ಬಂಟ್ವಾಳ: ಅ 27: ಬಿಜೆಪಿ ಮುಖಂಡನೊಬ್ಬನ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ತಾಲೂಕಿನ ಬಡಗ ಬೆಳ್ಳೂರು ಸಮೀಪ ಅ 26 ರಂದು ರಾತ್ರಿ ನಡೆದಿದೆ.
ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ನಿವಾಸಿ ಬಿಜೆಪಿಯ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಕಾಶ್ ಬೆಳ್ಳೂರು ಹಲ್ಲೆಗೊಳಗಾದವರು. ಹಿಂದೂ ಸಂಘಟನೆಯೊಂದರಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ನಿತಿನ್ ಬಡಗ ಬೆಳ್ಳೂರು, ನಿಶಾಂತ್ ಬಡಗ ಬೆಳ್ಳೂರು, ಪವನ್ ಕುಮ್ಡೇಲ್ ಹಾಗೂ ಇನ್ನಿತರರು ಸೇರಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ
ಗಂಭೀರವಾಗಿ ಗಾಯಗೊಂಡಿರುವ ಪ್ರಕಾಶ್ ಬೆಳ್ಳೂರು ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ನಿಖರ ಕಾರಣ ಎಂದು ತಿಳಿದು ಬಂದಿಲ್ಲ. ಪ್ರಕಾಶ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಆತನ ರಕ್ಷಣೆಗೆ ಧಾವಿಸಿ ಬಂದ ತಾಯಿ ಮತ್ತು ಅಣ್ಣನಿಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭ ಅಲ್ಲಿ ಜನ ಸೇರಿದ್ದು ಈ ವೇಳೆ ಕಂಡು ಆರೋಪಿಗಳು ಪರಾರಿ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ
ಬಿಜೆಪಿ ನಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳು ಬಜರಂಗದಳ ಸಂಘಟನೆಗೆ ಸೇರಿದ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ. ಹಲ್ಲೆ ಆರೋಪಿಗಳ ಕೆಲವರಿಗೆ ಆ ಸಂಘಟನೆಯಲ್ಲಿ ಪ್ರಮುಖ ಜವಬ್ದಾರಿಯೂ ಇದೆ ಎನ್ನಲಾಗಿದೆ. ಬಿಜೆಪಿ ಹಾಗೂ ಬಜರಂಗದಳ ಎರಡೂ ಸಂಘ ಪರಿವಾರದ ಭಾಗ ಎಂದೇ ಗುರುತಿಸಲಾಗುತ್ತಿದ್ದೂ , ಹಾಗಾಗಿಯೂ ತಲವಾರಿನಿಂದ ಕೊಲೆ ಯತ್ನಕ್ಕೆ ಪ್ರಯತ್ನಿಸಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ. ಹಲ್ಲೆಗೊಳಗಾಗಿರುವ ಪ್ರಕಾಶ್ ರವರು ಕೆಲ ವರ್ಷಗಳ ಕಾಲ ಅರ್ ಎಸ್ ಎಸ್ ನ ವಿಸ್ತಾರಕರಾಗಿಯೂ ಕಾರ್ಯ ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ.

ವಾರದ ಹಿಂದೆಯೂ ಪರಿವಾರದ ಕಾರ್ಯಕರ್ತರೊಬ್ಬರ ಮೇಲೆ ಇದೇ ರೀತಿ ಮಚ್ಚು ದಾಳಿಗೆ ಯತ್ನ ನಡೆದಿತ್ತು. ದಾಳಿಗೊಳಗಾದವರು ಆ ವೇಳೆ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡಿದ್ದರು. ಅಗ ಯಾವುದೇ ಗಾಯಗಳು ಅಗದ ಹಿನ್ನಲೆಯಲ್ಲಿ ಮತ್ತು ದಾಳಿ ಮಾಡಿದವರು ಹಾಗೂ ದಾಳಿಗೊಳಗಾದವರು ಒಂದೇ ಪರಿವಾರಕ್ಕೆ ಸೇರಿದವರಾದ ಹಿನ್ನಲೆಯಲ್ಲಿ ಮಾತುಕತೆಯ ಮೂಲಕ ಅದನ್ನು ತಣ್ಣಗಾಗಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದ್ದ ಪೋಸ್ಟ್ ಗೂ ಈ ಗಲಾಟೆಗೂ ಸಂಬಂಧವಿದೆ ಎನ್ನುವ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಪ್ರಕರಣ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.