ಕಳೆದೆರಡು ದಿನಗಳಿಂದ ಸುಳ್ಯ ನಗರ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಕೆಸರು ಮಿಶ್ರಿತ ಕೆಂಪು ಬಣ್ಣದ ನೀರನ್ನು ಸರಬರಾಜು ಮಾಡುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಭಾನುವಾರ ರಾತ್ರಿಯಿಂದ ನ.ಪಂ ತನ್ನ ನಾಗರೀಕರಿಗೆ ಸರಬರಾಜು ಮಾಡುವ ನೀರು ಪೂರ್ತಿ ಕೆಂಪು ಬಣ್ಣದಿಂದ ಕೂಡಿದೆ. ಈ ನೀರು ಬಳಸಲು ಆಯೋಗ್ಯವಾಗಿದೆ ಎಂಬ ಆರೋಪ ಅದರ ಬಳಕೆದಾರರು ಮಾಡುತ್ತಿದ್ದಾರೆ.
ಕೆಸರು ಮಿಶ್ರಣಗೊಂಡಿರುವ ಈ ನೀರನ್ನು ಗೃಹ ಬಳಕೆಗಾಗಲಿ, ಕುಡಿಯಲು ಆಗಲಿ ಬಳಸುವಂತಿಲ್ಲ. ಒಂದು ವೇಳೆ ಈ ನೀರನ್ನು ಸೇವಿಸಿದರೆ ರೋಗ ರುಜಿನಗಳು ಬರುವ ಭಯ ಸಾರ್ವಜನಿಕರನ್ನು ಕಾಡುತ್ತಿದೆ. ಆದರೇ ಇಂತಹ ಬಳಸಲು ಯೋಗ್ಯವಲ್ಲದ ನೀರನ್ನು ಅದ್ಯಾವ ಉದ್ದೇಶದಿಂದ ನಗರ ಪಂಚಾಯತ್ ಸರಬರಾಜು ಮಾಡುತ್ತಿದೆ ? ತನ್ನ ನಾಗರೀಕರ ಮೇಲೆ ಅದಕ್ಕೆ ಎಳಷ್ಟೂ ಪ್ರೀತಿ ಇಲ್ಲವೇ ? ಯಾವ ಧೈರ್ಯದ ಮೇಲೆ ಇಂತಹ ಕಲುಷಿತ ನೀರನ್ನು ಸರಬರಾಜು ಮಾಡುತ್ತಿದೆ? ಈ ನೀರು ಸೇವಿಸಿ ನಾಳೆ ಅನಾಹುತ ಸಂಭವಿಸಿದರೇ ಅದರ ಹೊಣೆಯನ್ನು ನಗರಸಭೆ ಅಧಿಕಾರಿಗಳು ಹೊರುತ್ತಾರೆಯೇ ಎನ್ನುವ ಸಾಮಾಜಿಕ ಕಳಕಳಿಯ ಪ್ರಶ್ನೆಗಳು ಜನ ಸಾಮಾನ್ಯರ ಮಧ್ಯೆ ಹುಟ್ಟಿದೆ
ನೀರು ಕಲುಷಿತಗೊಳ್ಳಲು ಕಾರಣ:
ಕಳೆದೆರಡು ದಿನಗಳಿಂದ ಭಾರೀ ಮಳೆ ಸುರಿದ ಕಾರಣ ಪಯಸ್ವಿನಿ ನದಿಯಲ್ಲಿ ಕೆಸರು ಮಿಶ್ರಿತ ಕೆಂಪು ನೀರು ಹರಿಯುತ್ತಿದೆ. ಅದೇ ನೀರು ನಗರ ಪಂಚಾಯತ್ ನಳ್ಳಿಗಳ ಮೂಲಕ ಸಾರ್ವಜನಿಕರಿಗೆ ಕುಡಿಯಲು ಮತ್ತು ಇತರ ಬಳಕೆಗೆ ಸರಬರಜು ಆಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

ಪಯಸ್ವಿನಿ ನದಿಯ ನೀರನ್ನು ಕಲ್ಲುಮುಟ್ಟುವಿನ ಪಂಪ್ ಹೌಸ್ ಮೂಲಕ ಎತ್ತಿ ಶುದ್ದಿಕರಿಸಿ ನಗರಕ್ಕೆ ನೀರು ಸರಬರಜು ಮಾಡಲಾಗುತ್ತಿದೆ. ಆದರೆ ಬೇಡಿಕೆಗೆ ತಕ್ಕಂತೆ ನೀರನ್ನು ಶುದ್ದೀಕರಿಸಿ ಸರಬರಾಜು ಮಾಡಲು ಈಗ ಇರುವ ಶುದ್ದಿಕರಣ ಘಟಕಕ್ಕೆ ಸಾಮರ್ಥ್ಯ ಇಲ್ಲ ಎಂದು ನ.ಪಂ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ ಹೇಳುತ್ತಾರೆ.

ಶುದ್ದಿಕರಣ ಘಟಕಕ್ಕೆ ಸಾಮರ್ಥ್ಯವಿಲ್ಲದ ಕಾರಣ ನೀರು ಪೂರ್ತಿಯಾಗಿ ಶುದ್ದಿಕರಣಗೊಳ್ಳುತಿಲ್ಲ. ಹಾಗಾಗಿಯೇ ಕೆಸರು ಮಿಶ್ರಿತ ಕೆಂಪು ನೀರು ನಗರಸಭೆಯ ನಳ್ಳಿಗಳಲ್ಲಿ ಹರಿದು ಬರುತ್ತಿದೆ ಎಂದು ಹೇಳಲಾಗುತ್ತಿದೆ.