ಕೊಲ್ಲಂ: ಮಲಗಿದ್ದ ಪತ್ನಿಯನ್ನು ನಾಗರಹಾವು ಬಿಟ್ಟು ಹತ್ಯೆ ಮಾಡಿದ ಭಯಾನಕ ಪ್ರಕರಣದ ವಿಚಾರಣೆ ನಡೆಸಿದ ಕೇರಳದ ಜಿಲ್ಲಾ ಸತ್ರ ನ್ಯಾಯಾಲಯವೂ ಆರೋಪಿ ಪತಿಯನ್ನು ತಪಿತಸ್ಥ ಎಂದು ಘೋಷಿಸಿ ತೀರ್ಪು ಪ್ರಕಟಿಸಿದೆ.
ಕಳೆದ ವರ್ಷ ರಾಜ್ಯವನ್ನೇ ಬೆಚ್ಚಿಬೀಳಿಸಿದ ಈ ಘಟನೆ ನಡೆದಿದ್ದು ಅಂಚಲ್ ನಿವಾಸಿ ಎಸ್.ಉತ್ತರ (25) ಎಂಬ ಮಹಿಳೆ ಹಾವು ಕಚ್ಚಿ ಸಾವನ್ನಪ್ಪಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೇರಳದ ಕೊಲ್ಲಂನ ನ್ಯಾಯಾಲಯವುಕ ಪ್ರಕರಣ ನಡೆದ ಕೇವಲ ಒಂದು ಕಾಲು ವರ್ಷದಲ್ಲಿ ವಿಚಾರಣೆ ನಡೆಸಿ ಆಕೆಯ ಪತಿ ಸೂರಜ್ ದೋಷಿ ಎಂದು ತಿಳಿಸಿದೆ. ಬುಧವಾರ ಸೂರಜ್ಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ಕೊಲ್ಲಂನ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹೇಳಿದೆ.
ಹಾವು ಕಚ್ಚಿಸಿ ಕೊಲೆ ಮಾಡಿದರೇ ಯಾರಿಗೂ ಅನುಮಾನ ಬರುವುದಿಲ್ಲ, ಸುಲಭದಲ್ಲಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಇರಾದೆಯಿಂದ ಆರೋಪಿಯೂ ಈ ಕೃತ್ಯ ಎಸಗಿದ್ದ. ಆದರೇ ಪ್ರಕರಣದ ಆಳಕ್ಕೆ ಇಳಿದು ತನಿಖೆ ಮಾಡಿದ ಪೊಲೀಸರು ಕೃತ್ಯ ನಡೆದ 82 ದಿನಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದರು. ಅದಾಗಿ ಕೇವಲ ಒಂದು ವರ್ಷದಲ್ಲಿ ತೀರ್ಪು ಬಂದಿದೆ. ಹಾಗಾಗಿ ಆರೋಪಿಯ ಪ್ಲ್ಯಾನ್ ಪೊಲೀಸರ ತನಿಖೆಯಿಂದ ಉಲ್ಟಾ ಹೊಡೆದಿದೆ
ಏನಿದು ಪ್ರಕರಣ ?
ಕಳೆದ ವರ್ಷ ಮೇ ತಿಂಗಳಿನಲ್ಲಿ ಎಸ್.ಉತ್ತರ ರವರು ಮೃತಪಟ್ಟಿದ್ದು, ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಹಿಳೆಯ ಪೋಷಕರು ಆಕೆಯ ಪತಿಯ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಪತ್ನಿಯನ್ನು ಕೊಲೆ ಆರೋಪದಲ್ಲಿ ಪತಿ ಸೂರಜ್ ನನ್ನು ಬಂಧಿಸಿದ್ದರು. ಆತ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ.

2020 ರ ಫೆಬ್ರವರಿಯಲ್ಲಿ ಹಾವಾಡಿಗ ಸುರೇಶ್ ಎಂಬತನಿಂದ 10 ಸಾವಿರ ರೂ. ಪಾವತಿಸಿ ಹಾವನ್ನು ತಂದಿದ್ದ. ಬಳಿಕ ತನ್ನ ರೂಮ್ನಲ್ಲಿ ಹಾವನ್ನು ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ಅಂದುಕೊಂಡಿದ್ದ. ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಗುಣಮುಖಳಾಗಿ ತವರು ಮನೆಗೆ ತೆರಳಿದ್ದಳು. ಆದರೆ ಎರಡನೇ ಬಾರಿ 2020ರ ಮೇ ತಿಂಗಳಿನಲ್ಲಿ ಸುರೇಶ್ ನಿಂದ ಮತ್ತೆ ಹಾವನ್ನು ಬಾಡಿಗೆ ಪಡೆದು ಪತ್ನಿ ಮಲಗಿದ್ದಾಗ ಅದನ್ನು ಬಿಟ್ಟಿದ್ದಾನೆ. ಎರಡನೇ ಬಾರಿ ಹಾವು ಕಚ್ಚಿದ್ದರಿಂದ ಪತ್ನಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಳಿಯ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ಸಹ ಪೋಷಕರು ದೂರಿನಲ್ಲಿ ಆರೋಪಿಸಿದ್ದರು. ಸೂರಜ್ ಪತ್ನಿಯ ಹತ್ಯೆಗೆ ಮೂರು ತಿಂಗಳು ಕಾಲ ಸಂಚು ರೂಪಿಸಿದ್ದು ತನಿಖೆಯಿಂದ ಬಯಲಾಗಿತ್ತು.

ನ್ಯಾಯಾಲಯದ ತೀರ್ಪಿನ ಕುರಿತಂತೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್, ಸಾಂದರ್ಭಿಕ ಸಾಕ್ಷ್ಯದ ಆಧಾರದಲ್ಲಿ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗಿರುವ ಅಪರೂಪದ ಪ್ರಕರಣವಾಗಿದೆ. ಪೊಲೀಸ್ ತಂಡದ ತನಿಖೆಯನ್ನು ಶ್ಲಾಘಿಸುತ್ತಾ, ವೈಜ್ಞಾನಿಕವಾಗಿ ಮತ್ತು ವೃತ್ತಿಪರವಾಗಿ ತನಿಖೆ ಮಾಡುವುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಈ ಕೊಲೆ ಪ್ರಕರಣವು ಅತ್ಯಂತ ಕಷ್ಟಕರವಾಗಿತ್ತು. ತನಿಖಾ ತಂಡವು ವಿಧಿವಿಜ್ಞಾನ ಪರೀಕ್ಷೆ, ಫೈಬರ್ ಡೇಟಾ ಮತ್ತು ಹಾವಿನ ಡಿಎನ್ಎ ಪರೀಕ್ಷೆ ಸೇರಿ ಮುಂತಾದ ಸಾಂದರ್ಭಿಕ ಸಕ್ಷಿಗಳನ್ನು ಕಲೆ ಹಾಕಿ ಪ್ರಕರಣ ಭೇದಿಸಲು ತುಂಬಾ ಶ್ರಮಿಸಿದೆ ಎಂದು ಅವರು ತಿರುವನಂತಪುರಂನಲ್ಲಿ ಸುದ್ದಿಗಾರರಿಗೆ ತಿಳಿಸಿದರು.