ಮಂಗಳೂರು, ಅ.22: ಸಂಘ ಪರಿವಾರಕ್ಕೆ ಸೇರಿದ ಜಿಲ್ಲೆಯ ಕೆಲ ಮುಖಂಡರ ಕೊಲೆ ಮಾಡುವುದಾಗಿ ವಾಯ್ಸ್ ಮೆಸೇಜ್ನಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಮೂರು ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಮಾರಾಣಾಂತಿಕವಾಗಿ ಹಲ್ಲೆಗೊಳಗಾಗಿ ಹತ್ಯೆಗೆಯ್ಯಲ್ಪಟ್ಟ ಬಿಜೆಪಿ ಕಾರ್ಯಕರ್ತ ದಿ. ದೀಪಕ್ ರಾವ್ ಸ್ಮರಣಾರ್ಥವಾಗಿ ನಿರ್ಮಿಸಿದ ಬಸ್ ನಿಲ್ದಾಣದ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ಕೊಲೆ ಮಾಡುವ ಬೆದರಿಕೆಯೊಡ್ಡಿದ ಅಡೀಯೊವೊಂದು ವೈರಲ್ ಆಗಿತ್ತು. ಇದರ ಬೆನ್ನು ಹತ್ತಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ
ಸುರತ್ಕಲ್ ಕಾಟಿಪಳ್ಳದ 2ನೇ ಬ್ಲಾಕ್ ನಿವಾಸಿ ಮುಹಮ್ಮದ್ ನವಾಝ್ ಯಾನೆ ಪಿಂಕಿ ನವಾಝ್ (25), ಜೋಕಟ್ಟೆಯ ಮುಹಮ್ಮದ್ ಫೈಝಲ್ (21), ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಮುಹಮ್ಮದ್ ಸಫ್ವಾನ್ (23), ಕಾಟಿಪಳ್ಳ 6ನೇ ಬ್ಲಾಕ್ ನಿವಾಸಿ ಮುಹಮ್ಮದ್ ನಿಯಾಝ್ (20), ಚೊಕ್ಕಬೆಟ್ಟು ನಿವಾಸಿ ಮುಹಮ್ಮದ್ ಮುಸ್ತಫಾ (22) ಬಂಧಿತ ಆರೋಪಿಗಳು. ಇವರ ಪೈಕಿ ಪಿಂಕಿ ನವಾಝ್ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆಯ ಪ್ರಮುಖ ಆರೋಪಿ.
ಈ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಈತ ಕೆಲ ಸಮಯದ ಬಳಿಕ ಜಾಮೀನಿನಲ್ಲಿ ಹೊರಗೆ ಬಂದಿದ್ದ. ಬಂಧಿತ ಆರೋಪಿಗಳಿಂದ ತಲವಾರು,ನಾಲ್ಕು ಮೊಬೈಲ್ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಇನ್ನೂ ಹಲವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ಕು ವರ್ಷಗಳ ಹಿಂದೆ ಕೊಲೆಯಾದ ದೀಪಕ್ ರಾವ್ ನೆನಪಿಗಾಗಿ ಕಾಟಿಪಳ್ಳದ 3ನೇ ಬ್ಲಾಕ್ ದ್ವಾರದ ಸಮೀಪದಲ್ಲಿ ಹೊಸದಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಕ್ಕೆ ದೀಪಕ್ ಹೆಸರು ನಾಮಕರಣಕ್ಕೆ ತೀರ್ಮಾನಿಸಿದ್ದರು. ಅದರಂತೆ, ಬಸ್ ನಿಲ್ದಾಣವನ್ನು ಅಕ್ಟೋಬರ್ 2ರಂದು ಬೆಳಗ್ಗೆ 9:30ಕ್ಕೆ ಶಾಸಕ ಭರತ್ ಶೆಟ್ಟಿ ಉದ್ಘಾಟಿಸಿದ್ದರು.

ಇದಾದ ಬಳಿಕ ‘ಲೋಕಂಡವಾಲಾ’ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿ ಪಿಂಕಿ ನವಾಝ್ ಹಾಗೂ ಜುನ್ನಿ ಎಂಬಾತನ ನಡುವೆ ನಡೆದ ಸಂಭಾಷಣೆಯದ್ದು ಎನ್ನಲಾದ ಆಡಿಯೊ ತುಣುಕನ್ನು ಹಂಚಿಕೊಳ್ಳಲಾಗಿತ್ತು. ‘ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳನ್ನು ಕೊಲೆ ಮಾಡುತ್ತೇವೆ’ ಎನ್ನುವುದು ಆಡಿಯೊದಲ್ಲಿತ್ತು. ಇದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾಟಿಪಳ್ಳದ ಲೋಕೇಶ್ ಎಂಬವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಐವರನ್ನು ಬಂಧಿಸಿದ್ದಾರೆ.