ರಾಮಾಯಣ’ ಹಿಂದಿ ಟಿವಿ ಸಿರಿಯಲ್ ನಲ್ಲಿ ರಾವಣನ ಪಾತ್ರಕ್ಕೆ ಜೀವ ತುಂಬಿದ ಅಧ್ಬುತ ಕಲಾವಿದ, ಅಭಿನವ ರಾವಣ ಅರವಿಂದ್ ತ್ರಿವೇದಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಅರವಿಂದ್ ಅವರೊಂದಿಗೆ ‘ರಾಮಾಯಣ’ದ ಸಹನಟರಾಗಿದ್ದ ಸುನೀಲ್ ಲಾಹಿರಿ ದಿವಂಗತ ನಟನ ಚಿತ್ರವನ್ನು ಜಾಲತಾಣದಲ್ಲಿ ಹಂಚಿಕೊಂಡು ಸಾವಿನ ಸುದ್ದಿ ಪ್ರಕಟಿಸಿದ್ದಾರೆ. ಇದು ಇದು ತುಂಬಾ ದುಃಖದ ಸುದ್ದಿ. ನಮ್ಮ ಪ್ರೀತಿಯ ಅರವಿಂದ್ ಭಾಯಿ(ರಾಮಾಯಣದ ರಾವಣ) ಇನ್ನು ಮುಂದೆ ನಮ್ಮೊಂದಿಗಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ನಾನು ನನ್ನ ತಂದೆ ಮತ್ತು ನನ್ನ ಮಾರ್ಗದರ್ಶಕ, ಹಿತೈಷಿ ಮತ್ತು ಸಂಭಾವಿತ ವ್ಯಕ್ತಿಯನ್ನು ಕಳೆದುಕೊಂಡೆ ಎಂದು ಟ್ವೀಟ್ ಮಾಡಿದ್ದಾರೆ. ‘
ಅರವಿಂದ್ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಅವರು ಹಲವು ಬಾರಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಕೆಲವು ವರ್ಷಗಳಿಂದ ಅಸ್ವಸ್ಥರಾಗಿದ್ದರು ಎಂದು ಅರವಿಂದ್ ಅವರ ಸಂಬಂಧಿ ಕೌಸ್ತುಭ್ ತ್ರಿವೇದಿ ಹೇಳಿದ್ದಾರೆ.ಅವರು ಕಳೆದ ತಿಂಗಳು ಮಾತ್ರ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಮಂಗಳವಾರ ರಾತ್ರಿ 9:30 ರ ಸುಮಾರಿಗೆ ಮುಂಬೈನ ಕಾಂಡಿವಲಿ ನಿವಾಸದಲ್ಲಿ ಹೃದಯಾಘಾತಕ್ಕೊಳಗಾದರು. ಅಂತ್ಯಸಂಸ್ಕಾರವನ್ನು ಬುಧವಾರ ನಡೆಸಲಾಗುವುದು ಎಂದು ಮಾಹಿತಿ ದೊರೆತಿದೆ.
ರಮಾನಂದ ಸಾಗರ್ ನಿರ್ದೇಶಿಸಿ ಮತ್ತು ನಿರ್ಮಿಸಿದ್ದ ರಾಮಾಯಣ 1987 ರಲ್ಲಿ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಕಳೆದ ವರ್ಷ ಲಾಕ್ ಡೌನ್ ಘೋಷಿಸಿದ ನಂತರ ಮರು ಪ್ರದರ್ಶನ ಕಂಡಿತ್ತು.

ಅರವಿಂದ್ ತ್ರಿವೇದಿ ಅಂದ್ರೆ ರಾವಣ ಎಂದೇ ಗುರುತಿಸುತ್ತಿದ್ದರು. ಅಷ್ಟರ ಮಟ್ಟಿಗೆ ಈ ಪಾತ್ರ ಅವರಿಗೆ ಯಶಸ್ಸು ತಂದುಕೊಟ್ಟಿತ್ತು. ಗುಜರಾತಿ ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ಅರವಿಂದ್ ತ್ರಿವೇದಿ ಹಿಂದೆಯೊಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು. 1991ರ ಲೋಕಸಭೆ ಚುನಾವಣೆಯಲ್ಲಿ ಸಬರಕಂಠ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು.
ಕೇವಲ ರಾಮಾಯಣ ಮಾತ್ರವಲ್ಲ, ವಿಕ್ರಮ್ ಔರ್ ಬೇತಾಳ್ ಧಾರಾವಾಹಿಯಲ್ಲೂ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಹಿಂದಿ ಮತ್ತು ಗುಜರಾತಿ ಸೇರಿದಂತೆ 300 ಚಲನಚಿತ್ರಗಳಲ್ಲಿ ಸಾಮಾಜಿಕ ಮತ್ತು ಪೌರಾಣಿಕ ಪಾತ್ರಗಳ ಮೂಲಕ ಅರವಿಂದ್ ತ್ರಿವೇದಿ ಹೆಚ್ಚು ಗಮನ ಸೆಳೆದಿದ್ದರು.

ರಮಾನಂದ್ ಸಾಗರ್ ನಿರ್ದೇಶನದ ರಾಮಾಯಣ್, ವಿಕ್ರಮ್ ಔರ್ ಬೇತಾಳ್, ದೇಶ್ ರೇ ಜೋಯಾ ದಾದಾ ಪರದೇಶ ಜೋಯಾ’ ಅಂತಹ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. 2002ರಲ್ಲಿ ಕೇಂದ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ತ್ರಿವೇದಿ ಗುಜರಾತಿ ಸಿನಿಮಾ ಇಂಡಸ್ಟ್ರಿಯಲ್ಲಿ ಸುಮಾರು 40 ವರ್ಷದಿಂದ ತೊಡಗಿಕೊಂಡಿದ್ದರು. ಇವರ ನಟನೆಗಾಗಿ ಏಳು ಬಾರಿ ಗುಜರಾತ್ ಸರ್ಕಾರ ನೀಡುವ ಅತ್ಯುನ್ನತ ಸಿನಿಮಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ