ಉಪ್ಪಿನಂಗಡಿ ಪೊಲೀಸ್ ಠಾಣೆಯ ಕೆಲ ಸಿಬಂದಿಗಳು ವಿಚಾರಣೆಯ ನೆಪದಲ್ಲಿ ಕರೆಸಿ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕಾರ್ಯಕರ್ತರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಜಿಲ್ಲಾ ಪ್ರಮುಖರು ಹಲ್ಲೆಗೈದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಋಷಿಕೇಷ್ ಸೋನಾವಣೆಯವರನ್ನು ಅಗ್ರಹಿಸಿದ್ದಾರೆ.
ವಿಹಿಂಪದ ಸಕ್ರಿಯ ಕಾರ್ಯಕರ್ತ ಕಡಬ ತಾಲೂಕು ಗೋಳಿತೊಟ್ಟು ಗ್ರಾಮದ ಅರ್ತಿಗೊಳಿ ನಿವಾಸಿ ಜಗದೀಶ್ ಎಂಬವರ ಮೇಲೆ ಉಪ್ಪಿನಂಗಡಿ ಠಾಣೆಯ ಸಿಬಂದಿಗಳಾದ ಪ್ರತಾಪ್, ಸಂಗಯ್ಯ ಮತ್ತು ಶೇಖರ್ ಎಂಬವರು ರಾತ್ರಿಯಿಡಿ ಠಾಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಜಗದೀಶ್ ಅವರು ಮಂಗಳೂರಿನ ವೆನ್ ಲಾಕ್ ಅಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅ 10 ರ ರಾತ್ರಿ 10.45 ರ ಸುಮಾರಿಗೆ ಉಪ್ಪಿನಂಗಡಿ ಸರ್ಕಲ್ ಬಳಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದ್ದು ಇದರ ವಿಚಾರಣೆಗೆಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಉಪ್ಪಿನಂಗಡಿ ಪೊಲೀಸರು ಜಗದೀಶ್ ಎಂಬವರನ್ನು ಇಲಾಖಾ ಜೀಪಿನಲ್ಲಿ ಕರಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.

ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬಂದಿಗಳಾದ ಶೇಖರ್ ಗೌಡ, ಸಂಗಯ್ಯ ಪ್ರತಾಪ್ ಹಾಗೂ ಇತರ ಇಬ್ಬರು ಬೆನ್ನಿಗೆ, ಎಡ ಭಾಗದ ತಲೆಯ ಭಾಗಕ್ಕೆ,ಹೊಟ್ಟೆಗೆ ಹಾಗೂ ದೇಹದ ಇತರ ಭಾಗಗಳಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಜಗದೀಶ್ ಅವರು ಆರೋಪಿಸಿದ್ದಾರೆ.
ಆ ದಿನ ಇಡೀ ರಾತ್ರಿ ಠಾಣೆಯಲ್ಲಿ ಕೂರಿಸಿ ಮರುದಿನ ( ಅ 11 ರಂದು) 10 ಗಂಟೆಗೆ ಬಿಟ್ಟು ಕಳುಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಗದೀಶರವರ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ಸಿಬ್ಬಂದಿಗಳ ವಿರುದ್ದ ತಕ್ಷಣ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಂಡು ಅವರನ್ನು ಕೆಲಸದಿಂದ ವಜಾ ಮಾಡಬೇಕಾಗಿ ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮನವಿ ಸಲ್ಲಿಸಿದೆ. ಅಲ್ಲದೇ, ವೆನ್ʼಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗದೀಶ್ ಅವರನ್ನು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ಉಪಾಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ, ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಭೇಟಿ ಮಾಡಿ ಧೈರ್ಯ ತುಂಬಿದರು.
ಮಾಹಿತಿ ನೀಡದ ಪೊಲೀಸ್ ಇಲಾಖೆ :
ಈ ಘಟನೆಯ ಬಗ್ಗೆ ಪುತ್ತೂರು ಡಿವೈಎಸ್ಪಿ ಗಾನ ಪಿ ಕುಮಾರ್ ಅವರಲ್ಲಿ ವಿಚಾರಿಸಿದಾಗ ತನಗೆ ಘಟನೆಯ ಬಗ್ಗೆ ಮಾಹಿತಿ ಇಲ್ಲ ಪರಿಶೀಲಿಸುತ್ತೇನೆ ಎಂದು ತಿಳಿಸಿರುತ್ತಾರೆ. ಇನ್ನೂ ಉಪ್ಪಿನಂಗಡಿ ಠಾಣೆಗೆ ಪ್ರಕರಣದ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ, ಎರಡು ಬಾರಿಯೂ ವಿಚಾರಿಸಿ ತಿಳಿಸುವುದಾಗಿ ತಿಳಿಸಿದ್ದು ಯಾವುದೇ ಸ್ಪಷ್ಟ ಮಾಹಿತಿ ನೀಡಿರುವುದಿಲ್ಲ.