ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವೂ ತಾನೂ ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಟಿತ ʼ ಸಾಹಿತ್ಯ ರತ್ನ 2020ʼ ಪ್ರಶಸ್ತಿಯೂ ಪತ್ರಕರ್ತ, ಜನಪ್ರಿಯ ಅಂಕಣಕಾರ ಹಾಗೂ ಸಾಹಿತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮೂಲದ, ಪ್ರಸ್ತುತ ಬೆಂಗಳೂರು ನಿವಾಸಿಯಾಗಿರುವ ಗಿರೀಶ್ ರಾವ್ ಹತ್ವಾರ್ ರವರ ʼ108-ನಾಲ್ಕು ದಶಕದ ಕತೆಗಳುʼ ಕೃತಿಗೆ ಘೋಷಿಸಿದೆ. 10 ಮಂದಿಯ ಆಯ್ಕೆ ಸಮಿತಿಯೂ ಪ್ರಶಸ್ತಿಗಾಗಿ ಗಿರೀಶ್ ರಾವ್ ರವರ ಕೃತಿಯನ್ನು ಆಯ್ಕೆ ಮಾಡಿದ್ದು ಡಿಸೆಂಬರ್ ತಿಂಗಳಿನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ರಾಜ್ಯಮಟ್ಟದ ಹಲವು ಪತ್ರಿಕೆಗಳಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡಿರುವ ಗಿರೀಶ್ ರಾವ್ ರವರು ಪ್ರಸ್ತುತ ರಾಜ್ಯದ ಪ್ರತಿಷ್ಟಿತ ಪತ್ರಿಕೆಗಳಲ್ಲಿ ಒಂದಾದ ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭ ಪುರಾವಣಿಯ ಸಂಪಾದಕರಾಗಿ ಕೆಲಸ ಮಾಡುತಿದ್ದಾರೆ. ಜೋಗಿ, ಜಾನಕಿ, ಗಿರೀಶ್ ರಾವ್ ಹತ್ವಾರ್, ಎಚ್ ಗಿರೀಶ ರಾವ್, ಸತ್ಯವ್ರತ ಹೊಸಬೆಟ್ಟು ಹೀಗೆ ನಾನ ಕಾವ್ಯನಾಮಗಳ ಮೂಲಕ ಅಂಕಣ, ಕಥೆ, ಚಿತ್ರ-ವಿಮರ್ಶೆ ಬರೆಯುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಸಂಪಾದಿಸಿದ್ದಾರೆ.
ಕಳೆದ ಮೂರು ದಶಕದಿಂದ ಪತ್ರಿಕಾರಂಗದಲ್ಲಿ ವಿವಿಧ ಪಾತ್ರ ನಿರ್ವಹಿಸುತ ಹೆಜ್ಜೆ ಹಾಕುತ್ತಿರುವ ಗಿರೀಶ್ ರಾವ್ ರವರು ಜೋಗಿ ಎಂದೇ ಓದುಗರಿಗೆ ಪರಿಚಿತರು. ಇವರು ಸುರತ್ಕಲ್ ಸಮೀಪದ ಹೊಸಬೆಟ್ಟು ಎಂಬಲ್ಲಿ 1965 ರ ನ. 16 ರಂದು ಕೃಷಿಕ ಶ್ರೀಧರರಾವ್ ಹಾಗೂ ಶಾರದೆ ದಂಪತಿಗಳ ಪುತ್ರನಾಗಿ ಜನಿಸಿದರು. ಇವರ ವಿದ್ಯಾಭ್ಯಾಸ ಉಪ್ಪಿನಂಗಡಿ ಹಾಗೂ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನಡೆಯಿತು. ಈ ಎರಡು ಹೆಸರುಗಳು ಮತ್ತು ಇದರ ಸುತ್ತಮುತ್ತಲಿನ ಪರಿಸರದ ಬೆರಗು ಬಿನ್ನಾಣಗಳು ಅಗಾಗ ಅವರ ಕೃತಿ ಹಾಗೂ ಅಂಕಣಗಳಲ್ಲಿ ಬಂದು ಹೋಗುತ್ತಿರುತ್ತದೆ. ಹಾಗಾಗಿ ಈ ಎರಡು ಹೆಸರುಗಳು ಅವರ ಓದುಗರಿಗೆ ಚಿರಪರಿಚಿತ.
ಬಿ.ಕಾಂ ಓದಿರುವ ಜೋಗಿಯವರು ಅದಕ್ಕೂ ಮೊದಲೇ ಸಾಹಿತ್ಯದ ಗೀಳು ಬೆಳೆಸಿಕೊಂಡು ಬರಹ ಕೃಷಿ ಆರಂಭಿಸಿದ್ದರು. 1989 ರಲ್ಲಿ ಬೆಂಗಳೂರಿಗೆ ಹೋಗಿ ಕಂಪೆನಿಯೊಂದರಲ್ಲಿ ಕೆಲಸ ಶುರು ಮಾಡಿದರು. ಇದೇ ಸಂದರ್ಭ ಕನ್ನಡ ಪ್ರಭದ ಸಂಪಾದಕರಾಗಿದ್ದ ವೈಎನ್ಕೆ, ಲಂಕೇಶ್ ಪತ್ರಿಕೆಯ ಲಂಕೇಶ್, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಮುಂತಾದವರ ನಿಕಟ ಸಂಪರ್ಕ ಅವರಗೆ ದೊರಕಿತ್ತು.

ಜನಪ್ರಿಯತೆ ತಂದುಕೊಟ್ಟ ಜಾನಕಿ ಕಾಲಂ
ರವಿಬೆಳೆಗೆರೆ ಸಾರಥ್ಯದ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆಯುತಿದ್ದ ಜಾನಕಿ ಎಂಬ ಕಾವ್ಯನಾಮದಲ್ಲಿ ಬರೆಯುತಿದ್ದ ಜಾನಕಿ ಕಾಲಂ ಅವರಿಗೆ ಮೊದಲ ಸ್ಟಾರ್ ವ್ಯಾಲ್ಯೂ ಕೊಟ್ಟ ಅಂಕಣ . ಕನ್ನಡ ಸಾಹಿತಿಗಳ ಮತ್ತು ಅವರ ಸಾಹಿತ್ಯದ ಬಗ್ಗೆ ಅವರು ಬರೆಯುತಿದ್ದ ವಿಮಾರ್ಶತ್ಮಾಕ ಅಂಕಣ ಕನ್ನಡ ಸಾಹಿತ್ಯದ ಪುಸ್ತಕದ ಜತೆಗೆ ಕವಿಗಳ ಬದುಕಿನ ಪರಿಚಯವನ್ನು ಮಾಡಿಕೊಡುತಿತ್ತು. ಒಂದೀಡಿ ದಶಕಗಳ ಕಾಲ ಆ ಅಂಕಣದ ನಿಜವಾದ ಕೃತೃ ಯಾರು ಎಂಬ ರಹಸ್ಯವನ್ನು ಪತ್ರಿಕೆಯ ಸಂಪಾದಕರು ಮತ್ತು ಅಂಕಣಕಾರರು ಗೌಪ್ಯವಾಗಿಟ್ಟಿದ್ದರು. ಅದೇ ಸಮಯದಲ್ಲಿ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರತಿ ಶುಕ್ರವಾರ ಬರುತಿದ್ದ ಸಿನಿಮಾ ವಿಮರ್ಶೆಯನ್ನು ಇವರು ಬರೆಯುತಿದ್ದರು.ಇದು ಕೂಡ ಭಾರೀ ಜನಪ್ರಿಯತೆಯನ್ನು ಗಳಿಸಿತ್ತು.
ಕೃತಿಗಳು
ನದಿಯ ನೆನಪಿನ ಹಂಗು, ಯಾಮಿನಿ, ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಾಯಾಕಿನ್ನರಿ, ಗುರುವಾಯನಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಚೈತ್ರ ವೈಶಾಖ ವಸಂತ, ಎಲ್ಲಾನು ಮಾಡುವುದು ಹೊಟ್ಟೆಗಾಗಿ, ವಿರಹದ ಸಂಕ್ಷಿಪ್ತ ಪದಕೋಶ, ಬೆಂಗಳೂರು, ಬಿ ಕ್ಯಾಪಿಟಲ್, ಸೀಳುನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ರಾಯಭಾಗದ ರಹಸ್ಯ ರಾತ್ರಿ, ಜರಾಸಂಧ, ಸೂಫಿ ಕತೆಗಳು, ಕಥಾ ಸಮಯ, ಫೇಸ್ ಬುಕ್ ಡಾಟ್ ಕಾಮ್-ಮಾನಸಜೋಶಿ, ನಾಳೆ ಬಾ, ಅಶ್ವಥ್ಥಾಮನ್, ಎಲ್ (ಕಾದಂಬರಿ), ಆಸ್ಕ್ ಮಿಸ್ಟರ್, ಜೋಗಿ ಕಾಲಂ, ನೋಟ್ ಬುಕ್, ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಕಿರುತರೆ -ಬೆಳ್ಳಿತೆರೆಯಲ್ಲಿ ದುಡಿಮೆ
ಯಶವಂತ ಚಿತ್ತಾಲರ ಶಿಕಾರಿ, ಬೆಳ್ಳಿತೆರೆ, ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇಬರತಾವ ಕಾಲ, ಶುಭಮಂಗಳ ಮುಂತಾದ ಕನ್ನಡ ಟಿವಿ ಸಿರಿಯಲ್ ಗಳಿಗೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ