ಪುತ್ತೂರು ತಾಲೂಕಿನ ಬಡಗನ್ನೂರಿನ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುತ್ತೂರು ನ್ಯಾಯಾಲಯ ಅ 22 ರಂದು ತಿರಸ್ಕರಿಸಿದೆ.
ಪುತ್ತೂರು ತಾಲೂಕಿನ ಸುಳ್ಯಪದವು ಸಮೀಪದ ಪಡವನ್ನೂರು ಗ್ರಾಮದ ಕುದ್ಕಾಡಿ ನಾರಾಯಣ ರೈ (73)ಯವರು ಜಾಮೀನು ಕೋರಿ ತನ್ನ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ಪುತ್ತೂರು 5 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಸಂತ್ರಸ್ತ ಬಾಲಕಿ (17) ತನ್ನ ಮೇಲೆ ನಿರಂತರ ಅತ್ಯಾಚಾರ ನಡೆದ ಬಗ್ಗೆ ದೂರು ನೀಡಿದ್ದು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅ.ಕ್ರ ಸಂಖ್ಯೆ : 80/21 ರಂತೆ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 376(2), 506, ಪೊಕ್ಸೋ ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಡಿ ಒರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೂ ಸೆ. 5 ರಂದು ಮಗುವಿಗೆ ಜನ್ಮ ನೀಡಿದ್ದಳು.
ಸಂತ್ರಸ್ತೆಯೂ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯಲ್ಲಿ ನಾರಾಯಣ ರೈ ಯವರ ಹೆಸರನ್ನು ಉಲ್ಲೇಖಿಸಿದ ಹಿನ್ನಲೆಯಲ್ಲಿ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ.

ದಲಿತ ಬಾಲಕಿಯ ಅತ್ಯಾಚಾರದ ಈ ಪ್ರಕರಣವೂ ಪುತ್ತೂರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದಲ್ಲಿ ನೈಜ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಿ ಜಿಲ್ಲಾ ದಲಿತ ಸಮನ್ವಯ ಸಮಿತಿಯಿಂದ ಪುತ್ತೂರಿನ ದರ್ಭೆಯಲ್ಲಿ ಪ್ರತಿಭಟನೆ ಸಭೆಯನ್ನು ಅ 22ರಂದು ಆಯೋಜಿಸಲಾಗಿತ್ತು. ಪೊಲೀಸರು ಬಂಧಿಸಿರುವ ಆರೋಪಿಯೂ ಸಂತ್ರಸ್ತೆಯ ಸಂಬಂಧಿಯಾಗಿದ್ದೂ ನೈಜ ಆರೋಪಿಯನ್ನು ರಕ್ಷಿಸುವ ಸಲುವಾಗಿ ಆತನನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಿಭಟನಾ ಸಭೆಯಲ್ಲಿ ಆರೋಪಿಸಿದ್ದರು.