ಹೊಸದಿಲ್ಲಿ: ಕೆಲ ದಿನಗಳ ಹಿಂದೆ ಭಾರತ ಮತ್ತು ಚೀನಾ ಸೈನ್ಯಗಳ ನಡುವೆ ಕೆಲವು ಗಂಟೆಗಳ ಕಾಲ ಮುಖಾಮುಖಿ ಸಂಘರ್ಷ ನಡೆದ ಬಗ್ಗೆ ತಡವಾಗಿ ವರದಿಯಾಗಿದೆ. ಈ ಸಂಘರ್ಷದಲ್ಲಿ ಎರಡೂ ಸೇನೆಗಳಲ್ಲಿ ಯಾವುದೇ ಸಾವು ನೋವು ಉಂಟಾಗಿಲ್ಲ ಎಂದು ರಕ್ಷಣಾ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. ಅರುಣಾಚಲ ವಲಯದಲ್ಲಿ ಕಳೆದ ವಾರ ಈ ಮುಖಾಮುಖಿ ಸಂಘರ್ಷ ನಡೆದಿತ್ತು ಎಂದು ತಿಳಿದು ಬಂದಿದೆ
ಚೀನಾದ ಪಿಎಲ್ಎ ಸೇನಾ ಪಡೆಯ ಸುಮಾರು 200 ಸೈನಿಕರು ಭಾರತದ ಅರುಣಾಚಲ ಪ್ರದೇಶ ಭಾಗದಲ್ಲಿನ ಗಡಿಯೊಳಗೆ ದಾಟಿ ಪ್ರವೇಶಿಸಿದ್ದರು. ಅವರನ್ನು ಭಾರತದ ಸೈನಿಕರು ಕೆಲವು ಸಮಯದವರೆಗೆ ಬಂಧಿಸಿದ್ದರು. ಟಿಬೆಟ್ ಪ್ರದೇಶದಿಂದ ನುಗ್ಗಿದ್ದ ಚೀನೀ ಸೈನಿಕರು, ಭಾರತದ ಭಾಗದೊಳಗೆ ಇರಿಸಲಾಗಿದ್ದ ಬಂಕರ್ಗಳಿಗೆ ಹಾನಿ ಮಾಡಲು ಪ್ರಯತ್ನಿಸಿದ್ದರು. ವಾಸ್ತವ ಗಡಿ ರೇಖೆಯ ಸಮೀಪದ ಬುಮ್ ಲಾ ಮತ್ತು ಯಾಂಗ್ತ್ಸೆ ಗಡಿ ಮಾರ್ಗದ ಮಧ್ಯೆ ಈ ಸಂಘರ್ಷ ನಡೆದಿದೆ.
ಚೀನಾ ಸೈನಿಕರ ಒಳನುಸುಳಿ ಅತಿಕ್ರಮಣ ಮಾಡುವ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಒಳ ಬಂಧನಕ್ಕೆ ಒಳಪಡಿಸಿದೆ. ಉಳಿದವರನ್ನು ಹಿಮ್ಮೆಟ್ಟಿಸಿತ್ತು. ಬಳಿಕ ಸ್ಥಳೀಯ ಸೇನಾ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ವಿವಾದವನ್ನು ಬಗೆಹರಿಸಲಾಗಿದೆ. ಈ ಬಳಿಕ ಚೀನಾ ಸೈನಿಕರನ್ನು ಬಿಡುಗಡೆ ಮಾಡಲಾಗಿದ್ದು, ಗಡಿ ಭಾಗದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ನಿವಾರಿಸಲಾಗಿದೆ.

ಈ ಘಟನೆಯ ಬಗ್ಗೆ ಭಾರತೀಯ ಸೇನೆ ಅಥವಾ ರಕ್ಷಣಾ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಗೊಂಡಿಲ್ಲ. ಘಟನೆ ನಡೆದ ದಿನಾಂಕವೂ ಖಚಿತಗೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ಆಗಸ್ಟ್ 30 ರಂದೇ ಈ ಸಂಘರ್ಷ ನಡೆದಿದೆ. ಸುಮಾರು 100ಕ್ಕೂ ಹೆಚ್ಚು ಚೀನೀ ಸೈನಿಕರು ಬರಾಹೋಟಿ ಪ್ರದೇಶದಲ್ಲಿ ಎಲ್ಎಸಿಯನ್ನು ದಾಟಿ ಐದು ಕಿಮೀ ಒಳಗೆ ನುಸುಳಿದ್ದರು. ಆದರೆ ಅಷ್ಟು ಮಂದಿ ಸೈನಿಕರು ಒಳನುಸುಳಿದ್ದು ಭಾರತದ ಸೇನಾ ಪಡೆಗೆ ಅಚ್ಚರಿ ಮೂಡಿಸಿದೆ.