ಮಂಗಳೂರು: ಮಿತಿ ಮೀರಿದ ಆದಾಯ ಸಂಪಾದನೆ ಮಾಡಿದ್ದಾರೆಂದು ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಯೊಬ್ಬರ ಮೇಲೆ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣ ಸಾಬೀತಾಗಿದ್ದು, ನ್ಯಾಯಾಲಯವೂ ಅಪರಾಧಿಗೆ 5 ವರ್ಷ ಸಜೆ ಮತ್ತು 35 ಲಕ್ಷ ರೂ. ದಂಡ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿದೆ.
ಮಂಗಳೂರು ಮನಪಾ ಸಹಾಯಕ ನಗರ ಯೋಜನಾಧಿಕಾರಿ ಎಸ್.ಇ. ಮಂಜುನಾಥ ಸ್ವಾಮಿ (50) ಶಿಕ್ಷೆಗೊಳಗಾದ ಅಪರಾಧಿ. 2007 ರಲ್ಲಿ ಇವರ ವಿರುದ್ದ ಮಂಗಳೂರು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಮಂಜುನಾಥ ಸ್ವಾಮಿ ಆದಾಯಕ್ಕಿಂತ ಹೆಚ್ಚು ಸಂಪಾದನೆ ಮಾಡಿದ್ದಾರೆಂಬ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿದ್ದ ಪ್ರಸನ್ನ ವಿ.ರಾಜು ಪ್ರಕರಣ ದಾಖಲಿಸಿಕೊಂಡಿದ್ದರು. ಲೋಕಾಯುಕ್ತ ಡಿವೈಎಸ್ಪಿ ಆಗಿದ್ದ ಸದಾನಂದ ವರ್ಣೇಕರ್ ಈ ಬಗ್ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ 3 ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಸಮಗ್ರ ವಿಚಾರಣೆ ನಡೆಸಿ ಅಪರಾಧ ಸಾಬೀತುಪಡಿಸಿ ಅಂತಿಮ ತೀರ್ಪು ನೀಡಿದ್ದಾರೆ.ಅಪರಾಧಿಗೆ 5 ವರ್ಷ ಸಾದಾ ಸಜೆ ಹಾಗೂ 35 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ ಮತ್ತೆ 1 ವರ್ಷಗಳ ಸಾದಾ ಸಜೆ ಅನುಭವಿಸಬೇಕಾಗಿದೆ.