ಬಿಗ್ ನ್ಯೂಸ್
ಪುತ್ತೂರು : 2 ಕೋಟಿ ವೆಚ್ಚದ ಆಕ್ಸಿಜನ್ ಉತ್ಪಾದನಾ ಘಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ರವರಿಂದ ಅ.6 ರಂದು ಉದ್ಘಾಟಣೆ: ಶಾಸಕ ಮಠಂದೂರು | ಒಂದೇ ದಿನ ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಮೂರು ಅಕ್ಸಿಜನ್ ಘಟಕ ಲೋಕಾರ್ಪಣೆಯ ದಾಖಲೆ
ಪುತ್ತೂರು: ಪ್ರತಿಷ್ಟಿತ ಕ್ಯಾಂಪ್ಕೋ ಸಂಸ್ಥೆ ವತಿಯಿಂದ ರೂ. 1.84 ಕೋಟಿ ವೆಚ್ಚದಲ್ಲಿ ಪುತ್ತೂರು ಸರಕಾರಿ ಆಸ್ಫತ್ರೆಯಲ್ಲಿ ನಿರ್ಮಾಣಗೊಂಡಿರುವ ಆಕ್ಸಿಜನ್ ಉತ್ಪಾದನಾ ಘಟಕವು ಅ.6 ರಂದು ಉಧ್ಘಾಟನೆಗೊಳ್ಳಲಿದೆ. ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಈ ಘಟಕವನ್ನು ಉದ್ಘಾಟಿಸಲಿದ್ದಾರೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಮಂಗಳವಾರ ಅವರು ಪುತ್ತೂರು ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ನೂತನ ಘಟಕವು ನಿಮಿಷಕ್ಕೆ 450 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಸಾಮಾರ್ಥ್ಯ ಹೊಂದಿದೆ. 63 ಜಂಬೋ ಸಿಲಿಂಡರ್ಗಳನ್ನು ಭರ್ತಿ ಮಾಡುವಷ್ಟು ಅಮ್ಲಜನಕವನ್ನು ಅದು ದಿನವೊಂದರಲ್ಲಿ ಉತ್ಫಾದಿಸಲಿದೆ. ದಿನವೊಂದರ ಗರಿಷ್ಟ 100 ರೋಗಿಗಳಿಗೆ ಬೇಕಾದಷ್ಟು ಆಮ್ಲಜನಕವನ್ನು ಪೂರೈಸುವ ಸಾಮಾರ್ಥ್ಯವನ್ನು ಈ ಘಟಕ ಹೊಂದಿದೆ ಎಂದು ಶಾಸಕರು ವಿವರಿಸಿದರು.
ಕೊರೊನಾ ಸಂಕಷ್ಟ ಕಾಲದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಕ್ಸಿಜನ್ ಬೇಡಿಕೆ ಕಂಡು ಬಂದ ಹಿನ್ನಲೆಯಲ್ಲಿ ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲೂ ಅಮ್ಲಜನಕ ಘಟಕ ಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು. ಭವಿಷ್ಯದಲ್ಲಿ ಪುತ್ತೂರು ತಾಲೂಕಿನಲ್ಲಿ ರೋಗಿಗಳಿಗೆ ಅತ್ಯವಶ್ಯವಾಗಿರುವ ಅಮ್ಲಜನಕದ ಕೊರತೆ ಉಂಟಾಗಬಾರದು ಎಂಬ ಮುಂದಾಲೋಚನೆಯಿಂದ ಈ ನಿಟ್ಟಿನಲ್ಲಿ ಕಾರ್ಯೋನ್ಮೂಖರಾದಗ ಪುತ್ತೂರಿನ ಪ್ರತಿಷ್ಟಿತ ಬಹುರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ಇದನ್ನು ಪುತ್ತೂರು ತಾಲೂಕು ಆಸ್ಫತ್ರೆಯಲ್ಲಿ ಸ್ಥಾಪಿಸಲು ಸಂಪೂರ್ಣ ಸಹಕಾರ ನೀಡಿತ್ತು ಎಂದ ಶಾಸಕರು ಪುತ್ತೂರಿಗೆ ಅತೀ ಅಗತ್ಯವಾಗಿದ್ದ ಈ ವ್ಯವಸ್ಥೆಯನ್ನು ಒದಗಿಸಿಕೊಟ್ಟ ಕ್ಯಾಂಪ್ಕೋದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.
ಮೂರು ಅಕ್ಸಿಜನ್ ಘಟಕ ಲೋಕಾರ್ಪಣೆಯ ದಾಖಲೆ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಸರಕಾರಿ ಆಸ್ಪತ್ರೆ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅ. 6ರಂದು ಏಕಕಾಲದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳು ಉದ್ಘಾಟನೆಗೊಳ್ಳಲಿದೆ. ಇದು ಪುತ್ತೂರು ವಿಧಾನಸಭಾ ಕ್ಷೇತ್ರದ ದಾಖಲೆಯಾಗಿದೆ. ಈ ಮೂರು ಆಕ್ಸಿಜನ್ ಉತ್ಪಾದನಾ ಘಟಕಗಳು ದಾನಿಗಳ ನೆರವಿನಿಂದ ನಿರ್ಮಾಣಗೊಂಡಿದೆ ಎಂದು ಶಾಸಕರು ವಿವರಿಸಿದರು.
ಸಚಿವ ಡಾ. ಕೆ. ಸುಧಾಕರ್ ಪ್ರಥಮ ಭೇಟಿ
ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅ. 6 ರಂದು ಇದೇ ಮೊದಲ ಬಾರಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಯೂ ಅ.6 ರಂದು ನಡೆಯಲಿದ್ದೂ ಮಧ್ಯಾಹ್ನ 12 ಗಂಟೆಗೆ ನೆರವೇರಿದಲಿದೆ.
ನೆರವೇರಿಸಿ ಬಳಿಕ ಮಧ್ಯಾಹ್ನ ೨ಗಂಟೆಗೆ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದರೊಂದಿಗೆ ವೆಬಿನಾರ್ ಮೂಲಕ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸಚಿವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಪುತ್ತೂರು ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಹಾಗೂಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಬಿಜೆಪಿಯ ಹಿರಿಯ ಮುಂದಾಳು ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಮುಖರಾದ ಜಯಶ್ರೀ ಶೆಟ್ಟಿ, ಯುವರಾಜ ಪೆರಿಯತ್ತೋಡಿ, ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.
ಬಿಗ್ ನ್ಯೂಸ್
Big Breaking : ವಿಟ್ಲ : ನಿರ್ಮಾಣ ಹಂತದ ಸೇತುವೆ ಕುಸಿದು 7ಮಂದಿಗೆ ಗಾಯ
ವಿಟ್ಲ: ಪುಣಚ ಗ್ರಾಮದ ಬರೆಂಜ – ಕುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 7ಮಂದಿಗೆ ಗಾಯವಾಗಿದೆ.
ಸೇತುವೆಯ ಕೊನೆಯ ಹಂತದ ಕಾರ್ಯವಾಗಿ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದ ಸಮಯ ತಳಭಾಗದಿಂದ ನೀಡಿದ ರಾಡ್ ಜಾರಿದ ಹಿನ್ನಲೆಯಲ್ಲಿ ಮೇಲ್ಭಾಗದ ಸಂಪೂರ್ಣ ಕಾಂಕ್ರೀಟ್ ಕುಸಿದು ಬಿದ್ದಿದೆ.
ಸೇತುವೆ ಸಾಮಾಗ್ರಿಯ ನಡುವಿನಲ್ಲಿ ಓರ್ವ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು, ಆರು ಮಂದಿಯನ್ನು ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. . ಸ್ಥಳದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.
ಬಿಗ್ ನ್ಯೂಸ್
Big Breaking: ಬಂಟ್ವಾಳ: ಹಿಂದೂ ಮುಖಂಡನ ಕುತ್ತಿಗೆಗೆ ಚೂರಿ ಇರಿತ – ಜೀವನ್ಮರಣ ಹೋರಾಟ : ಒಟ್ಟಿಗೆ ರಿಕ್ಷಾದಲ್ಲಿ ತೆರಳುತ್ತಿದ್ದಾಗಲೇ ಆಪ್ತ ಸ್ನೇಹಿತನಿಂದ ಕೃತ್ಯ
ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹಿಂದೂ ಯುವಸೇನೆಯ ಮುಖಂಡ, ಉದ್ಯಮಿಯಾಗಿರುವ ಪುಷ್ಪರಾಜ್ ಎಂಬವರಿಗೆ ಚೂರಿ ಇರಿತವಾಗಿದೆ. ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಘಟನೆ ನಡೆದಿದ್ದು,ಚೂರಿ ಇರಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.
ರಿಕ್ಷಾದಲ್ಲಿ ಜೊತೆಯಾಗಿ ತೆರಳುತ್ತಿದ್ದಾಗಲೇ ಚೂರಿಯಿಂದ ಕುತ್ತಿಗೆಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಸ್ನೇಹಿತ ರವಿ ಎಂಬಾತ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ಆರೋಪಿ ರವಿ ಚೂರಿಯಿಂದ ಇರಿದು ಮತ್ತೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಗ್ ನ್ಯೂಸ್
Narendra Modi Mangalore | ಮಂಗಳೂರಿಗೆ ಆಗಮಿಸುವ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ : ದಕ್ಷಿಣ ಕನ್ನಡಕ್ಕೆ ಕೊಟ್ಟದೆಷ್ಟು..? ಕಿತ್ತುಕೊಂಡದ್ದೆಷ್ಟು..? ಸರಣಿ ಪ್ರಶ್ನೆ ಕೇಳಿದ ಸಿಎಂ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರ (Narendra Modi Mangalore) ಪರ ಪ್ರಚಾರಕ್ಕೆ ಮಂಗಳೂರಿಗೆ ಇಂದು ರಾತ್ರಿ ಆಗಮಿಸಲಿದ್ದಾರೆ.
ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯ ಪ್ರತಿಮೆಗೆ ಹಾರಾರ್ಪಣೆ ಮಾಡಿ ರಾತ್ರಿ 7.30 ರಿಂದ ರೋಡ್ ಶೋ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದೆಷ್ಟು? ಕಿತ್ತುಕೊಂಡದ್ದೆಷ್ಟು? ಎಂದು ಸರಣಿ ಪ್ರಶ್ನೆ ಕೇಳಿದ್ದಾರೆ.
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ದಕ್ಷಿಣ ಕನ್ನಡಕ್ಕೆ ನಿಮಗೆ ಸ್ವಾಗತ. ಕಳೆದ 33 ವರ್ಷಗಳಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರು ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಅದಕ್ಕಿಂತ ಹಿಂದಿನ 39 ವರ್ಷ ಈ ಕ್ಷೇತ್ರವನ್ನು ನಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಕಳೆದ 33 ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ನೀವು ಕೊಟ್ಟದ್ದೆಷ್ಟು? ಎನ್ನುವ ಲೆಕ್ಕ ಕೊಡಿ, ಈ ಜಿಲ್ಲೆಯಿಂದ ಏನು ಕಿತ್ತುಕೊಂಡಿದ್ದೀರಿ ಎನ್ನುವ ಲೆಕ್ಕವನ್ನು ನಾನು ಕೊಡುತ್ತೇನೆ.
ಬಜ್ಪೆಯ ವಿಮಾನ ನಿಲ್ದಾಣದ ಕನಸು ಕಂಡವರು ಉಳ್ಳಾಲ ಶ್ರೀನಿವಾಸ ಮಲ್ಯ. ಮಲ್ಯರ ಕನಸನ್ನು ನನಸು ಮಾಡಿದವರು ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ. ಶ್ರೀನಿವಾಸ ಮಲ್ಯರ ಪ್ರಯತ್ನದ ಫಲವಾದ ಈ ವಿಮಾನ ನಿಲ್ದಾಣವನ್ನು ನೀವು ನಿಮ್ಮ ಉದ್ಯಮಿ ಮಿತ್ರ ಗೌತಮ ಅದಾನಿ ಅವರಿಗೆ ನೀಡಿದಿರಿ. ಈಗ ಹೇಳಿ, ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದೆಷ್ಟು? ಕಿತ್ತುಕೊಂಡದ್ದೆಷ್ಟು?
ನವಮಂಗಳೂರು ಬಂದರು ಕೂಡಾ ಸಂಸದ ಯು.ಶ್ರೀನಿವಾಸ ಮಲ್ಯ ಅವರ ಕನಸಾಗಿತ್ತು. ಮಲ್ಯರ ಮಾತಿಗೆ ಮನ್ನಣೆ ಕೊಟ್ಟು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ಪಣಂಬೂರಿನಲ್ಲಿ ಬಂದರಿಗೆ ಚಾಲನೆ ನೀಡಿದರು. ಈ ಬಂದರನ್ನು ಕೂಡಾ ಉದ್ಯಮಿ ಮಿತ್ರ ಅದಾನಿಯವರಿಗೆ ಹಂತಹಂತವಾಗಿ ಮಾರಲು ಹೊರಟಿದ್ದೀರಿ. ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದೆಷ್ಟು?
ಬಜ್ಪೆ ವಿಮಾನ ನಿಲ್ದಾಣ ಮತ್ತು ಎನ್ಎಂಪಿಟಿ ಮಾತ್ರವಲ್ಲ ಇಲ್ಲಿನ ರೀಜನಲ್ ಎಂಜನಿಯರಿಂಗ್ ಕಾಲೇಜ್, ಎಂಸಿಎಫ್, ಎಂಆರ್ಪಿಎಲ್, ಬೈಕಂಪಾಡಿ ಕೈಗಾರಿಕ ಪ್ರದೇಶ, ರಾಷ್ಟ್ರೀಯ ಹೆದ್ದಾರಿ 66 ಮಾತ್ರವಲ್ಲ ಕರಾವಳಿಯಲ್ಲಿ ರಕ್ತರಹಿತ ಕ್ರಾಂತಿಯನ್ನೇ ಉಂಟು ಮಾಡಿರುವ ಭೂ ಸುಧಾರಣೆ ಕಾಯ್ದೆ ಕೂಡಾ ಜಾರಿಗೆ ಬಂದದ್ದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಾಲದಲ್ಲಿ. ಪ್ರಧಾನಿಯಾಗಿ ನಿಮ್ಮ ಹತ್ತು ವರ್ಷದ ಕಾಲದಲ್ಲಿ ಇಲ್ಲವೇ ನಿಮ್ಮ ಸಂಸದರು ಈ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ 33 ವರ್ಷಗಳ ಅವಧಿಯಲ್ಲಿ ಈ ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದೆಷ್ಟು? ಕಿತ್ತುಕೊಂಡದ್ದೆಷ್ಟು?
ಖ್ಯಾತ ಉದ್ಯಮಿ ಹಾಜಿ ಅಬ್ದುಲ್ಲಾ ಅವರು 1906ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಿಸಿದರು. ನೀವು ಇದನ್ನು ಯೂನಿಯನ್ ಬ್ಯಾಂಕ್ ಜೊತೆ ವಿಲೀನಗೊಳಿಸಿದಿರಿ.
ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರು ಟಿಎಂಎ ಪೈ, ಉಪೇಂದ್ರ ಪೈ.
ವಾಮನ್ ಕುಡ್ವಾ ಅವರು 1925ರಲ್ಲಿ ಸ್ಥಾಪಿಸಿದ್ದು ಸಿಂಡಿಕೇಟ್ ಬ್ಯಾಂಕ್. ಲಾಭದಲ್ಲಿದ್ದ ಈ ಬ್ಯಾಂಕನ್ನು ಕೆನರಾ ಬ್ಯಾಂಕ್ ಜೊತೆ ವಿಲೀನಗೊಳಿಸಿದಿರಿ. ದಕ್ಷಿಣ ಕನ್ನಡದ ಉದ್ಯಮಿ ಮತ್ತು ಸಮಾಜ ಸೇವಕ ರೈತರಿಗಾಗಿಯೇ ವಿಜಯ ದಶಮಿಯ ದಿನವೇ 1931ರಲ್ಲಿ ಸ್ಥಾಪಿಸಿದ್ದು ವಿಜಯಾ ಬ್ಯಾಂಕ್. ಇದನ್ನು ನಿಮ್ಮ ರಾಜ್ಯದ ನಷ್ಟದಲ್ಲಿದ್ದ ಬರೋಡಾ ಬ್ಯಾಂಕ್ ಜೊತೆ ವಿಲೀನಗೊಳಿಸಿದಿರಿ. ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು?
ಮೂರು ದಶಕಗಳಿಂದ ನಿಮ್ಮ ಪಕ್ಷವನ್ನು ಗೆಲ್ಲಿಸುತ್ತಾ ಬಂದಿರುವ ದಕ್ಷಿಣ ಕನ್ನಡದ ಜನತೆಯ ಬಗ್ಗೆ ಯಾಕೆ ನಿಮಗೆ ಈ ಪರಿಯ ದ್ವೇಷ? ಈ ಜಿಲ್ಲೆಯಲ್ಲಿ ಬಹುಸಂಖ್ಯಾತ ಸಮುದಾಯವಾದ ಬಿಲ್ಲವರ ಆರಾಧ್ಯಗುರು ಬ್ರಹ್ಮಶ್ರೀ ನಾರಾಯಣ ಗುರುಗಳು. ಗಣರಾಜ್ಯೋತ್ಸವದ ಪರೇಡ್ ನಲ್ಲಿ ರಾಜ್ಯ ಸರ್ಕಾರ ನಾರಾಯಣ ಗುರುಗಳ ಟ್ಯಾಬ್ಲೋ ಪ್ರದರ್ಶನ ಮಾಡಲು ಹೊರಟರೆ ಅದಕ್ಕೆ ನೀವು ಅಡ್ಡಗಾಲು ಹಾಕಿದಿರಿ. ನಾರಾಯಣ ಗುರುಗಳಿಗೆ ಹಿಂದೂ ಧರ್ಮದ ಗುರುಗಳ ಪಕ್ಕದಲ್ಲಿ ಜಾಗ ಇಲ್ಲವೇ?
ನಾರಾಯಣ ಗುರುಗಳಿಗೆ ನಿಮ್ಮ ನೇತೃತ್ವದ ಕೇಂದ್ರ ಸರ್ಕಾರ ಅನ್ಯಾಯ ಮಾಡಿದ್ದು ಸಾಕಾಗಲಿಲ್ಲ ಎಂದೋ ಏನೋ? ಯಾರೋ ತಲೆತಿರುಕನ ನೇತೃತ್ವದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ನೇಮಿಸಿದ್ದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಶಾಲಾ ಪಠ್ಯದಲ್ಲಿದ್ದ ನಾರಾಯಣ ಗುರುಗಳ ಪಾಠವನ್ನೂ ಕಿತ್ತು ಹಾಕಿತು. ನಾರಾಯಣ ಗುರುಗಳಿಗೆ ಮಾಡಿರುವ ಅಪಮಾನದ ವಿರುದ್ಧ ಜನ ಸಿಡಿದೆದ್ದು ಪ್ರತಿಭಟನೆ ನಡೆಸಿದರೂ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದಕ್ಕೆ ಲಕ್ಷ್ಯವನ್ನೇ ಕೊಡಲಿಲ್ಲ. ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು?
ಅಂತಿಮವಾಗಿ ನಿಮ್ಮ 33 ವರ್ಷಗಳ ಅತ್ಯಂತ ಮಹತ್ವದ ಕೊಡುಗೆ- ಜಾತಿ-ಧರ್ಮಗಳ ಅಂತರವನ್ನು ಮೀರಿ ಒಂದು ಕುಟುಂಬದಂತೆ ಸೌಹಾರ್ದತೆಯಿಂದ ಬದುಕುತ್ತಿದ್ದ ಜಿಲ್ಲೆಯನ್ನು ‘ಕೋಮುವಾದದ ಪ್ರಯೋಗಶಾಲೆ’’ಯನ್ನಾಗಿ ಪರಿವರ್ತಿಸಿದ್ದು. ಇದರ ಫಲವಾಗಿ ಅತ್ಯಂತ ಹೆಚ್ಚು ಸಾಕ್ಷರತೆ ಇರುವ ಮತ್ತು ಬುದ್ದಿವಂತರ ಜಿಲ್ಲೆ ಎಂದೇ ಖ್ಯಾತಿ ಪಡೆದಿದ್ದ ಜಿಲ್ಲೆ ಇಂದು ಕೋಮುವಾದದ ಕಳಂಕ ಹಚ್ಚಿಕೊಂಡು ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು?