ಪುತ್ತೂರು: ಸರ್ಕಾರಿ ಉದ್ಯೋಗ ಕೊಡುವುದಾಗಿ ನಂಬಿಸಿ ಕೊಡಗು , ದಕ್ಷಿಣ ಕನ್ನಡ ಸಹಿತ ಹಲವು ಜಿಲ್ಲೆಗಳಲ್ಲಿ ನೂರಾರು ಜನಕ್ಕೆ ಕೋಟ್ಯಾಂತರ ರೂಪಾಯಿ ವಂಚಿಸಿದ ಹಾಗೂ ಜಿಲ್ಲಾಧಿಕಾರಿಗಳ ಸಹಿ ಇರುವ ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ಮೋಸ ಮಾಡಿದ ಬೃಹತ ಜಾಲವೊಂದನ್ನು ಮಡಿಕೇರಿ ಡಿಸಿಐಬಿ ಪೊಲೀಸರು ಸೆ 7 ರಂದು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಒರ್ವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ ಇನ್ನೊರ್ವ ಮೈಸೂರು ಜಿಲ್ಲೆ ನಿವಾಸಿಯಾಗಿದ್ದಾನೆ.
ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಬಂಡಾಜೆ ನಿವಾಸಿ ಪುತ್ತೂರಿನ ಹೊರ ವಲಯ ಸಾಲ್ಮರದಲ್ಲಿ ವಾಸವಿರುವ ಪುನಿತ್ ಕುಮಾರ್(32ವ) ಹಾಗೂ ಮೈಸೂರು ಜಿಲ್ಲೆಯ ಗಾಯತ್ರಿಪುರ ಜ್ಯೋತಿನಗರದ ಅರುಣ್ ಕುಮಾರ್ (30ವ) ಬಂಧಿತರು.
ಗ್ರಾಮ ಲೆಕ್ಕಿಗ ಹುದ್ದೆಗೆ ಜಿಲ್ಲಾಡಳಿತದ ಲಾಂಛನವನ್ನು ಮುದ್ರಿಸಿ ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿ ಜಿಲ್ಲಾಧಿಕಾರಿಗಳೇ ನೇಮಕಾತಿ ಪತ್ರ ಕಳುಹಿಸಿದಂತೆ ನಂಜರಾಯಪಟ್ಟಣದ ಕೆ.ಎಂ.ಯಶ್ವಿತಾ ಎಂಬವರಿಗೆ ಅಂಚೆ ಮೂಲಕ ನಕಲಿ ನೇಮಕಾತಿ ಪತ್ರವನ್ನು ಆರೋಪಿಗಲು ಕಳುಹಿಸಿದ್ದರು. ನಂತರ ಆಕೆ ಬಳಿ ರೂ. 1.50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅನುಮಾನಗೊಂಡ ಯಶ್ವಿತಾ ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು, ಈ ಬಳಿಕ ಜಿಲ್ಲಾಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು.

ಆ ನಂತರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಿರಸ್ತೆದಾರ್ ಪ್ರಕಾಶ್ ರವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಜಿಲ್ಲಾ ಅಪರಾಧ ಪತ್ತೆ ದಳದ ಸಿಬಂದಿಗಳು ಚಂದ್ರಶೇಖರ್, ರಾಜಮಣಿ ಯಾನೆ ಲೋಕೇಶ್, ಮತ್ತು ಗಣಪತಿ ಯಾನೆ ಶಬರೀಶ ಎಂಬವರನ್ನು ಈ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿಸಿದರು. ಈ ನಡುವೆ ವಂಚಕರ ಜಾಲದ ಪ್ರಮುಖ ರೂವಾರಿ ಪುನಿತ್ ತಲೆಮರೆಸಿಕೊಂಡಿದ್ದ.
ಮೂವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದ ತನಿಖಾ ತಂಡಕ್ಕೆ ಮತ್ತೊಂದು ದೊಡ್ಡ ವಂಚನೆ ಬೆಳಕಿಗೆ ಬಂದಿದೆ. ಮಡಿಕೇರಿ ನಿವಾಸಿಯೊಬ್ಬರ ಪುತ್ರನಿಗೆ ಪೊಲೀಸ್ ಉಪ ನಿರೀಕ್ಷಕರ ಹುದ್ದೆ ಕೊಡಿಸುವುದಾಗಿ ನಕಲಿ ನೇಮಕಾತಿ ಪತ್ರ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ವಾರದ ಹಿಂದೆ ದೂರು ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಪ್ರಕರಣದ ತನಿಖೆಯನ್ನು ಸಿಐಡಿ ಬೆಂಗಳೂರು ಘಟಕಕ್ಕೆ ವರ್ಗಾಯಿಸಿದ್ದರು.

ಈ ಪ್ರಕರಣದ ತನಿಖೆಯ ವೇಲೆ ಜಿಲ್ಲಾ ಅಪರಾಧ ಪತ್ತೆ ದಳದವರು ನಡೆಸುತ್ತಿರುವ ಪ್ರಕರಣಕ್ಕೂ ಸಿಐಡಿಯವರು ನಡೆಸುತ್ತಿರುವ ತನಿಖೆಗೂ ಸಾಮ್ಯತೆ ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿ ಪ್ರಕರಣದ ಪ್ರಮುಖ ಆರೋಪಿಯಾದ ಪ್ರಮುಖ ಆರೋಪಿ ಪುತ್ತೂರಿನ ಪುನಿತ್ ಕುಮಾರ್ ಮತ್ತು ಮೈಸೂರಿನ ಅರುಣ್ ಕುಮಾರ್ ಎಂಬವರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿ ಪುನಿತ್ ನಿಂದ ರೂ. 5.50 ಲಕ್ಷ ನಗದು ಮತ್ತು ರೂ. 3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಸಿಐಡಿ ವಶಕ್ಕೆ:
ಬೃಹತ್ ನಕಲಿ ಉದ್ಯೋಗ ಜಾಲ ಬಗೆದಷ್ಟು ಆಳವಿದ್ದು, ನ್ಯಾಯಲಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಸಿಐಡಿ ವಶಕ್ಕೆ ನೀಡಿದೆ. ಕೊಡಗು ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗುಪ್ತ ದಳದ ನಿರೀಕ್ಷಕ ಐ.ಪಿ ಮೇದಪ್ಪ, ಅಪರಾಧ ಪತ್ತೆ ದಳದ ಸಹಾಯಕ ಠಾಣಾಧಿಕಾರಿ ಹಮೀದ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ವಸಂತ, ವೆಂಕಟೇಶ್, ಶರತ್ ರೈ, ಸುರೇಶ್, ಅನಿಲ್ ಕುಮಾರ್, ಸಿಡಿಆರ್ ಘಟಕದ ರಾಜೇಶ್, ಗಿರೀಶ್ ಭಾಗವಹಿಸಿದ್ದರು