ದೆಹಲಿ: ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಫತ್ರೆಗೆ ಸೇರಿಸಲು ಸಾರ್ವಜನಿಕರು ಹಿಂದು ಮುಂದು ನೋಡುವುದು ಸರ್ವೆ ಸಾಮಾನ್ಯ. ಬಳಿಕ ಪೊಲೀಸ್ ಠಾಣೆ , ಕೋರ್ಟು ಅಂತಾ ಓಡಾಡಬೇಕು ಅನ್ನುವುದೇ ಹಿಂಜರಿಕೆಗೆ ಪ್ರಮುಖ ಕಾರಣ. ಹೀಗಾಗಿ ಸರಕಾರ ಜನರ ಹಿಂಜರಿಕೆಯನ್ನು ಹೋಗಲಾಡಿಸಲು ಕಾನೂನಿನಲ್ಲಿ ಮಾರ್ಪಾಡು ತಂದಿತ್ತು. ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದವರನ್ನು ಪೊಲೀಸರು ತನಿಖೆ ನಡೆಸಲ್ಲ, ಕೋರ್ಟ್ ಗೆ ಅಲೆಯಬೇಕಾಗಿಲ್ಲ ಎನ್ನುವ ಬದಲಾವಣೆ ಮಾಡಲಾಗಿತ್ತು.
ಹಾಗಿದ್ದೂ ಗಾಯಾಳುಗಳ ವಿಚಾರದಲ್ಲಿ ಜನರ ಧೋರಣೆಯಲ್ಲಿ ದೊಡ್ಡ ಬದಲಾವಣೆಯಾಗಿಲ್ಲ. ಹೀಗಾಗಿ ಜನರ ಮಾನವೀಯ ಕಾರ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯನ್ನಟ್ಟಿದೆ. ಗಾಯಾಳುಗಳನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿ ನೆರವಾಗುವವರಿಗೆ ಅದು ನಗದು ಬಹುಮಾನವನ್ನು ಘೋಷಿಸಿದೆ.
ಈ ನಗದು ಬಹುಮಾನದ ಯೋಜನೆಯಡಿ, ಜಿಲ್ಲಾಡಳಿತವು ಒಬ್ಬ ಉತ್ತಮ ನಾಗರಿಕನಿಗೆ ಒಂದು ವರ್ಷದಲ್ಲಿ ಗರಿಷ್ಠ ಐದು ಬಾರಿ ರೂ. 5000 ನಗದು ಬಹುಮಾನವನ್ನು ನೀಡಲಿದೆ. ಪ್ರತಿ ವರ್ಷ ನಡೆಯುವ ಸರ್ಕಾರಿ ಅಭಿನಂದನಾ ಸಮಾರಂಭದಲ್ಲಿ ಅವರಿಗೆ 1 ಲಕ್ಷ ರೂ. ನಗದು ನೀಡಲಾಗುವುದು. ಈ ಯೋಜನೆ ಮಾರ್ಚ್ 2026 ರವರೆಗೆ ಜಾರಿಯಲ್ಲಿ ಇರಲಿದೆ. ಕಳೆದ ವರ್ಷವೇ ಸರ್ಕಾರ 5 ಸಾವಿರ ರೂವರೆಗೆ ಬಹುಮಾನ ಘೋಷಿಸಿತ್ತು. ಇದೀಗ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದರಲ್ಲಿ ಒಂದು ಲಕ್ಷ ರೂ.ವರೆಗಿನ ಬಹುಮಾನ ಘೋಷಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ?
ಅಪಘಾತವಾದ ಒಂದು ಗಂಟೆಯ ಒಳಗೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರೆ ಅಂಥ ಒಬ್ಬ ವ್ಯಕ್ತಿಗೆ ಒಂದು ಸಮಯದಲ್ಲಿ 5000 ರೂವರೆಗೆ ಧನಸಹಾಯ ಸಿಗಲಿದೆ. ಒಂದು ವರ್ಷದಲ್ಲಿ ಗರಿಷ್ಠ ಐದು ಬಾರಿ ಒಬ್ಬ ವ್ಯಕ್ತಿಗೆ ಈ ಪ್ರೋತ್ಸಾಹಕರ ಬಹುಮಾಣ ನೀಡಲಾಗುವುದು. ಅಂದರೆ ಒಬ್ಬ ವ್ಯಕ್ತಿ ವರ್ಷಕ್ಕೆ 25 ಸಾವಿರ ರೂವರೆಗೆ ನಗದು ಪಡೆಯಬಹುದು.

ಇದೇ ಅಕ್ಟೋಬರ್ 15ರಿಂದ ಮಾರ್ಚ್, 2026 ರವರೆಗೆ ಈ ಯೋಜನೆ ಜಾರಿಯಲ್ಲಿ ಇರುತ್ತದೆ. ನಗದು ಯೋಜನೆಗೆ ರಾಜ್ಯ ಸರ್ಕಾರಗಳು ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ತೆರೆಯುತ್ತವೆ. ಈ ರೀತಿ ಸಹಾಯ ಮಾಡಿದ ಬಳಿಕ ಅಂಥ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ನೀಡಿದರೆ, ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿ ಅಕ್ನಾಲೆಡ್ಜ್ಮೆಂಟ್ ನೀಡುತ್ತಾರೆ. ಜಿಲ್ಲಾಡಳಿತ ಗಾಯಾಳುವಿಗೆ ಸಹಾಯ ಮಾಡಿದ ನಾಗರೀಕನ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಘಟನೆ ಮಾಹಿತಿ ಇತ್ಯಾದಿಗಳನ್ನು ದಾಖಲಿಸಲಿದೆ. ಇದಲ್ಲದೆ, ಸ್ಥಳೀಯ ಪೊಲೀಸ್ ಅಥವಾ ಆಸ್ಪತ್ರೆ-ಆಘಾತ ಕೇಂದ್ರದ ಆಡಳಿತವು ವ್ಯಕ್ತಿಯ ಬಗ್ಗೆ ಈ ಮಾಹಿತಿಯನ್ನು ಅಪ್ಲೋಡ್ ಮಾಡಲು ಸಾಧ್ಯವಾಗಲಿದೆ.