ಗಾನ ಗಂಧರ್ವ, ಪದ್ಯಾಣ ಶೈಲಿಯ ಸೃಷ್ಟಿಕರ್ತ, ತೆಂಕುತಿಟ್ಟಿನ ಶ್ರೇಷ್ಠ ಭಾಗವತ ಶ್ರೀ ಪದ್ಯಾಣ ಗಣಪತಿ ಭಟ್ (66) ವಯೋ ಸಹಜ ಖಾಯಿಲೆಯಿಂದ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದರು. ಪದ್ಯಾಣರು ಪತ್ನಿ ಶೀಲಾಶಂಕರಿ, ಮಕ್ಕಳಾದ ಸ್ವಸ್ತಿಕ್, ಕಾರ್ತಿಕ್ ,ನೂರಾರು ಶಿಷ್ಯಂದಿರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಎರಡು ವರ್ಷಗಳ ಹಿಂದೆ ಇವರು ಪ್ರಯಾಣಿಸುತ್ತಿದ್ದ ಕಾರು ಪುತ್ತೂರು ತಾಲೂಕಿನ ತಿಂಗಳಾಡಿ ಸಮೀಪದ ಎಂಡೆಸಾಗು ಎಂಬಲ್ಲಿ ಅಪಘಾತಕ್ಕಿಡಾಗಿತ್ತು. ಆ ಆಪಘಾತದ ವೇಳೆ ಗಾಯಾಳುವಾಗಿದ್ದ ಅವರು ಬಳಿಕ ಒಂದಷ್ಟು ಚೇತರಿಸಿಕೊಂಡಿದ್ದರಾದರೂ ನಂತರ ಅವರನ್ನು ವಯೋಸಹಜ ಅನಾರೋಗ್ಯಗಳು ನಿರಂತರವಾಗಿ ಕಾಡಿದ್ದವು.
ಶ್ರೀ ಪದ್ಯಾಣ ಗಣಪತಿ ಭಟ್ಟರು ತೆಂಕುತಿಟ್ಟಿನ ಶ್ರೇಷ್ಠ ಭಾಗವತರಲ್ಲೊಬ್ಬರು. ಪ್ರಸ್ತುತ ಶ್ರೀ ಹನುಮಗಿರಿ ಮೇಳದ ಪ್ರಧಾನ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಟಿವಿಯ “ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮೊದಲ ಯಕ್ಷಗಾನ ಭಾಗವತ ಎಂಬ ಹೆಗ್ಗಳಿಕೆ ಇವರದು. ಇವರ ಗಾಯನವನ್ನು ನೋಡಿ ಕಾರ್ಯಕ್ರಮದ ನಿರ್ವಾಹಕ ಡಾ| ಎಸ್.ಪಿ. ಬಾಲಸುಬ್ರಹ್ಮಣ್ಯ ಅವರು ಪ್ರಶಂಸಿದ್ದರು. ಅಷ್ಟು ಸುಲಭವಾಗಿ ಯಾರನ್ನೂ ಮೆಚ್ಚದ ಯಕ್ಷಗಾನ ಲೋಕದ ದಂತ ಕಥೆ ಶೇಣಿ ಡಾ| ಗೋಪಾಲ ಕೃಷ್ಣ ಭಟ್ ರವರಿಂದಲೂ ಸೈ ಅನ್ನಿಸಿಕೊಂಡ ಭಾಗವತ ಪದ್ಯಾಣ. ಹಿರಿಯ ಭಾಗವತ ದಾಮೋದರ ಮಂಡೆಚ್ಚರ ನಿಧನದ ಬಳಿಕ ತಮ್ಮ ಬಹುತೇಕ ಕೂಟ , ತಾಳಮದ್ದಲೆ ಕಾರ್ಯಕ್ರಮಗಳಿಗೆ ಪದ್ಯಾಣ ಗಣಪತಿ ಅವರನ್ನೇ ಶೇಣಿಯವರು ಭಾಗವತರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು ಅಥಾವ ಕೂಟದ ಆಯೋಜಕರಿಗೆ ಶಿಫಾರಸ್ಸು ಮಾಡುತ್ತಿದ್ದರು.
ಯಕ್ಷಗಾನದಲ್ಲಿ ಅಷ್ಟೇನೂ ಬಳಕೆಯಲ್ಲಿಲ್ಲದ ಕೆಲವು ರಾಗಗಳನ್ನು ಬಳಸಿದ ಕೀರ್ತಿ ಪದ್ಯಾಣರದ್ದು. ಸಿಂಹೇಂದ್ರ ಮಧ್ಯಮ, ವೃಂದಾವನ ಸಾರಂಗ್, ಯಮನ್ ಕಲ್ಯಾಣಿ, ರೇವತಿ ಮೊದಲಾದ ರಾಗ ಪ್ರಕಾರಗಳನ್ನು ಅವರು ಭಾಗವತಿಕೆಯಲ್ಲಿ ದುಡಿಸಿಕೊಂಡವರು. ವಾಸಂತಿ ರಾಗವನ್ನು ಯಕ್ಷಗಾನದಲ್ಲಿ ಪ್ರಪ್ರಥಮ ವಾಗಿ ಅಳವಡಿಸಿದ ಕೀರ್ತಿ ಪದ್ಯಾಣರದ್ದು ಎಂದು ಹಿರಿಯ ಅಂಕಣಕಾರ ಶಾಂತರಾಮ ಕುಡ್ವರವರು ತಮ್ಮ ಅಂಕಣವೊಂದರಲ್ಲಿ ಬರೆದುಕೊಂಡಿದ್ದಾರೆ. ಹೀಗೆ ಯಕ್ಷಗಾನ ಲೋಕದಲ್ಲಿ ತಮ್ಮದೇ ಆದ ಪದ್ಯಾಣ ಶೈಲಿಯನ್ನು ಅವರು ಸೃಷ್ಟಿಸಿದ್ದರು.

ಸುಳ್ಯ ತಾಲೂಕಿನ ಕಲ್ಮಡ್ಕದ ಸಮೀಪ ಗೋಳ್ತಜೆ ಎಂಬಲ್ಲಿ ಪದ್ಯಾಣ ತಿರುಮಲೇಶ್ವರ ಭಟ್, ಸಾವಿತ್ರಿ ಅಮ್ಮ ದಂಪತಿಗಳ ಪುತ್ರನಾಗಿ 1955 ಜನವರಿ 21ರಂದು ಪದ್ಯಾಣ ಗಣಪತಿ ಭಟ್ಟರು ಜನಿಸಿದರು. ಪದ್ಯಾಣ ಕುಟುಂಬಕ್ಕೆ ಯಕ್ಷಗಾನ ರಕ್ತಗತವಾಗಿ ಒಲಿದಿತ್ತು. ಗಣಪತಿ ಭಟ್ಟರ ಅಜ್ಜ ಪುಟ್ಟುನಾರಾಯಣ ಭಟ್ಟರು ಶ್ರೇಷ್ಠ ಭಾಗವತರಾಗಿದ್ದರು. ಹಿಮ್ಮೇಳದ ಮಹಾನ್ ಗುರು ಮಾಂಬಾಡಿ ನಾರಾಯಣ ಭಾಗವತರಿಗೂ ಗುರುಸದೃಶರಾಗಿದ್ದವರು. ಗಣಪತಿ ಭಟ್ಟರ ತಂದೆ ತಿರುಮಲೇಶ್ವರ ಭಟ್ಟರೂ ಉತ್ತಮ ಮದ್ದಳೆಗಾರ
ಪದ್ಯಾಣ ಗಣಪತಿ ಭಟ್ಟರು ಸಣ್ಣ ಮಗು ವಾಗಿದ್ದಾಗ ಬಾಲಪೀಡೆ ಎಂಬ ರೋಗಕ್ಕೆ ತುತ್ತಾಗಿ ಸಾವಿನ ದವಡೆಯವರೆಗೂ ಸಾಗಿ ಪುನರ್ಜನ್ಮ ಪಡೆದಿದ್ದರು. ಇವರು ಕಲ್ಮಡ್ಕ ಸರಕಾರೀ ಶಾಲೆಯಲ್ಲಿ 7ನೇ ತರಗತಿ ಓದಿದ್ದು ಬಳಿಕ ಬೆಳ್ಳಾರೆಯ ಬಾಳಿಲ ವಿದ್ಯಾಬೋಧಿನೀ ಶಾಲೆಗೆ ಸೇರಿದ್ದರು. ಶಾಲೆಯಲ್ಲಿ ಯಕ್ಷಗಾನ ತಂಡ ಕ್ರಿಯಾಶೀಲವಾಗಿತ್ತು. ಆಗ ಶ್ರೀನಿವಾಸ ಉಡುಪರು ಅಲ್ಲಿ ಮಖ್ಯೋಪಾಧ್ಯಾಯರಾಗಿದ್ದರು. ಅವರ ಇಷಾರೆಯಂತೆ ಶಾಲಾ ವಾರ್ಷಿಕೋತ್ಸವದ ಪ್ರದರ್ಶನ ಬಭ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತು ಪಾತ್ರವನ್ನು ಮಾಡಿದ್ದರು.

ಗಣಪತಿ ಭಟ್ ಅವರಿಗೆ ಕಲಿಕೆಯಲ್ಲಿ ಅಷ್ಟು ಆಸಕ್ತಿಯಿರಲಿಲ್ಲ. ಹಿರಿಯರ ಒತ್ತಡಕ್ಕೆ ಮಣಿದು ಶಾಲೆಗೆ ಹೋಗುತ್ತಿದ್ದರು. ಹೀಗಾಗಿ ಆತ ಯಕ್ಷಗಾನವನ್ನಾದರೂ ಕಲಿಯಲಿ ಎಂದು ಅವರಮ್ಮ ಹೇಳಿದರಂತೆ. ಹೀಗಾಗಿ ಅವರು ಶ್ರೀ ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ತರಬೇತಿ ಕೇಂದ್ರ ಸೇರಿ ಅಲ್ಲಿ ಯಕ್ಷಗಾನದ ಪಟ್ಟುಗಳನ್ನು ಕಲಿತರು. ಅಲ್ಲಿ ಮಾಂಬಾಡಿ ನಾರಾಯಣ ಭಟ್ಟರ ಶಿಷ್ಯನಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡರು. ಪದ್ಯಾಣ ಗಣಪತಿ ಭಟ್ಟರು ಶೇಣಿ ಗೋಪಾಲಕೃಷ್ಣ ಭಟ್ಟರು ನನ್ನ ಎರಡನೇಯ ಗುರು ಹಾಗೂ ಅಗರಿ ಶ್ರೀ ರಘುರಾಮ ಭಾಗವತರು ನನ್ನ ಮೂರನೆಯ ಗುರುಗಳು ಎಂದು ಹೇಳಿಕೊಂಡಿದ್ದರು
ಗಣಪತಿ ಭಟ್ಟರು ತಮ್ಮ 16ರ ಹರೆಯದಲ್ಲೇ (1971ರಲ್ಲಿ) ಚೌಡೇಶ್ವರೀ ಮೇಳದಲ್ಲಿ ಸಂಗೀತಗಾರರಾಗಿ ತಮ್ಮ ಯಕ್ಷಲೋಕದ ಬದುಕು ಅರಂಭಿಸಿದರು . ಬಳಿಕ ಭಾಗವತರಾಗಿ ಕುಂಡಾವು, ಚೌಡೇಶ್ವರೀ, ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳದಲ್ಲಿ ದುಡಿದಿದ್ದಾರೆ. ಸುಮಾರು 5 ದಶಕಗಳ ಕಾಲ ಯಕ್ಷರಂಗವನ್ನು ತಮ್ಮ ಕರ್ಣಾನಂದಕರ ಗಾಯನದಿಂದ ಆಳಿದರು. ಅವರ ಇಂಪಾದ ಗಾಯನಕ್ಕೆ ಯಕ್ಷಪ್ರಿಯರು ಮನಸೋತರು. ಯಕ್ಷಗಾನದ ಸ್ಟಾರ್ ಭಾಗವತರೆನ್ನಿಸಿಕೊಂಡರು. ಜಿಲ್ಲೆಯ ವಿವಿಧ ಯಕ್ಷಗಾನ ಮೇಳಗಳಲ್ಲಿ ಕಾರ್ಯ ನಿರ್ವಹಿಸಿ ಯಕ್ಷಲೋಕವನ್ನು ಶ್ರೀಮಂತಗೊಳಿಸಿದರು.
ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪದ್ಯಾಣರು ಒಲಿದಿತ್ತು. ದುಬೈ, ಮಸ್ಕತ್, ಕುವೈಟ್ ಹೀಗೆ ವಿದೇಶಗಳಲ್ಲಿ ಪ್ರದರ್ಶನ ನೀಡಿ ಸನ್ಮಾನಗಳನ್ನು ಪಡೆದಿದ್ದಾರೆ. ಮುಂಬೈ, ದಿಲ್ಲಿ, ಕಾಸರಗೋಡು, ಶಿವಮೊಗ್ಗ, ಮಂಗಳೂರು ಸೇರಿದಂತೆ ದೇಶಾದ್ಯಂತ ಹಲವೆಡೆ ಅಭಿಮಾನಿಗಳ ಗೌರವ ಸಮ್ಮಾನಗಳನ್ನು ಅವರು ಸ್ವೀಕರಿಸಿದ್ದಾರೆ.
ಮಾಹಿತಿ : ಹಿರಿಯ ಯಕ್ಷಗಾನ ಕಲಾವಿದ ರವಿಶಂಕರ ವಳಕ್ಕುಂಜರವರು ಬರೆದ ಅಂತರಂಗದ ಧ್ವನಿ ಲೇಖನದಿಂದ ಹಾಗೂ ಹಿರಿಯ ಲೇಖಕ ಶಾಂತರಾಮ ಕುಡ್ವರವರ ಬಯಲಾಟ ಅಂಕಣದಿಂದ