಸಾರ್ ಬಳಿ ಕರೆದುಕೊಂಡು ಹೋಗಿ ಎಂದು … ಲಾಕ್ ಡೌನ್ ಎಲ್ಲ ಮುಗಿದ ಬಳಿಕ ಕರಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದೆ …ಆದರೇ ವಿಧಿಯಾಟ ಬೇರೆಯೆ ಇತ್ತು ಎಂದು ಮೌನವಾದರು.
